ದಾವಣಗೆರೆ ಜಿಲ್ಲೆಯನ್ನು ವರ್ಲ್ಡ್ ಫೇಮಸ್ ಮಾಡುವೆ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಮಾ.23- ಸಮಾಜದ ದುಡ್ಡನ್ನು ದುರ್ಬಳಕೆ ಮಾಡಿಕೊಳ್ಳುವವರು ಎಂದಿಗೂ ಉದ್ಧಾರವಾಗಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ನಗರದ ಹಳೇ ಪಿಬಿ ರಸ್ತೆಯಲ್ಲಿನ ಖಬರಸ್ಥಾನದಲ್ಲಿ ಇಂದು ಏರ್ಪಾಡಾಗಿದ್ದ 25 ಲಕ್ಷ ಮೌಲ್ಯದ ವಜುಖಾನ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿನ ಖಬರಸ್ತಾನದ ಮುಂದೆ ನಮಾಜ್ ಮಾಡಲು ಉತ್ತಮವಾದ ಸಿಸಿ ರಸ್ತೆ ನಿರ್ಮಿಸಲಾಗಿದೆ. ಖಬರಸ್ಥಾನದ ಅಭಿವೃದ್ದಿಗಾಗಿ 2005 ಹಾಗೂ 2013 ರಲ್ಲಿ ಸಭೆ ಹಾಗೂ ಚರ್ಚೆ ನಡೆಸಲಾಗಿತ್ತು. ಆದರೆ, ನೆನೆಗುದಿಗೆ ಬಿದ್ದಿದ್ದ ಖಬರಸ್ಥಾನ ಅಭಿವೃದ್ದಿಗೆ 25 ವರ್ಷಗಳ ಬಳಿಕ ಕಾಂಗ್ರೆಸ್ ಸಂಸದರು ಬರಬೇಕಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮುಸ್ಲಿಂ ಸಮುದಾಯದವರ ಪಾತ್ರ ಹೆಚ್ಚಾಗಿದ್ದು, ಕೊಟ್ಟ ಮಾತಿನಂತೆ ಖಬರಸ್ಥಾನಕ್ಕೆ 25 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಲಾಗಿದೆ. ಬಂಧುಗಳ ಕೋರಿಕೆಯಂತೆ ಇನ್ನು 25 ಲಕ್ಷ ಅನುದಾನ ಕೊಡಿಸಲು ಸಿದ್ದ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಯು ಅಗತ್ಯವಾಗಿದೆ. ಉದ್ಯೋಗ, ಶಿಕ್ಷಣ, ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಲ್ಲದೇ ಬಾತಿ ಗ್ರಾಮದಲ್ಲಿನ ದರ್ಗಾವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಿಟುವಳ್ಳಿಯ ದರ್ಗಾವನ್ನು ಅಭಿವೃದ್ಧಿ ಪಡಿಸಲಾಗುವುದು. ಸಮಾಜದ ದುಡ್ಡು ಯಾರೇ ಹೊಡೆದರೂ ಉದ್ಧಾರ ಆಗಲ್ಲ. ಸಮಾಜದ ದುಡ್ಡು ಸಮಾಜಕ್ಕೆ ಮೀಸಲಿಟ್ಟರೆ ಅಭಿವೃದ್ಧಿ ಸಾಧ್ಯ ಎಂದು ಸಚಿವರು ತಿಳಿಸಿದರು.
ಹಿಂದಿಯಲ್ಲಿ ಸಂಸದರ ಭಾಷಣ, ಸಚಿವರ ಮೆಚ್ಚುಗೆ
ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಿಂದಿ ಭಾಷೆಯಲ್ಲಿ ನೆರೆದವರೆಲ್ಲರಿಗೂ ರಂಜಾನ್ ಹಬ್ಬದ ಶುಭವನ್ನು ಕೋರಿದರು. ಬಳಿಕ ಭಾಷಣದುದ್ದಕ್ಕೂ ಹಿಂದಿಯಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು.
