ಹರಿಹರದಲ್ಲಿ ಗಲಾಟೆ: 6 ಪ್ರಕರಣ ದಾಖಲು

ಹರಿಹರದಲ್ಲಿ ಗಲಾಟೆ: 6 ಪ್ರಕರಣ ದಾಖಲು - Janathavaniಹರಿಹರ, ಫೆ. 9- ನಗರದಲ್ಲಿ ನಿನ್ನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವ ರಣದಲ್ಲಿ ಹಿಜಾಬ್ ಧರಿಸುವ ವಿವಾದದ ವಿಚಾರಕ್ಕೆ ಎರಡು ಕೋಮಿನ ನಡುವೆ ನಡೆದ ಗಲಾಟೆಯ ಬಗ್ಗೆ ದಾವಣಗೆರೆ ಪೂರ್ವ ವಲಯ ಐಜಿಪಿ ಸತೀಶ್ ಕುಮಾರ್ ರವರು ಕಾಲೇಜು ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಅವರು, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ. ಪೊಲೀಸ್ ಸಿಬ್ಬಂದಿ ವಿವಿಧ ಬಡಾವಣೆಗಳಲ್ಲಿ ಪಥಸಂಚಲನ ನಡೆಸಿದ್ದಾರೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿಗೆ ಭೇಟಿ ನೀಡಿದ ನಂತರ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ನಿನ್ನೆ ನಡೆದ ಘರ್ಷಣೆ ವಿಚಾರಕ್ಕೆ ಈಗಾಗಲೇ 6 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ನಾನು ಮನೆಗೆ ನಡೆದುಕೊಂಡು ಹೋಗುವಾಗ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಓರ್ವ ಯುವಕ ಪ್ರತ್ಯಕ್ಷವಾಗಿ ದೂರನ್ನು ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ನಾವು ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ ಬಂಧನದ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ. 

ನಗರದಾದ್ಯಂತ 144 ನೇ ಸೆಕ್ಷನ್ ಜಾರಿಯಲ್ಲಿ ಇರುವುದರಿಂದ, ಯಾವುದೇ ರೀತಿಯ ಪ್ರತಿಭಟನೆ ಮಾಡುವುದಾಗಲೀ ಜೊತೆಗೆ ಇತರೆ ಚಟುವಟಿಕೆಗಳನ್ನು ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಸಾರ್ವಜನಿಕರಿಗೆ ಏನಾದರೂ ಸಮಸ್ಯೆಗಳು ಇದ್ದರೆ, ಅವರು ಸ್ವಯಂ ಪ್ರೇರಿತರಾಗಿ ನನಗೆ ದೂರವಾಣಿ ಕರೆ ಮಾಡಬಹುದು. ನಂತರದಲ್ಲಿ ನಿರಪರಾಧಿಗಳಿಗೆ ತೊಂದರೆ ಆಗದಂತೆ ವಿಚಾರಣೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ.

ಈ ಘಟನೆ ಪೂರ್ವ ನಿಯೋಜಿತ ಕಾರ್ಯ ಎಂದು ಈಗ ಸದ್ಯದ ಪರಿಸ್ಥಿತಿಯಲ್ಲಿ ಏನು ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ಹೊರಗಡೆಯಿಂದ ಬಂದ ಕೆಲವು ಯುವಕರು ದಾಂಧಲೆಗೆ ಮುಂದಾಗಿ ಅತಿರೇಕದ ವರ್ತನೆ ಮಾಡಿದ್ದರಿಂದ ಅದನ್ನು ಹತೋಟಿಗೆ ತರಲು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿಲಾಯಿತು ಎಂದವರು ಸ್ಪಷ್ಟಪಡಿಸಿದ್ದಾರೆ. 

ನಿನ್ನೆಯ ಘಟನೆಯನ್ನು ಯಾರೂ ಮುಂದುವರೆಸಲು ಹೋಗಬಾರದು. ಒಂದು ವೇಳೆ ಮುಂದುವರೆಸಿದರೆ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ‌ ಎಂದವರು ಎಚ್ಚರಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ಮಾಡಿ, ಹಲ್ಲೆ ನಡೆಸಿದವರ ಮೇಲೆ ಮೂರು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇನ್ನೂ ಸ್ವಲ್ಪ ಮಟ್ಟಿಗೆ ಸುಧಾರಣೆ ಬಂದ ನಂತರದಲ್ಲಿ ಎರಡೂ ಕೊಮಿನ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ಏರ್ಪಡಿಸಲಾಗುತ್ತದೆ ಎಂದು ಹೇಳಿದರು.

ಶಾಸಕ ಎಸ್ ರಾಮಪ್ಪ ಮಾತನಾಡಿ, ನಿನ್ನೆ ಹಿಜಾಬ್ ಧರಿಸುವ ವಿಚಾರಕ್ಕೆ ನಡೆದ ಘರ್ಷಣೆ 100 ಕ್ಕೆ100 ರಷ್ಟು ಪೂರ್ವ ನಿಯೋಜಿತವಾಗಿದೆ. ಈ ಕೃತ್ಯ ನಡೆದಿರೋದು ರಾಜಕೀಯ ಉದ್ದೇಶಕ್ಕಾಗಿ ಮಾಡಿರುವುದು ನಿಜ ಸಂಗತಿ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಐ ಸತೀಶ್ ಕುಮಾರ್, ಹನುಮಂತಪ್ಪ ಶಿರಹಳ್ಳಿ, ಪಿಸಿಐ ಸುನಿಲ್ ಬಸವರಾಜ್ ತೆಲಿ, ಪೊಲೀಸ್ ಸಿಬ್ಬಂದಿಗಳಾದ  ನಿಂಗರಾಜ್, ಸತೀಶ್, ಮಂಜುನಾಥ್, ಕಾಲೇಜು ಉಪನ್ಯಾಸಕರು, ನಗರಸಭೆ ಸದಸ್ಯರು, ಮುಸ್ಲಿಂ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!