ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು

ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು

ಜಗಳೂರಿನಲ್ಲಿ ರಾಜಕೀಯ ಪಕ್ಷಗಳ ಸಭೆಯಲ್ಲಿ ಚುನಾವಣಾಧಿಕಾರಿ ಎಸ್. ರವಿ ಕರೆ

ಜಗಳೂರು, ಏ.10- ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲ ರಾಜ ಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸ ಬೇಕು ಮತ್ತು ಶಾಂತಿಯುತ ಪಾರದರ್ಶಕ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಚುನಾವಣಾಧಿಕಾರಿ ಎಸ್. ರವಿ ಸೂಚನೆ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏಪ್ರಿಲ್ 13ರಂದು ಅಧಿಸೂಚನೆ ಜಾರಿಗೊಂಡು ಅಂದಿನಿಂದಲೇ ನಾಮ ಪತ್ರ ಸ್ವೀಕರಿಸುವ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆ ಗಳ ಬಗ್ಗೆ ಹಾಗೂ ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದರು.

ಅಭ್ಯರ್ಥಿಗಳು ಪ್ರತಿ ದಿನದ ಲೆಕ್ಕವನ್ನು ಸರಿಯಾಗಿ ನಿರ್ವಹಿಸಬೇಕು. ಅಗತ್ಯ ಮಾಹಿತಿಯನ್ನು ಕಚೇರಿಯಲ್ಲಿ ರುವ ವೆಚ್ಚ ವೀಕ್ಷಕರಿಂದ  ಪಡೆದುಕೊಳ್ಳ ಬೇಕು. ರೂ. 40 ಲಕ್ಷ ಮೀರದಂತೆ ಖರ್ಚು ಮಾಡಬೇಕು ಹಾಗೂ ಕಡ್ಡಾಯವಾಗಿ ಚೆಕ್ ಮತ್ತು ಆನ್ಲೈನ್ ಮೂಲಕ ಪಾವತಿಸಬೇಕು ಎಂದು ಸಲಹೆ ನೀಡಿದರು.

ರಾಲಿ, ಸಭೆ, ಸಮಾರಂಭಗಳು ಮತ್ತು ಚುನಾವಣೆಯ ಪ್ರಚಾರಕ್ಕಾಗಿ ಮತ್ತು ತಾತ್ಕಾಲಿಕ ಕಚೇರಿ ತೆರೆಯಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. “ಸುವಿಧಾ ಆಪ್”ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. 24 ಗಂಟೆ ಒಳಗಾಗಿ ಅನುಮತಿ ನೀಡಲಾಗುವುದು. ಆದರೆ, ಸಭೆಗೆ 48 ಗಂಟೆ ಮುಂಚೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಚುನಾವಣಾ ಅಕ್ರಮಗಳ ಪರಿಶೀ ಲನೆಗಾಗಿ ಮೂರು ವಿಚಕ್ಷಣ ದಳಗಳನ್ನು ರಚಿಸಲಾಗಿದೆ. 5 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಸಹ
`ಸಿ ವಿಜಿಲ್ ಮೊಬೈಲ್ ಆಪ್’ ಮೂಲಕ ಫೋಟೋ ವಿಡಿಯೋ ಸಹಿತ ದೂರು ದಾಖಲಿಸಲು ಅವಕಾಶ ಇರುತ್ತದೆ. ಸಾರ್ವಜನಿಕರು ಸಹ ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಸಹಕರಿಸಲು ಚುನಾವಣಾ ಅಧಿಕಾರಿ ಎಸ್. ರವಿ ಮನವಿ ಮಾಡಿಕೊಂಡರು.

ಸಭೆಯಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಜಿ.ಸಂತೋಷ್ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.

ಅಭ್ಯರ್ಥಿಗಳಿಗೆ ಸೂಚನೆ: 

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯ ಅಪರಾಧಗಳಿದ್ದಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮದ ಮೂಲಕ ಮಾಹಿತಿಯನ್ನು ಪ್ರಕಟಿಸಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲು ಅವಕಾಶವಿದ್ದು, ಏಪ್ರಿಲ್ 13ರ ಒಳಗಾಗಿ ನಮೂನೆ 12 ಡಿಯನ್ನು ಸಲ್ಲಿಸಬಹುದು. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಈಗಾಗಲೇ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಶಾಂತಿಯುತ ಪಾರದರ್ಶಕ ಚುನಾವಣೆಗೆ ಸಹಕರಿಸಬೇಕೆಂದು ಚುನಾವಣಾಧಿಕಾರಿ ಎಸ್.ರವಿ ಮನವಿ ಮಾಡಿದರು.

error: Content is protected !!