ದುಗ್ಗಮ್ಮನ `ಮಹಾಪೂಜೆಗೆ’ ಸಜ್ಜಾದ ದೇವನಗರಿ

ಗುಡಿಯ ಮುಂದೆ ನವದುರ್ಗೆಯರ ಬಂಗಾರದ ಅರಮನೆ

ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿಯ ವೈಭವದ ಜಾತ್ರೆಗೆ ಕ್ಷಣಗಣನೆ  ಆರಂಭವಾಗಿದೆ. ಹಬ್ಬದ ಸಿದ್ಧತೆಗಳು ಅಂತಿಮ ಘಟ್ಟ ತಲುಪಿದ್ದು, ಅಮ್ಮನ ವಿಶೇಷ ಪೂಜೆ  ಮತ್ತು ಮಹಾ ಪೂಜೆಯನ್ನು ಕಣ್ತುಂಬಿಕೊಳ್ಳಲು ಅಪಾರ ಭಕ್ತಗಣ, ಭಯ-ಭಕ್ತಿಯಿಂದ ಕಾಯುತ್ತಿದೆ.

ಅಮ್ಮನ ದೇವಸ್ಥಾನ ಇರುವ ಶಿವಾಜಿನಗರದ ಹಳೇಪೇಟೆ ಎಂದರೆ ಅದು ಸಾಲು-ಸಾಲು ದೇವಾಲಯಗಳ ಸಂಗಮ ಕೇಂದ್ರ. ಅನೇಕ ಪುರಾತನ ದೇವಾಲಯಗಳು ಇಲ್ಲಿ ನೆಲೆಗೊಂಡಿವೆ. ಶ್ರೀ ಹನುಮಂತ ದೇವರು, ಶ್ರೀ ವೀರಭದ್ರೇಶ್ವರ , ಶ್ರೀ ಕೊಟ್ಟೂರೇಶ್ವರ, ಶ್ರೀ ಬಕ್ಕೇಶ್ವರ,   ಶ್ರೀ ಶೈಲ ಮಲ್ಲಿಕಾರ್ಜುನ, ಕನ್ಯಕಾಪರಮೇಶ್ವರಿ,   ಶ್ರೀ ಹುಲಿಗೆಮ್ಮ, ಶ್ರೀ ವಿಠಲ ರುಕುಮಾಯಿ, ಶ್ರೀ ಮಾರ್ಕಂಡೇಶ್ವರ, ಶ್ರೀ ಅರಕೇರಮ್ಮ, ಶ್ರೀ ಗಣಪತಿ, ಶ್ರೀ ಬೀರಲಿಂಗೇಶ್ವರ   ಇತ್ಯಾದಿ ದೇವಸ್ಥಾನಗಳಿದ್ದು,  ನಿತ್ಯವೂ ಪೂಜಾ ಕಾರ್ಯಗಳು ಶ್ರದ್ದಾ ಭಕ್ತಿಯಿಂದ ನಡೆಯುತ್ತವೆ. ದೇವಾಲಯಗಳ ನಗರವೆಂಬ ಹೆಗ್ಗಳಿಕೆಗೆ ದಾವಣಗೆರೆ ಪಾತ್ರವಾಗುವಲ್ಲಿ ಈ ಹಳೇಪೇಟೆಯ ಕೊಡುಗೆಯೂ ಅಪಾರ.

ಎರಡು ವರ್ಷ ತುಂಬಿ ಮೂರಕ್ಕೆ ಬೀಳುತ್ತಲೇ ಬರುವ ಹಬ್ಬಕ್ಕೆ ರಾಜ್ಯದ ಎಲ್ಲೆಡೆಯಿಂದ ಮಾತ್ರವಲ್ಲದೆ, ಪಕ್ಕದ  ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತಾದಿಗಳು ಆಗಮಿಸುತ್ತಾರೆ.
ಅಮ್ಮನ ಅದ್ಧೂರಿ ಜಾತ್ರಾ ಮಹೋತ್ಸವದ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ದೇವಸ್ಥಾನದ ಮುಂಭಾಗದಲ್ಲಿ      ಆಕರ್ಷಕವಾಗಿ ನಿರ್ಮಿಸಲಾಗಿರುವ ಮಹಾಮಂಟಪ ‘ನವದುರ್ಗೆಯರ ಸುವರ್ಣ ಅರಮನೆ’ ವೈಭವ ನೋಡುಗರ ಕಣ್ಮನ ಸೆಳೆಯುತ್ತಿದೆ.  ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಸಂಜೀವಕುಮಾರ್ ಮತ್ತು ತಂಡದವರು ಈ ಸುವರ್ಣ ಅರಮನೆಯ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ಪೆಂಡಾಲು ಮತ್ತು ವಿದ್ಯುತ್ ದೀಪಾಲಂಕಾರಕ್ಕೆ ಸುಮಾರು 22 ಲಕ್ಷ ರೂಪಾಯಿಗಳನ್ನು ದೇವಸ್ಥಾನ ಸಮಿತಿ ವೆಚ್ಚ ಮಾಡುತ್ತಿದೆ.

