ಕಾಲಜ್ಞಾನ ಅರಿತು ಭವಿಷ್ಯ ಹೇಳಲು ಸಾಧ್ಯ : ಕೋಡಿಮಠ ಶ್ರೀ

ಕಾಲಜ್ಞಾನ ಅರಿತು ಭವಿಷ್ಯ ಹೇಳಲು ಸಾಧ್ಯ : ಕೋಡಿಮಠ ಶ್ರೀ

ಪ್ರಶ್ನೆಗಳಿಗೆ ಶ್ರೀಗಳ ಪ್ರತಿಕ್ರಿಯೆ

ಕೇಂದ್ರದಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಿ, ಮೋದಿ ಪ್ರಧಾನಿಯಾಗುವರೇ? ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅನೇಕ ಯೋಜನೆಗಳನ್ನು ಘೋಷಣೆ ಮಾಡಿ ಜಾರಿಗೆ ಮುಂದಾಗಿದ್ದು, ರಾಜ್ಯ ಸರ್ಕಾರಕ್ಕೆ ಭವಿಷ್ಯವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು.

ಹೊನ್ನಾಳಿ, ಸೆ.13- ಯಾವುದೇ ಒಂದು ಭವಿಷ್ಯವನ್ನು ಸ್ಪಷ್ಟವಾಗಿ ಹೇಳಬೇಕಾದಲ್ಲಿ ಅದಕ್ಕೆ ನಿರ್ದಿಷ್ಟ ಕಾಲಘಟ್ಟವನ್ನರಿತು ಹೇಳುವುದು ಸೂಕ್ತ ಎಂಬುದಾಗಿ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಪ್ರಸಿದ್ದ ಸುಕ್ಷೇತ್ರ ಕೋಡಿಮಠ ಮಹಾಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ದುರ್ಗಿಗುಡಿ ನಿವಾಸಿ ಶ್ರೀಮತಿ ನಾಗವೇಣಿ ಮಂಜುನಾಥ ಮಾಳಂಕಿ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶ್ರೀಗಳು ಪ್ರತಿಕ್ರಿಯಿಸಿದರು. 

ಇಂತಿಷ್ಟು ಕಾಲಘಟ್ಟದ ಒಳಗೆ ಭವಿಷ್ಯ ಹೇಳಬೇಕಾಗುತ್ತದೆ. ಈ ಹಿಂದೆ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ, ನಾವು ರಾಜ್ಯದಲ್ಲಿ ಸ್ಥಿರ ಸರ್ಕಾರ ಬರುತ್ತದೆಂಬ ಹೇಳಿಕೆ ನೀಡಿದ್ದೆವು, ಅದು ಸತ್ಯವಾಗಿದೆ.

ಅದರಂತೆ ಕೇಂದ್ರದಲ್ಲಿ ಇನ್ನು ಚುನಾ ವಣೆ ಆರೇಳು ತಿಂಗಳು ಇದ್ದು ಅದು ಭವಿಷ್ಯ ಕಾಲದ ಮಿತಿಯಲ್ಲಿಲ್ಲ ಮತ್ತು ಹೇಳಿಕೆಯು ದೇಶದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸೂಚ್ಯವಾಗಿ ಹೇಳಿದರು.

ಆಳುವ ಸರ್ಕಾರಗಳು ಏನೇ ಯೋಜನೆ ಗಳನ್ನು ಜಾರಿಗೆ ತಂದರೂ ತೊಂದರೆ ಇಲ್ಲ. ಕಾರಣ ನಮ್ಮ ಕರ್ನಾಟಕ ಪ್ರಾಕೃತಿಕವಾಗಿ ಎಲ್ಲಾ ರೀತಿಯಲ್ಲಿ ಸಮೃದ್ದವಾಗಿದ್ದು,  ಅಭಿವೃದ್ಧಿಗೆ ಪೂರಕವಾದ ನೆಲ, ಜಲ, ಪರಿಸರ ಸೇರಿದಂತೆ ಅನೇಕ ರೀತಿಯ ಸಂಪತ್ತಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಾವುದೇ ತೊಂದರೆ ಆಗದು ಎಂದು ವಿವರಿಸಿದರು. 

ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರುತ್ತದೆ. ರೈತರು ಹಾಗೂ ಜನತೆ ಆತಂಕ ಪಡುವ ಅಗತ್ಯವಿಲ್ಲ. ಕಾರ್ತಿಕ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಲವು ಅವಘಡಗಳು ನಡೆಯುವ ಸಂಭವಗಳಿವೆ. ಮನುಷ್ಯ ಮಾಡಿದ ತಪ್ಪುಗಳನ್ನು ಭಗವಂತ ಕ್ಷಮಿಸುತ್ತಾನೆ. ಆದರೆ ತಿಳಿದೂ ತಪ್ಪುಗಳನ್ನು ಮಾಡಿದಾಗ ಕ್ಷಮಿಸಲಾರ. ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲ ಇವುಗಳನ್ನು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಇಂದು ನಾವು ಅನೇಕ ರೀತಿಯ ಪ್ರಕೃತಿ ವಿಕೋಪಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದರು. ಗುರುಗಳಲ್ಲಿ ಸಮಾಜಕಾರ ಹಾಗೂ ಮೋಕ್ಷಕಾರಕ ಗುಣಗಳಿವೆ. ಜಾತಿಗಳು ಮನೆಯಲ್ಲಿರಬೇಕು. ಧರ್ಮ ಹೊರಗಡೆ ಇರಬೇಕು. ಆಗ ಶಾಂತಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಲಜ್ಞಾನವೇ ಗುರುಗಳ ಸಂಪತ್ತಾಗಿದ್ದು, ಕಾಲಜ್ಞಾನದಲ್ಲಿ ಕಟ್ಟಿಗೆ ಹಾಡುತ್ತದೆ. ಕಬ್ಬಿಣವು ಓಡುತ್ತದೆ. ಅಬ್ಬಬ್ಬಾ ಗಾಳಿ ಮಾತನಾಡುತ್ತದೆ ಎಂದು ನೂರಾರು ವರ್ಷಗಳಲ್ಲಿ ಹೇಳಲಾಗಿದ್ದು, ಇದು ಸತ್ಯವಾಗಿದೆ. ಕಟ್ಟಿಗೆ ಮತ್ತು ಕಬ್ಬಿಣ ಅಂದರೆ ಇಂದು ರೈಲುಗಳು ಬಂದಿರುವ ಬಗ್ಗೆಯಾದರೆ ಗಾಳಿ ಮಾತನಾಡುತ್ತದೆ ಎಂದರೆ ಮೊಬೈಲ್ ಬಂದಿರುವುದಕ್ಕೆ ಸಾಕ್ಷಿಯಾಗಿದೆ.ಇದೆ ರೀತಿ ಇನ್ನು ಕಲ್ಲಿನ ಕೋಳಿ ಕೂಗುತ್ತದೆ ಎಂದರೆ ಇಂದು ಮೊಬೈಲ್ ಗಳಲ್ಲಿರುವ ಸಿಮ್ ಗಳಾಗಿವೆ ಎಂದು ವಿವರಿಸಿದರು. 

ಯಾವುದು ಮನುಷ್ಯನಿಗೆ, ಸಮಾಜಕ್ಕೆ ಶಾಂತಿ, ನೆಮ್ಮದಿ ನೀಡುತ್ತದೆಯೋ ಅದುವೇ ಧರ್ಮವಾಗುತ್ತದೆ, ಇನ್ನು ಸನಾತನ ಧರ್ಮದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಈ ಬಗ್ಗೆ ಈಗಾಗಲೇ ಹುಬ್ಬಳ್ಳಿಯಲ್ಲಿ ಮಾತನಾಡಿದ್ದೇನೆ.  ಪದೇ ಪದೇ ಹೇಳುವ ಅಗತ್ಯವಿಲ್ಲ ಎಂದರು. 

 ನಂತರ ಧರ್ಮ ಮತ್ತು ರಾಜಕಾರಣದ ಕುರಿತು ಮಾತನಾಡಿ, ನೀರಿನ ಮೇಲೆ ದೊಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಬಂದರೆ ಅಪಾಯ ತಪ್ಪದು ಎಂದು ಸೂಚ್ಯವಾಗಿ ಹೇಳಿದರು .

ರಾಜಕಾರಣಿಗಳಾಗಲೀ, ಗುರು ಗಳಾಗಲೀ ಸಮಾಜದಲ್ಲಿ ಶಾಂತಿ ನಿರ್ಮಿಸು ವಂತಹ ಹೇಳಿಕೆಗಳನ್ನು ನೀಡಬೇಕು. ಆಶಾಂತಿ ನಿರ್ಮಾಣ ಮಾಡುವಂತಹ ಹೇಳಿಕೆ ನೀಡದಿರುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಕಣುಮಪ್ಪ,  ರಾಜೇಶ್ವರಿ, ಮಲ್ಲೇಶ್ ಮಾಳಕ್ಕಿ, ಯುವ ಕಾಂಗ್ರೆಸ್‌ನ ಎಚ್.ಎಸ್. ರಂಜಿತಾ.ಯುವ ಮುಖಂಡ ಆನಂದ ಸೇರಿದಂತೆ, ಇತರರು ಇದ್ದರು. 

error: Content is protected !!