ಇದೀಗ `ಡಯಾಲಿಸಿಸ್’ಚಿಕಿತ್ಸೆ ಸಂಪೂರ್ಣ ಉಚಿತ: ಎಸ್ಸೆಸ್

ಇದೀಗ `ಡಯಾಲಿಸಿಸ್’ಚಿಕಿತ್ಸೆ ಸಂಪೂರ್ಣ ಉಚಿತ: ಎಸ್ಸೆಸ್

ದಾವಣಗೆರೆ, ಫೆ. 6- ಇನ್ನು ಮುಂದೆ ಬಡ ಜನರ  ಅನುಕೂಲಕ್ಕಾಗಿ `ಡಯಾಲಿಸಿಸ್’ ಚಿಕಿತ್ಸೆಯನ್ನು ಸಂಪೂರ್ಣಉಚಿತವಾಗಿ ನೀಡಲಾಗುವುದು ಎಂದು ಎಸ್.ಎಸ್. ಕೇರ್ ಟ್ರಸ್ಟ್ ಅಧ್ಯಕ್ಷರೂ, ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಕೆ.ಆರ್. ರಸ್ತೆ ಜಗಳೂರು ಬಸ್ ನಿಲ್ದಾಣದ ಹತ್ತಿರದ ಎಸ್.ಎಸ್. ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಹೆಚ್ಚುವರಿಯಾಗಿ ನಾಲ್ಕು ಡಯಾಲಿಸಿಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

 ಎಸ್. ಎಸ್. ಕೇರ್ ಟ್ರಸ್ಟ್ ವತಿಯಿಂದ ಬ್ಯಾಂಕ್‌ನಲ್ಲಿ 10 ಕೋಟಿ ರೂ. ಠೇವಣಿ ಇರಿಸಿದ್ದು, ಇದರಿಂದ ಬರುವ ಬಡ್ಡಿ ಹಣದಲ್ಲಿ ಡಯಾಲಿಸಿಸ್ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ಘೋಷಿಸಿದರು.

ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ವಿವಿಧ ಕಾಯಿಲೆಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಈ ಭಾಗದ ಬಡ ಜನರು ಇದರ ಉಪಯೋಗ ಪಡೆದುಕೊಂಡು ಆರೋಗ್ಯಕರ ಜೀವನ ನಡೆಸಲು ಕರೆ ನೀಡಿದರು.

2021 ರಲ್ಲಿ 4 ಡಯಾಲಿಸಿಸ್ ಘಟಕಗಳನ್ನು ಈ ಆಸ್ಪತ್ರೆ ಹೊಂದಿತ್ತು. 2022 ರಲ್ಲಿ ಮತ್ತೆ 4 ಯಂತ್ರಗಳನ್ನು ಅಳವಡಿಸಲಾಯಿತು. ಇದೀಗ ಜನರ ಒತ್ತಾಸೆಯಂತೆ ಮತ್ತೆ ಹೆಚ್ಚುವರಿಯಾಗಿ 4 ಡಯಾಲಿಸಿಸ್ ಘಟಕಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದರು.

 ಪ್ರಸ್ತುತ ಈ ಆಸ್ಪತ್ತೆ 12 ಡಯಾಲಿಸಿಸ್ ಘಟಕಗಳನ್ನು ಹೊಂದಿದೆ. ನೋಂದಾಯಿತ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗುವುದು. 5025 ಬಾರಿ ಡಯಾಲಿಸಿಸ್ ಸೇವೆಗಳನ್ನು ಒದಗಿಸಿದ್ದೇವೆ. ಈ ಭಾಗದ ನಾಗರಿಕರಿಗೆ ಅನುಕೂಲವಾಗಲೆಂದು ಹೊರರೋಗಿಗಳ ಚಿಕಿತ್ಸಾ ವಿಭಾಗ (ಓಪಿಡಿ) ಆರಂಭಿಸಲಾಗುವುದು ಎಂದು ಹೇಳಿದರು.

ಈ ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿರುವುದರಿಂದ ಅನೇಕರಿಗೆ ಅನುಕೂಲವಾಗಿದ್ದು, ಇದೀಗ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ಸೂಚಿಸಿರುವ ಡಾ. ಶಾಮನೂರು ಶಿವಶಂಕರಪ್ಪ ಅವರ ಕಾರ್ಯ ಶ್ಲ್ಯಾಘನೀಯ ಎಂದು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಮುನ್ನಾ ಪೈಲ್ವಾನ್, ತಿಮ್ಮರಾಯಶೆಟ್ಟಿ, ಸುರೇಶ್ ಮತ್ತಿತರರು  ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜ.ಜ.ಮು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶ್, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಕುಮಾರ್, ಮಕ್ಕಳ ತಜ್ಞ ಡಾ.ಮೂಗನಗೌಡ ಪಾಟೀಲ್, ಡಾ. ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್.ಪ್ರಸಾದ್,  ಟಿ. ಸತ್ಯನಾರಾಯಣ, ಹರೀಶ್, ಕಾಂಗ್ರೆಸ್ ಮುಖಂಡರುಗಳಾದ ದಿನೇಶ್ ಕೆ.ಶೆಟ್ಟಿ, ಸೈಯದ್ ಸೈಪುಲ್ಲಾ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಮುಸ್ತಾಕ್ ಅಹ್ಮದ್, ಮುನ್ನಾ ಪೈಲ್ವಾನ್, ಜಯಣ್ಣ, ಬುತ್ತಿ ಗಪೂರ್ ಸಾಬ್, ಇಮ್ತಿಯಾಜ್ ಹುಸೇನ್, ರಜ್ವಿ, ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಸದಸ್ಯರುಗಳಾದ ಎ.ನಾಗರಾಜ್, ಎ.ಬಿ.ರಹೀಂ, ಸೈಯದ್ ಚಾರ್ಲಿ, ಜಾಕೀರ್ ಅಲಿ, ಶಫೀಕ್ ಪಂಡಿತ್, ಸವಿತಾ ಗಣೇಶ್ ಹುಲ್ಮನಿ, ಆಶಾ ಉಮೇಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಮೀನಾಕ್ಷಿ ಜಗದೀಶ್, ಅನಿತಾಬಾಯಿ, ಶುಭ ಮಂಗಳ, ದಾಕ್ಷಾಯಿಣಮ್ಮ, ರಾಜೇಶ್ವರಿ, ಮಂಜಮ್ಮ, ಹಾಲೇಶ್ ಗೌಡ ಮತ್ತಿತರರಿದ್ದರು.

ಕಾವ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಶಾಂತಲಾ ಅರುಣಕುಮಾರ್ ಸ್ವಾಗತಿಸಿದರು. ಡಾ. ಡಿ.ಬಿ. ಶುಭಾ ಎಸ್.ಎಸ್. ಕೇರ್ ಟ್ರಸ್ಟ್ ವರದಿ ಓದಿದರು. ಡಾ. ಅನುರೂಪ ನಿರೂಪಿಸಿದರು. ಡಾ.ಜಿ. ಧನ್ಯಕುಮಾರ್ ವಂದಿಸಿದರು. 

error: Content is protected !!