ಅತ್ಯಾಚಾರ ಪ್ರಕರಣ : ಅಪರಾಧಿಗೆ ನಿದರ್ಶನೀಯ ಶಿಕ್ಷೆಗೆ ಆಗ್ರಹ

ದಾವಣಗೆರೆ, ಆ.27- ಮೈಸೂರಿನಲ್ಲಿ ವಿದ್ಯಾ ರ್ಥಿನಿಯ ಮೇಲೆ  ಸಾಮೂಹಿಕ ಅತ್ಯಾಚಾರ ಮಾಡಿರುವ  ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅವರಿಗೆ ನಿದರ್ಶನೀಯ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‍ಎಸ್), ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‍ಓ), ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಓ) ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಗರದ ಉಪವಿಭಾಗಾಧಿಕಾರಿ ಕಛೇರಿ ಮುಂಭಾಗದಲ್ಲಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. 

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯು ಸ್ನೇಹಿತನೊಂದಿಗೆ ವಾಹನದಲ್ಲಿ ಹೋಗುವಾಗ ಪುಂಡರ ಗುಂಪು ಅವರನ್ನು ಅಡ್ಡಗಟ್ಟಿ, ಸ್ನೇಹಿತನ ಮೇಲೆ ದಾಳಿ ನಡೆಸಿ, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.  ಈ ಘಟನೆಯಲ್ಲಿ ಅತ್ಯಾಚಾರ ಮಾಡಿರುವ ಅಪರಾಧಿಗಳನ್ನು ಈ ಕೂಡಲೇ ಪತ್ತೆ ಹಚ್ಚಿ, ಅವರಿಗೆ ಶಿಕ್ಷೆ ನೀಡಬೇಕು ಎಂದು ಸಂಘಟನೆಯ ಮುಖಂಡರಾದ ಜ್ಯೋತಿ ಕುಕ್ಕುವಾಡ ಆಗ್ರಹಿಸಿದರು.

ಕಾಲೇಜು ವಿದ್ಯಾರ್ಥಿನಿಯರು ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ಹುಡುಗರು ಹಿಂಬಾಲಿಸುವುದು ಹಾಗೂ ಚುಡಾಯಿಸುವುದು ಎಲ್ಲೆಡೆ ನಡೆಯುತ್ತಲೇ ಇದೆ. ವಿದ್ಯಾರ್ಥಿನಿ-ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ. ರಾಜ್ಯದಲ್ಲಿ ಇಂತಹ ನಿರ್ಜನ ಸ್ಥಳಗಳಲ್ಲಿ ಪೊಲೀಸ್ ವಾಹನದ ಗಸ್ತು ಹೆಚ್ಚಾಗಿ ಆಗಬೇಕು. ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ಶಿಕ್ಷಣ ಕೇಂದ್ರವಾಗಿದ್ದು, ಬೇರೆ ರಾಜ್ಯಗ ಳಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಮತ್ತೊಂದೆಡೆ ಇಂತಹ ಘಟನೆಗಳಿಂದ ಪೋಷಕರು ಅವ ರನ್ನು ವಿದ್ಯಾಭ್ಯಾಸಕ್ಕೆ ಇಲ್ಲಿಗೆ ಕಳುಹಿಸಲು ಹಿಂದೇಟು ಹಾಕಬಹುದು. ಕೆಲವರು ಶಿಕ್ಷಣವನ್ನೇ ಮೊಟಕುಗೊಳಿಸ ಬಹುದು. ಹೀಗಾಗಿ, ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಆಡಳಿತ ವರ್ಗ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜಸ್ಟೀಸ್ ವರ್ಮ ಆಯೋಗದ ಶಿಫಾರಸ್ಸು ಜಾರಿಗೊಳಿಸಬೇಕು. ಅಶ್ಲೀಲ ಸಿನಿಮಾ, ಸಾಹಿತ್ಯ ನಿಷೇಧ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಪೂಜಾ ನಂದಿಹಳ್ಳಿ, ಭಾರತಿ, ಜ್ಯೋತಿ ಕುಕ್ಕುವಾಡ, ಕುಮುದಾ, ಸೌಮ್ಯ, ಮಮತ, ಪುಷ್ಪ, ಕಾವ್ಯ, ಪರಶುರಾಮ್, ಗುರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

error: Content is protected !!