ಇಂದು ದಾವಣಗೆರೆ ವಿವಿ 8ನೇ ಘಟಿಕೋತ್ಸವ

 ಸಂಸದ ಸಿದ್ದೇಶ್ವರ, ಡಾ. ರಮೇಶ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ದಾವಣಗೆರೆ, ಏ.7- ದಾವಣಗೆರೆ ವಿಶ್ವವಿದ್ಯಾ ನಿಲಯದ 8ನೇ ಘಟಿಕೋತ್ಸವ ನಾಳೆ ದಿನಾಂಕ 8 ರಂದು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆ ಯಲಿದೆ. ರಾಜ್ಯಪಾಲರೂ, ದಾವಣಗೆರೆ ವಿವಿ ಕುಲಾಧಿಪತಿಗಳಾದ ವಜುಭಾಯಿ ರುಢಾಬಾಯಿ ವಾಲಾ ಅವರು ಅಧ್ಯಕ್ಷತೆ ವಹಿಸಲಿದ್ದು, ಉಪ ಮುಖ್ಯಮಂತ್ರಿಗಳು, ಸಮ ಕುಲಾಧಿಪತಿ ಡಾ. ಸಿ.ಎನ್. ಅಶ್ವಥನಾರಾಯಣ ಉಪಸ್ಥಿತಿಯಲ್ಲಿ ಘಟಿಕೋತ್ಸವ ಕಾರ್ಯಕ್ರಮ ಜರುಗಲಿದೆ. ಘಟಿಕೋತ್ಸವದಲ್ಲಿ ಒಟ್ಟು 13,207 ವಿದ್ಯಾರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ. ಅಲ್ಲದೆ 44 ವಿದ್ಯಾರ್ಥಿಗಳು 74 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಇಬ್ಬರು ಗಣ್ಯರಾದ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಮ ನಾರ್ಹ ಸೇವೆ ಸಲ್ಲಿಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಎಂ.ಕೆ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಾಗುವುದು ಎಂದರು.

ಈ ಬಾರಿ ಒಟ್ಟು 74 ಸ್ವರ್ಣ ಪದಕಗಳನ್ನು 43 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಸ್ನಾತಕ ವಿಭಾಗದಲ್ಲಿ 19 ಸ್ವರ್ಣ ಪದಕಗಳಿದ್ದು, 12 ವಿದ್ಯಾರ್ಥಿಗಳು ಪಡೆದಿದ್ದಾರೆ. ಅವರಲ್ಲಿ 3 ಪುರುಷ ಮತ್ತು 9 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 29 ವಿದ್ಯಾರ್ಥಿಗಳು 52 ಪದಕಗಳನ್ನು ಗಳಿಸಿದ್ದಾರೆ.  ಇವರಲ್ಲಿ 7 ಪುರುಷ ಹಾಗೂ 22 ಮಹಿಳಾ ವಿದ್ಯಾರ್ಥಿಗಳು ಇದ್ದಾರೆ. ಚಿನ್ನದ ಪದಕ ಗಳಿಕೆಯಲ್ಲಿ ಮಹಿಳಾ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 34 ವಿದ್ಯಾರ್ಥಿನಿಯರು ಪದಕಗಳನ್ನು ಹಂಚಿಕೊಂಡಿದ್ದಾರೆ. ಗಣಿತ ವಿಭಾಗದ ವಿದ್ಯಾರ್ಥಿನಿ ಮೇಘ ಎನ್‌.ಎಸ್. ನಾಲ್ಕು ಪದಕಗಳೊಂದಿಗೆ ಚಿನ್ನದ ಹುಡುಗಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಸ್ನಾತಕ ಪದವಿಯ 11 ಹಾಗೂ ಸ್ನಾತಕೋತ್ತರ ಪದವಿಯ 24 ಸೇರಿ ಒಟ್ಟು 44 ವಿದ್ಯಾರ್ಥಿಗಳು ಪ್ರಥಮ ರಾಂಕ್ ಗಳಿಸಿದ್ದಾರೆ. ಈ ಬಾರಿ ವಿವಿಧ ವಿಭಾಗಗಳಲ್ಲಿ 7 ಜನರಿಗೆ ಪಿಎಚ್.ಡಿ ಹಾಗೂ ಇಬ್ಬರಿಗೆ ಎಂ.ಫಿಲ್ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.

ವಿಶ್ವವಿದ್ಯಾನಿಲಯವು 2019-20ರ ಅವಧಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾದ 11,193 ಪದವಿಯ ಹಾಗೂ 2,014 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಬಾರಿ ಪದವಿಯಲ್ಲಿ 6,873 ಮಹಿಳೆಯರು ಹಾಗೂ 4,319 ಪುರುಷ ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಸಿಎ, ಬಿಎಸ್‍ಡಬ್ಲ್ಯೂ, ಬಿವಿಎ, ಬಿ.ಇಡಿ ಹಾಗೂ ಬಿಬಿಇಡಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪದವಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ.  ಸ್ನಾತಕೋತ್ತರ ವಿಭಾಗದಲ್ಲಿ 1,189 ಮಹಿಳಾ ಮತ್ತು 824 ಪುರುಷ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಕೊರೊನಾ ಸಂಕಷ್ಟದ ದಿನಗಳಲ್ಲೂ ಪರೀಕ್ಷೆ ನಡೆಸಿ, ದಾಖಲೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ಮಾಡಿಕೊಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳ ಜೊತೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ವಿಶೇಷ ಪರೀಕ್ಷೆ ನಡೆಸಿ, ದೇಶದ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಆ ಮೂಲಕ ದಾವಣಗೆರೆ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿವರಿಸಿದರು.