ದೇವಸ್ಥಾನದ ಸುತ್ತ  ಉರುಳು ಸೇವೆ, ದೀಡು ನಮಸ್ಕಾರ ಹಾಕಿ ಹರಕೆ ಸಲ್ಲಿಸುವ ಭಕ್ತಾದಿಗಳಿಗೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಸಮಿತಿ ಮಾಡಿದೆ. ಭಾನುವಾರ `ಸಾರು’ ಹಾಕುವುದರೊಂದಿಗೆ ಹಬ್ಬದ ಪೂಜಾ ಕೈಂಕರ್ಯಗಳು ವಿಧ್ಯುಕ್ತವಾಗಿ ಆರಂಭವಾಗುತ್ತವೆ ಪದ್ಧತಿ ಪ್ರಕಾರ ಗೌಡ್ರು ಮನೆ, ಬಣಕಾರ ಮನೆ, ಪುರವಂತರ ಮನೆ, ತಳವಾರರ ಮನೆ, ಹಟ್ಟೇರ ಮನೆ, ಕಳಸಪ್ಪನವರ ಮನೆ ಸೇರಿದಂತೆ ನೇಮ ಇರುವ ಮನೆಗಳಿಗೆ ಹರಕೆಯ ಕೋಣವನ್ನು ಕರೆದೊಯ್ದು ಪೂಜಿಸಲಾಗುತ್ತದೆ. ಈ ‘ಸಾರು’ಹಾಕುವ ಕಾರ್ಯ ಪದ್ಧತಿ ಪ್ರಕಾರವೇ ನಡೆಯಬೇಕು ಮಾರ್ಗ ಬದಲಿಸುವಂತಿಲ್ಲ.
`ಸಾರು’ ಹಾಕಿದ ನಂತರ ದಾವಣಗೆರೆ ಗಡಿಯೊಳಗೆ ಪರಸ್ಥಳದಿಂದ ಯಾರೂ ಬರುವಂತಿಲ್ಲ ಹಾಗೆಯೇ ಇಲ್ಲಿಂದ ಗಡಿ ದಾಟಿ ಹೊರ ಹೋಗುವುದು ನಿಷಿದ್ಧ ಎಂಬ ಕಟ್ಟುಪಾಡು ಇದೆ.

ಈ ಕಾರಣಕ್ಕೆ ಭಾನುವಾರದ ಒಳಗಾಗಿಯೇ ಪರ ಊರಿನ ಭಕ್ತಾದಿಗಳು ನಗರಕ್ಕೆ ಆಗಮಿಸಿ ಬಂಧುಗಳು ಮತ್ತು ನೆಂಟರಿಷ್ಟರ ಮನೆಯಲ್ಲಿ ಅಥವಾ ವಸತಿ ಗೃಹಗಳಲ್ಲಿ, ದೇವಸ್ಥಾನ ಸಮಿತಿ ವ್ಯವಸ್ಥೆ ಮಾಡಿರುವ ಸ್ಥಳಗಳಲ್ಲಿ ತಂಗುತ್ತಾರೆ. ಈಗಿನ ಯುವ ಪೀಳಿಗೆಯಲ್ಲಿನ ಧಾರ್ಮಿಕ ಮನೋಭಾವ ಬದಲಾದಂತೆ ಪುರಾತನ ಪದ್ಧತಿ,ಆಚರಣೆಗಳೂ ಸಹ ಬಹಳಷ್ಟು ಬದಲಾವಣೆ ಕಾಣುತ್ತಾ ಸಾಗಿವೆ. ಆದರೆ ಅಮ್ಮನ ಮೇಲಿನ ಭಯ-ಭಕ್ತಿ ನಂಬಿಕೆ ಏನೂ ಕಡಿಮೆಯಾಗಿಲ್ಲ. ಬದಲಾಗಿ ಭಕ್ತರ ಸಂಖ್ಯೆ ಮತ್ತು ವ್ಯಾಪ್ತಿ ವಿಸ್ತರಿಸುತ್ತಲೇ ಸಾಗಿದೆ.

