ಮನಸ್ಸೆಂಬ ಮರ್ಕಟಕ್ಕೆ ಯೋಗದಿಂದ ಕಡಿವಾಣ

ಮನಸ್ಸೆಂಬ ಮರ್ಕಟಕ್ಕೆ ಯೋಗದಿಂದ ಕಡಿವಾಣ

ಯೋಗಾಭ್ಯಾಸ ಆಚರಣೆಗಷ್ಟೇ ಸೀಮಿತವಾಗದೆ ನಿತ್ಯದ ಅಭ್ಯಾಸವಾಗಬೇಕು: ತರಳಬಾಳು ಶ್ರೀ

ದಾವಣಗೆರೆ, ಜೂ.21-ಮರ್ಕಟದಂತಹ ಮನಸ್ಸಿಗೆ ಕಡಿವಾಣ ಹಾಕಲು ಯೋಗ, ಧ್ಯಾನ ಅತ್ಯಗತ್ಯ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಮುಂಜಾನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಯೋಗದ ಮಹತ್ವ ತಿಳಿಸಿಕೊಟ್ಟರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದಾರಿ ತಪ್ಪಲು, ಹಿಂಸಾತ್ಮಕ ಕೃತ್ಯಗಳು ಹೆಚ್ಚಾಗಲು ಮನಸ್ಸೇ ಕಾರಣ. ಮನಸ್ಸು ಹತೋಟಿಯಲ್ಲಿರದಿದ್ದರೆ ಇಂತಹ ಘಟನೆಗಳು ನಡೆಯುತ್ತವೆ. ಯೋಗ, ಧ್ಯಾನದಿಂದ  ಮಾತ್ರ ಮನಸ್ಸನ್ನು ಹತೋಟಿ ಯಲ್ಲಿಟ್ಟುಕೊಳ್ಳಬಹುದು ಎಂದರು.

ಶರೀರದಲ್ಲಿರುವ ಇಂದ್ರಿಯಗಳು ಮನಸ್ಸಿನ ಹತೋ ಟಿಯಲ್ಲಿದ್ದಾಗ ಮಾತ್ರ ಸಂತೋಷ ಅನುಭವಿಸಲು ಸಾಧ್ಯ. ಮನಸ್ಸು ಹಾವು ಶರೀರ, ಹಾವಿನ ಬುಟ್ಟಿ ಇದ್ದಂತೆ. ಬುಟ್ಟಿಯಲ್ಲಿರುವ ಹಾವು ಯಾವಾಗ ಕಚ್ಚುತ್ತದೋ ಗೊತ್ತಿಲ್ಲ. ಹಾವಾಡಿಗ ಹೇಗೆ ಹಾವಿನ ತಲೆಗೆ ಏಟು ಕೊಟ್ಟು ಸುಮ್ಮನಿರಿಸುತ್ತಾನೋ ಹಾಗೆ ನಾವು ಮನಸ್ಸನ್ನು ನಿಯಂತ್ರಿಸಬೇಕು ಎಂದರು.

ನಾಯಿ ತನ್ನ ಬಾಲ ಅಲ್ಲಾಡಿಸುವುದು ಸಾಮಾನ್ಯ ಸಂಗತಿ. ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಬಾರದು. ಹಾಗೆಯೇ ಮನಸ್ಸು ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು, ಮನಸ್ಸು ನಮ್ಮನ್ನು ಆಟ ಆಡಿಸಲು ಬಿಡಬಾರದು ಎಂದರು. ನೀರಿನಿಂದಲೇ ಕೆಸರು. ಆದರೆ ಅದೇ ಕೆಸರನ್ನು ಸ್ವಚ್ಛಗೊಳಿಸಲು ನೀರು ಬೇಕು. ಹಾಗೆಯೇ ನಮ್ಮ ಬಂಧನಕ್ಕೂ ಮುಕ್ತಿಗೂ ಮನಸ್ಸೇ ಕಾರಣ. ನಿತ್ಯವೂ ಪೂಜೆ, ಧ್ಯಾನ ಮಾಡುವು ದರಿಂದ ಮನಸ್ಸು ಹತೋಟಿಯಲ್ಲಿರುತ್ತದೆ ಎಂಬುದನ್ನು ವಚನಗಳಲ್ಲೂ ಹೇಳಲಾಗಿದೆ ಎಂದು `ಮನವೇ ಸರ್ಪ, ತನು ಹೇಳಿಗೆ’ ವಚನದ ಅರ್ಥ ವಿವರಿಸಿದರು.