ಕೊರೊನಾ ಸಂದರ್ಭದ ಆತಂಕ, ಸಂಕಷ್ಟದ ದಿನಗಳಲ್ಲೂ ನಡೆದ ಆನ್‍ಲೈನ್ ತರಗತಿಗಳನ್ನು ಆಲಿಸಿ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲೂ ಸ್ನಾತಕ ಪದವಿಯಲ್ಲಿ ಶೇ 60.57 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 95.31ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಪಠ್ಯ ಮತ್ತು ಪ್ರಾಯೋಗಿಕ ತರಗತಿಗಳನ್ನು ನಡೆಸಿದ್ದು ವಿಶೇಷ ಎಂದರು.

ಕೊರೊನಾ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ 173 ಶಿಕ್ಷಕರು ಆನ್‍ಲೈನ್ ಮೂಲಕ ಒಟ್ಟು 4176 ತರಗತಿಗಳನ್ನು ನಡೆಸಿದ್ದಾರೆ. 63 ಕಾರ್ಯಾಗಾರಗಳನ್ನು ನಡೆಸಲಾಗಿದೆ. 21 ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, 154 ವಿಶ್ವವಿದ್ಯಾನಿಲಯ ಮಟ್ಟದ ವಿಚಾರಗೋಷ್ಠಿಗಳನ್ನು ನಡೆಸಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಆನ್‍ಲೈನ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗಲು ಸುಮಾರು 2100 ಮಾಹಿತಿ ಮತ್ತು ಪಾಠಗಳ ಟಿಪ್ಪಣಿಗಳನ್ನು ಒದಗಿಸಲಾಗಿತ್ತು. ಇದೆಲ್ಲದರ ಪರಿಣಾಮ ಹಾಗೂ ಶಿಕ್ಷಕರ ನಿರಂತರ ಪರಿಶ್ರಮ, ಸೇವಾ ಮನೋಭಾವದ ಕರ್ತವ್ಯದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಇಡೀ ದೇಶದಲ್ಲಿ ಶೈಕ್ಷಣಿಕವಾಗಿ ಗೌರವ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ಘಟಕೋತ್ಸವ ಭಾಷಣ : ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಮತ್ತು ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರ್ಜಗಿ ಅವರು ಈ ಬಾರಿಯ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. 

ಜಿ.ಎಂ. ಸಿದ್ದೇಶ್ವರ : ರಾಜಕೀಯ, ಸಮಾಜ ಸೇವೆ, ಸಾಮಾಜಿಕ ನ್ಯಾಯ, ಉದ್ಯಮ, ಶಿಕ್ಷಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ತನ್ನ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸುತ್ತಿದೆ.

ಡಾ. ಎಂ.ಕೆ. ರಮೇಶ್ : ವೃತ್ತಿಯಲ್ಲಿ ವೈದ್ಯರಾದರೂ ಶಿಕ್ಷಣ, ಸಮುದಾಯ ಆರೋಗ್ಯ, ಸಮಾಜಸೇವೆ, ಸಾಮಾಜಿಕ ನ್ಯಾಯ, ಆಡಳಿತ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಡಾ.ಎಂ.ಕೆ. ರಮೇಶ್ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು 8ನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಿದೆ.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ಅನಿತಾ ಹೆಚ್‌.ಎಸ್‌, ಪ್ರೊ. ಗಾಯತ್ರಿ ದೇವರಾಜ್‌, ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ, ಸಿಂಡಿಕೇಟ್‌ ಸದಸ್ಯರಾದ ವಿಜಯಲಕ್ಷ್ಮಿ, ವೀರಭದ್ರಯ್ಯ, ಎಸ್‌. ಶ್ರೀಧರ್‌, ಹೆಚ್‌.ಜಿ. ಕೃಷ್ಣಮೂರ್ತಿ, ವೀರಣ್ಣಗೌಡರ್‌, ಎಂ. ಜ್ಯೋತಿ, ಇನಾಯತ್‌ ವುಲ್ಲಾ ಮತ್ತಿತರರಿದ್ದರು.

ಇಂದು ದಾವಣಗೆರೆ ವಿವಿ 8ನೇ ಘಟಿಕೋತ್ಸವ - Janathavaniಮೇಘಗೆ ನಾಲ್ಕು ಸ್ವರ್ಣ ಪದಕ : ದಾವಣಗೆರೆ, ಏ.7- ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಎಸ್.ಎನ್‌. ಮೇಘ ಅವರು ಅತಿ ಹೆಚ್ಚು ಅಂಕ ಪಡೆದು 4 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.

error: Content is protected !!