ಸಹನೆ-ತ್ಯಾಗದ ಸ್ವಯಂ ಬೇಲಿ ಬೇಡ

ಸಹನೆ-ತ್ಯಾಗದ ಸ್ವಯಂ ಬೇಲಿ ಬೇಡ

`ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ

ದಾವಣಗೆರೆ, ನ. 3- ಸಾಕಷ್ಟು ಮಹಿಳೆಯರಲ್ಲಿ ಸಾಮರ್ಥ್ಯವಿದ್ದರೂ, ಸಹನೆ ಹಾಗೂ ತ್ಯಾಗದ ಬೇಲಿ ಹಾಕಿಕೊಂಡು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಮಹಿಳಾ ಸಮನ್ವಯ ಹಾಗೂ ಸೇವಾ ಭಾರತಿ ಟ್ರಸ್ಟ್ ವತಿಯಂದ ನಗರದ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದ್ದ ನಾರೀ ಶಕ್ತಿ ಸಂಗಮ ಮಹಿಳಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಾನಿದ್ದರಷ್ಟೇ ಮನೆ ನಡೆಸಲು ಸಾಧ್ಯ, ನಾನಿದ್ದರಷ್ಟೇ ಮಕ್ಕಳ ನಿಭಾಯಿಸಲು ಸಾಧ್ಯ ಎಂಬ ಚೌಕಟ್ಟನ್ನು ಮಹಿಳೆಯರೇ ಹಾಕಿಕೊಳ್ಳುತ್ತಾರೆ. ಈ ರೀತಿ ಬೇರೆಯವರಿಗೋಸ್ಕರವೇ ಬದುಕದೇ, ಸ್ವಂತಿಕೆಯನ್ನು ಕಂಡುಕೊಳ್ಳಬೇಕು ಎಂದವರು ಹೇಳಿದರು.

ಮನೆ ಜವಾಬ್ದಾರಿ ಹಾಗೂ ಹೊರಗಿನ ಕೆಲಸ ಎರಡರ ಜವಾಬ್ದಾರಿ ನಿರ್ವಹಿಸುವ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಮನೆಗಷ್ಟೇ ಸೀಮಿತವಾಗದೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಎಸ್ಪಿ ತಿಳಿಸಿದರು.

ಮಹಿಳೆಯರು ಈ ಹಿಂದೆ ಬರಲು ಹೆದರುತ್ತಿದ್ದ ಕ್ಷೇತ್ರಗಳಿಗೂ ಕಾಲಿಟ್ಟು, ಅಲ್ಲಿನ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಸಾಮರ್ಥ್ಯಗಳಿಗೆ ಬೇಲಿ ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.

ಮನೆಯಲ್ಲೂ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಕೆಲಸ ಹೇಳುವಾಗ ಭೇದ ಮಾಡುತ್ತೇವೆ. ತಾಯಂದಿರು ಮಕ್ಕಳನ್ನು ಬೆಳೆಸುವಾಗ ಈ ಭೇದ ನಿಲ್ಲಿಸಬೇಕು ಎಂದು ಉಮಾ ಪ್ರಶಾಂತ್ ಕಿವಿಮಾತು ಹೇಳಿದರು.

ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಮೌನ ವಹಿಸಬಾರದು. ದೌರ್ಜನ್ಯಗಳ ವಿರುದ್ಧ ಹೊಂದಿಕೊಳ್ಳುವುದು ಆದರ್ಶ ಗುಣವಲ್ಲ. ನಿಮ್ಮ ಸಮಸ್ಯೆಗಳ ಬಗ್ಗೆ ನೀವೇ ಮೊದಲು ಮಾತನಾಡಬೇಕು ಎಂದೂ ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯೆ ಹಾಗೂ ಅಂಕಣಗಾರ್ತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಅಕ್ಕ ನಾಗಮ್ಮ, ಆಯ್ದಕ್ಕಿ ಲಕ್ಕಮ್ಮ ಅಂಥವರು ನಮಗೆ ಆದರ್ಶವಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವೈದ್ಯೆ ಡಾ. ಶಾಂತಾ ಭಟ್ ಮಾತನಾಡಿ, ಮಹಿಳೆ ತನ್ನ ಹಾಗೂ ತನ್ನ ಕುಟುಂಬವನ್ನು ಉದ್ಧಾರ ಮಾಡಿದರೆ ಸಮಾಜ ಉದ್ಧಾರವಾಗಲು ನೆರವಾದಂತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ಅರುಣ್ ಗುಡ್ಡದಕೆರೆ, ಬಡಾವಣೆ ಪೊಲೀಸ್ ಠಾಣೆ ಪಿ.ಎಸ್.ಐ. ಎಂ.ಆರ್. ಚೌಬೆ, ಸಮ್ಮೇಳನದ ಸಂಚಾಲಕಿ ಸುಧಾ ಜಯರುದ್ರೇಶ್, ಸಹ ಸಂಚಾಲಕಿ ಶೋಭಾ ಕೊಟ್ರೇಶ್, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಗಿರಿಜಾ ಉಮಾಪತಿ, ಎಂ.ಎನ್. ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!