ದುರ್ಗಮ್ಮನ ಜಾತ್ರೆ ಜೊತೆಗೆ ಅಮ್ಮನ ದೇವಸ್ಥಾನಗಳಿರುವ ನಗರದ ಗಾಂಧಿನಗರ, ಮ್ಯಾಸಬೇಡರ ಕೇರಿ, ದೇವರಾಜ ನಗರ, ವಿನೋಬನಗರ, ಚೌಡೇಶ್ವರಿ ನಗರಗಳಲ್ಲಿಯೂ  ವಿಶೇಷ ಪೂಜಾ ಕಾರ್ಯಕ್ರಮಗಳು ಮೂಲ ದೇವಸ್ಥಾನದ ಪದ್ಧತಿಯ ಪ್ರಕಾರವೇ ಜರುಗುತ್ತವೆ.

ಮಂಗಳವಾರ ದುಗ್ಗಮ್ಮನ ಎಡೆ ಜಾತ್ರೆ.  ಹೋಳಿಗೆ, ಅನ್ನ-ಮೊಸರು ಪ್ರಿಯಳಾದ ಅಮ್ಮನಿಗೆ ಸೋಮವಾರ ಮಧ್ಯರಾತ್ರಿಯಿಂದಲೇ ಭಕ್ತರು ಅದರಲ್ಲೂ ಮಹಿಳೆಯರು ದೊಡ್ಡದಾದ ಸರತಿ ಸಾಲಿನಲ್ಲಿ ನಿಂತು ಎಡೆ, ಉಡಕ್ಕಿ, ಬಳೆ, ಕಣ, ಹೂವು ಅರಿಶಿಣ-ಕುಂಕುಮ ಇತ್ಯಾದಿ ಅರ್ಪಿಸಿ, ಕಟ್ಟಿಕೊಂಡ ಹರಕೆ ಸಲ್ಲಿಸಿ, ಧನ್ಯತಾಭಾವ ಹೊಂದುತ್ತಾರೆ. ಈ ಭಕ್ತರ ಸಾಲು ದೇವಸ್ಥಾನದ ಬಳಿಯಿಂದ ಎಸ್.ಕೆ.ಪಿ. ರಸ್ತೆಯನ್ನು ದಾಟಿ, ದೊಡ್ಡಪೇಟೆಯ ವಿರಕ್ತಮಠದವರೆಗೂ ಇರುತ್ತದೆ.

ಸಂಜೆ ಶ್ರೀ ಮಹಿಷಾಸುರ ಮರ್ದಿನಿ ಅಲಂಕೃತ ಅಮ್ಮನ ಉತ್ಸವ ಸಕಲ ವಾದ್ಯ ಮೇಳಗಳೊಂದಿಗೆ, ಭಕ್ತರು ಮತ್ತು ದೇವಸ್ಥಾನ ಸಮಿತಿಯ ಹಿರಿಯರೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುತ್ತಿದ್ದರೆ, ಇತ್ತ ದೇವಸ್ಥಾನದ ಬಳಿ ರಾತ್ರಿಯಾಗುತ್ತಲೇ ಅಮ್ಮನ ರೌದ್ರಾವತಾರ ಗೋಚರವಾದಂತೆ ಭಾಸವಾಗುತ್ತದೆ.

