ದಾವಣಗೆರೆ, ಮಾ.11- ಭಾರತ ದೇಶದಲ್ಲಿ ಹಿಂದಿನ ಕಾಲದಿಂದಲೂ ಹೆಣ್ಣು ಮಕ್ಕಳಿಗೆ ಗೌರವ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಶೋಷಣೆ ಹೆಚ್ಚಾಗಿರುವುದು ವಿಷಾದನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ವ್ಯಾಕುಲತೆ ವ್ಯಕ್ತಪಡಿಸಿದರು.
ನಗರದ ಬಿಇಎ ಅಸೋಸಿಯೇಷನ್ ದಂತ ವೈದ್ಯಕೀಯ ಕಾಲೇಜುಗಳ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘದಿಂದ ಕಾಲೇಜು ಆಫ್ ಡೆಂಟಲ್ ಸೈನ್ಸಸ್ನಲ್ಲಿ ಇಂದು ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ. ಹಾಗಾಗಿ ಮನೆಯಿಂದಲೇ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಕಲಿಸಬೇಕು. ವಿದ್ಯೆಯ ಸ್ವಾತಂತ್ರ್ಯ ನೀಡಿ, ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದು ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಅಶೋಕ್ ಎಲ್., ಕಾರ್ಯದರ್ಶಿ ಡಾ. ವಿಕ್ರಂ ಎಸ್. ಅಂಬರ್ಕರ್, ಖಜಾಂಚಿ ಡಾ. ಎಂ.ಎಸ್, ಶೃತಿ, ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನಿರ್ದೇಶಕರಾದ ಡಾ. ವಸುಂಧರ ಶಿವಣ್ಣ, ಪ್ರಾಂಶುಪಾಲ ಡಾ. ಐ.ಎಂ.ಅಲಿ, ಉಪ ಪ್ರಾಂಶುಪಾಲರಾದ ಡಾ. ಶೋಭ ಪ್ರಕಾಶ್, ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ನಂದೀಶ್ವರ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾದ ಡಾ. ಮಮತಾ, ಡಾ. ರೂಪ, ಡಾ. ಪೂರ್ಣಿಮಾ, ಡಾ. ಶೃತಿ, ಡಾ. ತೇಜಸ್ವಿನಿ ಇನ್ನಿತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.