`ಯೋಗ’ ಯಾವುದೇ ಒಂದು ಧರ್ಮಕ್ಕೆ ಸೀಮಿತ ಆಗುವುದು ಬೇಡ

`ಯೋಗ’ ಯಾವುದೇ ಒಂದು ಧರ್ಮಕ್ಕೆ ಸೀಮಿತ ಆಗುವುದು ಬೇಡ

ಚಿತ್ರದುರ್ಗ ಬೃಹನ್ಮಠದ ಯೋಗ ನಡಿಗೆ ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

ಚಿತ್ರದುರ್ಗ, ಜೂ. 19 – ವ್ಯಕ್ತಿಯ ಮನಸ್ಸು ಮತ್ತು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವ   ಯೋಗವನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಹೇಳಿದರು.

ನಗರದ ಶ್ರೀ ಮುರುಘ ರಾಜೇಂದ್ರ ಬೃಹನ್ಮಠದ ವತಿಯಿಂದ ನಡೆದ ಯೋಗ ನಡಿಗೆಯಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಒತ್ತಡದ ಬದುಕಿ ನಿಂದ  ಬಿಡುಗಡೆ ಹೊಂದಲು ಒಂದಷ್ಟು ಸಮಯ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಬದುಕಬೇಕಿದೆ. ಯೋಗವು ಆರೋಗ್ಯಕರ ದೇಹದಲ್ಲಿ, ಆರೋಗ್ಯಕರ ಮನಸ್ಸಿನ ಗುರಿ  ಹೊಂದುವುದು ಜೀವನ ವಿಧಾನವಾಗಿದೆ. ಇಂದಿನ ಯೋಗ ನಡಿಗೆಗೆ ಒಂದಷ್ಟು ಅರ್ಥ ಸಿಕ್ಕಿದೆ ಎಂದರು.

ಶ್ರೀ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ  ಡಾ. ಬಸವಕುಮಾರ ಸ್ವಾಮಿಗಳು ಮಾತ ನಾಡಿ,  ಯೋಗವೆಂದರೆ ದೇಹವನ್ನು ಬಗ್ಗಿಸುವುದು ಅಥವಾ ತಿರುಗಿಸುವುದು ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರವಲ್ಲ. ನಮ್ಮ ವಾಸ್ತವವನ್ನು ನೋಡುವ ಮತ್ತು ಅನುಭವಿಸುವ ಸ್ಥಿತಿಗೆ ನಮ್ಮನ್ನು ತರಲು ಇದೊಂದು ವಿಧಾನವಾಗಿದೆ.   ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆತಂಕ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಆದರ್ಶೀಕರಿಸುವಲ್ಲಿ   ನೆರವಾಗುತ್ತದೆ ಎಂದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಪ್ರಪಂಚಕ್ಕೆ ಮಾದರಿಯಾದುದು ಈ ಯೋಗ. ಪ್ರಪಂಚದಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಪೂಜ್ಯರ ನೇತೃತ್ವದಲ್ಲಿ ಯೋಗ ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ನಡಿಗೆ ಮಾಡಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಇತರರಿಗೆ ಪ್ರೇರಣೆ ಆಗಿದೆ ಎಂದರು. 

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಯೋಗ ಭಾರತದ ಸಂಸ್ಕೃತಿಯ ಪ್ರತೀಕ. ದೇಹ ಮತ್ತು ಮನಸ್ಸು ಒಂದಾಗುವ ಪ್ರಕ್ರಿಯೆಯೇ ಯೋಗ. ಅದಕ್ಕೆ ಇಂದಿನ ಯೋಗ ನಡಿಗೆಯೇ ಸಾಕ್ಷಿ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ ತಾಜ್‌ಪೀರ್ ಮಾತನಾಡಿ, ಯೋಗ ಒಂದು ದಿನಕ್ಕೆ ಸೀಮಿತ ಆಗಬಾರದು. ನಿತ್ಯವೂ ಇಂತಹ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಲಿದೆ. ಚಟಗಳು ನಮ್ಮನ್ನು ಅನಾರೋಗ್ಯದ ಕಂದಕಕ್ಕೆ ತಳ್ಳುತ್ತವೆ. ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಇದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದು ಎಂದರು. ಕೆಡಿಪಿ ಸದಸ್ಯ ಕೆ.ಸಿ. ನಾಗರಾಜು ಮಾತನಾಡಿದರು.

ಇದಕ್ಕು ಮುನ್ನ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪೂರ್ವಭಾವಿಯಾಗಿ ಆಯೋಜಿಸಿದ್ದ ಯೋಗ ನಡಿಗೆ (ಜಾಥಾ)ಯನ್ನು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ನಗಾರಿ ಭಾರಿಸುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು. 

ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಗುರುಮಠಕಲ್ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ,    ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಬಸವ ನಾಗಿದೇವ ಸ್ವಾಮೀಜಿ, ಸಾಯಿಗಾಂವ ಶ್ರೀ ಶಿವಾನಂದ ಸ್ವಾಮೀಜಿ,   ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಬಳ್ಳೇಕಟ್ಟೆ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ತೆಲಸಂಗ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಸಂಸದ ಗೋವಿಂದ ಎಂ.ಕಾರಜೋಳ, ನಗರಸಭೆ ಆಯುಕ್ತರಾದ ಶ್ರೀಮತಿ ರೇಣುಕ, ಕೆಇಬಿ ಷಣ್ಮುಖಪ್ಪ, ಸುರೇಶ್‍ಬಾಬು, ಸಿದ್ದವ್ವನಹಳ್ಳಿ ಪರಮೇಶ್, ಡಿ.ಎಸ್. ಮಲ್ಲಿಕಾರ್ಜುನ್, ಪಿ.ವೀರೇಂದ್ರಕುಮಾರ್,  ರಾಜಕೀಯ ಧುರೀಣರು, ಅಧಿಕಾರಿಗಳು, ವಿವಿಧ ಸಮಾಜಗಳ ಸಂಘ-ಸಂಸ್ಥೆಗಳ ಮುಖಂಡರು, ಶ್ರೀಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ-ಕಾಲೇಜುಗಳ ನೌಕರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಾಥಾವು ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಬೆಳಗ್ಗೆ 7.30ಕ್ಕೆ ಆರಂಭಗೊಂಡು ಒನಕೆ ಓಬವ್ವ ಸರ್ಕಲ್‍ನಲ್ಲಿ ಸಮಾಪ್ತಿಗೊಂಡಿತು.  

error: Content is protected !!