ಗುಡಿಯ ಮುಂಭಾಗ ಯುವಕರ ಆರ್ಭಟ,  ಕೂಗಾಟ, ಚೀರಾಟ ಮತ್ತು ಕೇಕೆ ಹಾಕುವ ಭಯಂಕರ ಶಬ್ದ ತಡರಾತ್ರಿಯ ವರೆಗೂ ಕಂಡುಬರುತ್ತದೆ.  ಗುಡಿಯ ಬಲಭಾಗದಲ್ಲಿರುವ ಕಲ್ಲಿನ ಗೋಡೆಗೆ ಯುವಕರ ದಂಡು ತೆಂಗಿನಕಾಯಿಯನ್ನು  ಬೀಸಿ – ಬೀಸಿ ಹೊಡೆದು ಕೇಕೆ ಹಾಕುತ್ತ, ದುಗ್ಗಮ್ಮ ನಿಗೆ ಜೈಕಾರ ಹಾಕುತ್ತಾರೆ. ಇದು ನಸುಕಿನವರೆಗೂ ನಡೆಯುತ್ತಲೇ ಇರುತ್ತದೆ. ‘ಮಹಾಬಲಿ’ಯದೆ ಗುಸು-ಗುಸು. ಅಲ್ಲಂತೆ- ಇಲ್ಲಂತೆ. ಪೊಲೀಸರ ಸರ್ಪಗಾವಲು ಇದ್ದರೂ ಎಲ್ಲೋ ಒಂದು ಕಡೆ ಘಟಿಸಿಯೇ ತೀರುತ್ತದೆ.

ಹೀಗೆ ರಾತ್ರಿಯಿಡೀ ಒಡೆದ ತೆಂಗಿನ ಕಾಯಿಗಳ ತುಂಡುಗಳನ್ನು ಬೆಳಿಗ್ಗೆ ಬೇಯಿಸುವ ಜೋಳದ ರಾಶಿಗೆ, ಕೋಣದ ರಕ್ತದ ಜೊತೆಗೆ ಮಿಶ್ರಣ ಮಾಡಲಾಗುತ್ತದೆ. ಅಲ್ಲದೆ ಭಕ್ತರು ತಂದಂತಹ ಅನ್ನ ಮತ್ತು ಹೋಳಿಗೆಯನ್ನು ಸಹ ಚರಗದ ರಾಶಿಯ ಮೇಲೆ ಹರಡಲಾಗುತ್ತದೆ. ಇಲ್ಲಿ ಒಬ್ಬೊಬ್ಬರದು ಒಂದೊಂದು ಜವಾಬ್ದಾರಿ. ರೈತರು ಧಾನ್ಯ ನೀಡಿದರೆ, ಕುಂಬಾರರು ಮಡಿಕೆಗಳನ್ನು ಮೇದಾರರು ಬುಟ್ಟಿಗಳನ್ನು ನೀಡುತ್ತಾರೆ. ಅವರವರ ಪಾಲಿಗೆ ಬಂದ ಕೆಲಸಗಳನ್ನು ಚಾಚೂ ತಪ್ಪದಂತೆ, ಲೋಪವಾಗದಂತೆ ಮಾಡುತ್ತಾರೆ.

ಸೂರ್ಯೋದಯಕ್ಕೂ ಮುನ್ನವೇ ಮಹಾ ಪೂಜೆ ಆಗುತ್ತಲೇ ಚರಗ ಚೆಲ್ಲುವ ಕಾರ್ಯ ಆರಂಭವಾಗುತ್ತದೆ. ತಲೆಗೆ ವಸ್ತ್ರ ಸುತ್ತಿಕೊಂಡ ಯುವಕರು ಹಣೆ ಮುಖಕ್ಕೆಲ್ಲ, ರಕ್ತದ ಕಲೆಯಂತೆ, ಕುಂಕುಮ ಹಚ್ಚಿಕೊಂಡು ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು, ಹುಲಿಗ್ಯೋ, ಹುಲಿಗ್ಯೋ ಎಂದು ಕೇಕೆ ಹಾಕುತ್ತಾ, ಊರ ಗಡಿವರೆಗೂ ಚರಗ  ಚೆಲ್ಲುತ್ತಾರೆ. ಹೀಗೆ ಚರಗ ಚೆಲ್ಲುವುದರಿಂದ ಊರಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ. ದುಷ್ಟಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ಬಲಿ ಕೋಣನ ತಲೆಗೆ `ಘಟ’ ಎನ್ನುತ್ತಿದ್ದರು.  ಅದನ್ನು ಗಾಂಧಿನಗರದಿಂದ ದುಗ್ಗಮ್ಮನ ದೇವಸ್ಥಾನದ ಬಳಿ ತಂದು ಪೂಜಿಸಿದ ನಂತರ, ಚರಗ ಆರಂಭಿಸಲಾಗುತ್ತಿತ್ತು. ಕೋಣನ ತಲೆಯನ್ನು ಬೇವಿನ ಸೊಪ್ಪಿನ ಜೊತೆ ಬುಟ್ಟಿಯಲ್ಲಿ ಹೊತ್ತು ಕೊಂಡು ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು  ಮೆರವಣಿಗೆ ನಡೆಸಿ ಚರಗ ಚೆಲ್ಲಲಾಗುತ್ತಿತ್ತು. ಆದರೆ ಈಗ ಅದಕ್ಕೆ ಅವಕಾಶ ಇಲ್ಲದೇ ಇರುವ ಕಾರಣ ಬರೀ ಬುಟ್ಟಿಯಲ್ಲಿ  ಕಾಳುಗಳನ್ನು ತುಂಬಿಕೊಂಡು ಊರ ಗಡಿತನಕ ಚೆಲ್ಲಲಾಗುತ್ತದೆ .