ಮನಸ್ಸೆಂಬ ಮರ್ಕಟಕ್ಕೆ ಯೋಗದಿಂದ ಕಡಿವಾಣ - Janathavani

ಯೋಗ ಎಂದರೆ ಕೇವಲ ಆಸನಗಳನ್ನು ಮಾಡುವುದಲ್ಲ. ಯಮ-ನಿಯಮಗಳನ್ನು ಆಚರಿಸುವುದೂ ಕೂಡ ಆಗಿದೆ. ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಯಮಗಳನ್ನು ಪಾಲಿಸಿದ್ದಲ್ಲಿ ಪ್ರಪಂಚದಲ್ಲಿ ಯಾವುದೇ ಸಂಘರ್ಷಗಳೂ ಉಂಟಾಗುತ್ತಿರಲಿಲ್ಲ. ಇವುಗಳ ಪೈಕಿ ಮಹಾತ್ಮ ಗಾಂಧೀಜಿ ಅಹಿಂಸಾ ಮಾರ್ಗ ಅನುಸರಿಸಿದ್ದರು ಎಂಬುದಾಗಿ ಶ್ರೀಗಳು ವಿವರಿಸಿದರು.

ಸ್ಥಿರ ಸುಖಂ ಆಸನಂ ಎಂಬಂತೆ ಆಸನದಲ್ಲಿ ದೃಢತೆ, ಆನಂದ ಇರಬೇಕು. ಕಷ್ಟದಿಂದ ಮಾಡುವುದು ಆಸನಗಳಲ್ಲ. ಯಾವುದೇ ಆಸನವನ್ನು ಖುಷಿಯಿಂದ ಮಾಡಿದರೆ ನೀವು ಯೋಗ ಪರಿಣಿತಿ ಪಡೆದಿದ್ದೀರಿ ಎಂದರ್ಥ ಎಂದು ವಿಶ್ಲೇಷಿಸಿದರು.

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಯೋಗ ಪ್ರಚಲಿತವಾಗಿದೆ. 2015ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಯೋಗ ದಿನಾಚರಣೆ ಅಂಗೀಕಾರವಾಗಿದೆ. ಇದಕ್ಕೆ 195 ರಾಷ್ಟ್ರಗಳು ಬೆಂಬಲಿಸಿವೆ. ಪತಂಜಲಿ ಮಹರ್ಷಿಯ ಯೋಗ ಸೂತ್ರದಲ್ಲಿ 195 ಸೂತ್ರಗಳಿವೆ. ಇದನ್ನು ಯೋಗಾಯೋಗ ಎಂದೇ ಹೇಳಬಹುದು ಎಂದು ಸ್ವಾಮೀಜಿ ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮಾತನಾಡಿ, ಯೋಗ ಎಂಬುದು ನಮ್ಮ ಹಿರಿಯರು, ಗುರುಗಳು, ಸಾಧಕರು ಹೊಸ ಪೀಳಿಗೆಗೆ ನೀಡಿದ ಅಮ್ಯೂಲ್ಯ ಕೊಡುಗೆ.  ಮಾನಸಿಕ, ಭೌತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಸಹಕಾರಿಯಾಗಿದೆ ಎಂದರು.

ಯೋಗ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆಯುಷ್ ಇಲಾಖೆ, ಮಹಾನಗರ ಪಾಲಿಕೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೈದ್ಯ ಶ್ರೀ ಚನ್ನಬಸವಣ್ಣ ಸ್ವಾಮೀಜಿ ಯೋಗದ ಮಹತ್ವ ತಿಳಿಸುತ್ತಾ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಎಸ್ಪಿ ಉಮಾ ಪ್ರಶಾಂತ್, ಸಿಇಒ ಸುರೇಶ್ ಬಿ.ಇಟ್ನಾಳ್,  ಬಿ.ಸಿ.ಉಮಾಪತಿ, ತಹಶೀಲ್ದಾರ್ ಅಶ್ವತ್ಥ್‌, ಆಯುಕ್ತೆ ರೇಣುಕಾ, ಡಿಹೆಚ್ ಒ ಡಾ.ಷಣ್ಮುಖಪ್ಪ, ಡಿಡಿಪಿಐ ಕೊಟ್ರೇಶ್, ವಾಸುದೇವ ರಾಯ್ಕರ್, ಪರಶುರಾಮ, ಬಾತಿ ಶಂಕರ್, ತೀರ್ಥರಾಜ್ ಹೋಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!