ಸಿದ್ಧಗಂಗಾ ಶಾಲೆಯಲ್ಲಿ ‘ದಾಸೋಹ ದಿನ’

ದಾವಣಗೆರೆ, ಜ.23- ತ್ರಿವಿಧ ದಾಸೋಹ ಮೂರ್ತಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 3ನೇ ವರ್ಷದ ಸ್ಮರಣೋತ್ಸವವನ್ನು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ದಾಸೋಹ ದಿನವಾಗಿ ಆಚರಿಸಲಾಯಿತು. 

ಪುಜ್ಯರ ಬಗ್ಗೆ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿ’ಸೌಜರವರು ಮಾತನಾಡಿ, ಸಿದ್ಧಗಂಗಾ ಮಠ ಜಗತ್ಪ್ರಸಿದ್ಧವಾಗಲು ಪೂಜ್ಯ ಸ್ವಾಮೀಜಿಯವರು ನಿರಂತರ ನಡೆಸಿಕೊಂಡು ಬಂದ ಅನ್ನ, ವಸತಿ, ಅಕ್ಷರ ದಾಸೋಹ ಕಾರಣವೆಂದರು. ಭೀಕರ ಬರಗಾಲದಲ್ಲೂ ಶ್ರೀಮಠದಲ್ಲಿ ತ್ರಿವಿಧ ದಾಸೋಹವನ್ನು ತಮ್ಮ ಜೋಳಿಗೆಯ ನೆರವಿನಿಂದ ನಡೆಸಿಕೊಂಡು ಬಂದ ಕೀರ್ತಿ ಅವರದು. ನಡೆದಾಡುವ ದೇವರ ಕಾಲದಲ್ಲಿದ್ದು ಅವರ ದಿವ್ಯದರ್ಶನ ಪಡೆದ ನಾವೆಲ್ಲರೂ ಧನ್ಯರು ಎಂದರು. 

ಸಿದ್ಧಗಂಗಾ ಶ್ರೀಗಳವರ ಆಶೀರ್ವಾದದಿಂದ ದಿ|| ಎಂ. ಎಸ್. ಶಿವಣ್ಣನವರು 1970ರಲ್ಲಿ ಸ್ಥಾಪಿಸಿದ ಸಿದ್ದಗಂಗಾ ಸಂಸ್ಥೆಗೆ ಹಲವಾರು ಬಾರಿ ಭೇಟಿ ನೀಡಿ, ಇಲ್ಲಿಯ ಶಿಕ್ಷಣ ಕ್ರಮ ಮತ್ತು ಶಿಸ್ತನ್ನು ಬಹುವಾಗಿ ಮೆಚ್ಚಿಕೊಂಡಿದ್ದನ್ನು ಡಿಸೋಜಾ ಅವರು ಸ್ಮರಿಸಿದರು. 

ವಿಧ್ಯುಕ್ತ ಪೂಜೆಯ ನಂತರ ಶಾಲಾ-ಕಾಲೇಜಿನ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಸಿ. ನಿರಂಜನ್, ಸಂಸ್ಥೆಯ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ನಿರ್ದೇಶಕ ಡಾ|| ಜಯಂತ್‌ ಮತ್ತು  ಇತರರು ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ಶ್ರೀಮತಿ ರುದ್ರಾಕ್ಷಿ ಬಾಯಿ ಮತ್ತು ಶಾಲೆಯ ಮಕ್ಕಳು ಭಕ್ತಿಗೀತೆಗಳನ್ನು ಹಾಡಿದರು

error: Content is protected !!