ತಮ್ಮ ಪತ್ನಿ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಹಿಂದಿ ಭಾಷಣವನ್ನು ಕೇಳಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಸಂಸದರು ಹಿಂದಿ ಮಾತಾಡ್ತಾರೆ ಎಂದು ತಿಳಿದಿದ್ದೆ, ಆದರೆ ಇಷ್ಟು ಚೆನ್ನಾಗಿ ಮಾತಾಡ್ತಾರೆ ಎಂದು ತಿಳಿದಿರಲಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೇ ಹೆರಿಗೆ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು ತೀರ್ಮಾನ
ದಾವಣಗೆರೆ ಹಳೇ ಭಾಗದಲ್ಲಿನ ಹೆರಿಗೆ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
30 ಹಾಸಿಗೆಗಳಿದ್ದ ಆಸ್ಪತ್ರೆಯಲ್ಲಿ ಪ್ರಸ್ತುತ 120 ಹಾಸಿಗೆ ವ್ಯವಸ್ಥೆ ಇದ್ದು ಹೆಚ್ಚುವರಿ ಜಮೀನು ಪಡೆದು 700 ರಿಂದ 800 ಹಾಸಿಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಸರ್ವರಿಗೂ ಉತ್ತಮ ಆರೋಗ್ಯ ಲಭಿಸಲು ಬಾಪೂಜಿ ಆಸ್ಪತ್ರೆಯ ಸಹಯೋಗದೊಂದಿಗೆ ಅಗತ್ಯ ಕಾರ್ಯಗಳನ್ನು ನಡೆಸಲು ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ನಿರ್ಮಿತಿ ಕೇಂದ್ರದವರಿಗೆ ಸಚಿವರಿಂದ ಕ್ಲಾಸ್
ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ನಿರ್ಮಿತಿ ಕೇಂದ್ರದವರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕ್ಲಾಸ್ ತೆಗೆದುಕೊಂಡರು. ಕಳಪೆ ಕಾಮಗಾರಿ ಮಾಡ್ಬೇಡ್ರಪ್ಪ, ಉತ್ತಮ ಕಾಮಗಾರಿ ಮಾಡ್ರಿ ಎಂದರು. ಖಬರಸ್ಥಾನದ ವಜುಖಾನ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿನ ಕಾಮಗಾರಿಗಳಲ್ಲಿ ಗುಣಮಟ್ಟವಿರಲಿ ಎಂದು ಸಚಿವರು ಸೂಚಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕೊಡುಗೆಯು ಜಿಲ್ಲೆಗೆ ಅಪಾರವಾಗಿದೆ.
ಪ್ರಸ್ತುತ ಸಂಸದರ ಕೋಟಾದಡಿ 3 ಕೋಟಿ 25 ಲಕ್ಷ ಅನುದಾನ ಬಂದಿದ್ದು, ಖಬರಸ್ಥಾನ ಅಭಿವೃದ್ದಿಗೆ 25 ಲಕ್ಷ ರೂ. ಅನುದಾನ ನೀಡಲಾಗಿದೆ. ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ, ರಸ್ತೆ, ಆರೋಗ್ಯ, ರೈತರ ಸಮಸ್ಯೆಗಳು, ಮೂಲಭೂತ ಸೌಲಭ್ಯಗಳು ಹಾಗೂ ಸೌಕರ್ಯಗಳು ಸೇರಿದಂತೆ ಅನೇಕ ಕೊರತೆಗಳನ್ನು ನಿವಾರಿಸಲು 25 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ನಿಮ್ಮೆಲ್ಲ ಪಾತ್ರ ದೊಡ್ಡದಿದೆ. ದಾವಣಗೆರೆ ಜಿಲ್ಲೆಯನ್ನು ವರ್ಲ್ಡ್ ಫೇಮಸ್ ಮಾಡಲು ನಿಮ್ಮೆಲ್ಲರ ಸಹಕಾರವಿರಲಿ. ಹೊಸ ಚೈತನ್ಯದೊಂದಿಗೆ ಸರ್ವರು ಜಿಲ್ಲೆಯ ಅಭಿವೃದ್ಧಿಗೆ ಪಣತೊಡೋಣ ಎಂದರು.
ತಂಜೀಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಜನಾಬ್ ಶೇಕ್ ದಾದಾಪೀರ್, ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಸದಸ್ಯರಾದ ಎ.ಬಿ.ರಹೀಂ ಸಾಬ್, ಹರಿಹರದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಮೌಲಾನ ಮಹಮ್ಮದ್ ಅಲಿಸಾಬ್, ಅಲ್ಲಮಾನ್ ನಿರಾಜ್, ಖಾದ್ರಿಸಾಬ್, ಮಸೀದ್ ಮೌಲಾನ, ನಜೀರ್ ಸಾಬ್, ಖಜಾಂಚಿ ಶಂಶುದ್ದೀನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.