ಭದ್ರಾ ನೀರು : ಹೋರಾಟ ನಿಲ್ಲಿಸಲು ರೈತರ ನಕಾರ

ಭದ್ರಾ ನೀರು : ಹೋರಾಟ ನಿಲ್ಲಿಸಲು ರೈತರ ನಕಾರ

ಹೆದ್ದಾರಿ ತಡೆದು ಪ್ರತಿಭಟನೆ, ತಕ್ಷಣ ನೀರು ಹರಿಸದೇ ಇದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ದಾವಣಗೆರೆ, ಸೆ. 21 – ಭದ್ರಾ ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ 100 ದಿನ ನೀರು ಹರಿಸುವ ಈ ಹಿಂದಿನ ನಿರ್ಧಾರದಂತೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ನೀರಿಗಾಗಿ ಹೋರಾಡುತ್ತಿರುವ ರೈತರು ಹೆದ್ದಾರಿ ತಡೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ತಮ್ಮ ಕಚೇರಿಯಲ್ಲಿ ರೈತರ ಸಭೆ ಕರೆದಿದ್ದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಕಾವೇರಿ ವಿಷಯ ವಾಗಿ ದೆಹಲಿಗೆ ತೆರಳಿದ್ದಾರೆ. ಅವರು ಮರಳಿದ ನಂತರ ನಿರಂತರ ವಾಗಿ ನೀರು ಹರಿಸುವ ರೈತರ ಬೇಡಿಕೆ ಕುರಿತು ಉಪಮುಖ್ಯ ಮಂತ್ರಿ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ರೈತರು ಹೋರಾಟ ನಿಲ್ಲಿಸಬೇಕು ಎಂದು ಕೇಳಿದರು.

ಈಗಾಗಲೇ ನಾಲೆಗಳಿಗೆ ನೀರು ನಿಲ್ಲಿಸಲಾಗಿದೆ. ನಿರ್ಧಾರ ಇನ್ನೂ ವಿಳಂಬವಾದರೆ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತ ನಾಶವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ನೀರು ಹರಿಸುವ ಕುರಿತು ನಾಳೆ ಶುಕ್ರವಾರ ಮಧ್ಯಾ ಹ್ನದ ಒಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ಶಾಂತಿಯುತ ಹೋರಾಟ ನಡೆಸುತ್ತೇವೆ. ನಂತರವೂ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಪರಿಸ್ಥಿತಿ ಕೈ ಮೀರಬಹುದು. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದೂ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಹಶೀಲ್ದಾರ್ ಅಶ್ವತ್ಥ್, ಜಲ ಸಂಪನ್ಮೂಲ ಇಲಾಖೆಯ ಬಿ.ಆರ್.ಪಿ. ವಲಯದ ಸೂಪರಿಂಟೆಂಡಿಂಗ್ ಇಂಜಿನಿಯರ್ ಎನ್. ಸುಜಾತ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ರೈತ ಮುಖಂಡರಾದ  ಶಾಮನೂರು ಲಿಂಗರಾಜು, ಕೊಳೇನಹಳ್ಳಿ ಬಿ.ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ದ್ಯಾವಪ್ಪ ರೆಡ್ಡಿ  ಇತರರಿದ್ದರು.

error: Content is protected !!