ಚರಗ ಮುಂದೆ ಮುಂದೆ ಸಾಗುತ್ತಲೇ ಇತ್ತ, ನಗರದ ಎಲ್ಲ ಕಡೆಯಿಂದಲೂ ಭಕ್ತರು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕುತ್ತಾರೆ ಉಧೋ, ಉಧೋ, ದುಗ್ಗಮ್ಮ  ನಿನ್ನಾಲ್ಕುದೋ ಉಧೋ ಎನ್ನುವ ಉದ್ಘಾರ ಮಾರ್ಧನಿಸುತ್ತದೆ. ಮಹಿಳೆಯರು, ಪುರುಷರು, ಅಬಾಲ ವೃದ್ಧರಾದಿಯಾಗಿ ಉರುಳು ಸೇವೆ, ದೀಡು ನಮಸ್ಕಾರ, ಬೇವಿನ ಉಡುಗೆ ಸೇವೆಯ ಹರಕೆ  ಸಲ್ಲಿಸುತ್ತಾರೆ. ಗುಡಿಯತ್ತಾ ತೆರಳಿ ಪ್ರದಕ್ಷಿಣೆ ಹಾಕಿ, ಅಲ್ಲಿಯೇ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಧನ್ಯತಾಭಾವ ಹೊಂದುತ್ತಾರೆ.

ಚರಗ ಪೂರ್ಣಗೊಳ್ಳುತ್ತಲೇ ಗುಡಿಯ ಬಾಗಿಲು ತೆರೆದು ಶುದ್ಧಗೊಳಿಸಿ ವಿಶೇಷ ಪೂಜಾ ಕಾರ್ಯಗಳನ್ನು ಅರ್ಚಕರು ಆರಂಭಿಸುತ್ತಾರೆ. ನಂತರ ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ. ಕುರಿ-ಕೋಳಿಗಳನ್ನು ಬಲಿ ಕೊಡುವ ಭಕ್ತರು ಅಮ್ಮನ ದರ್ಶನ ಪಡೆದು ಅಲ್ಲಿಂದ ಅರಿಶಿಣ-ಕುಂಕುಮ ಮತ್ತು ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗಿ ಕುರಿ-ಕೋಳಿಗಳ ಹಣೆಗೆ ಹಚ್ಚಿ, ಬಾಯಲ್ಲಿ ತೀರ್ಥ ಹಾಕಿ ನಂತರ ಬಲಿಕೊಟ್ಟು ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ.

ಬುಧವಾರ ಮಧ್ಯಾಹ್ನದ ನಂತರ ನಗರದ ಎಲ್ಲೆಡೆ  ಮಸಾಲೆಯದೇ ಘಮ ಘಮ.  ಹರಿತವಾದ ಕತ್ತಿಯಿಂದ ಕುತ್ತಿಗೆ ಸೀಳಿಸಿಕೊಂಡು, ಕಣ್ಣು ಪಿಳಿಪಿಳಿ ಬಿಡುತ್ತಾ, ಬಾಲ ಅಲ್ಲಾಡಿಸುತ್ತಾ ಹಾಗೆಯೇ ಕಣ್ಣು ಮುಚ್ಚುವ ಕುರಿ-ಕೋಳಿಗಳ ಮಾರಣ ಹೋಮವೇ ನಡೆದುಹೋಗುತ್ತದೆ. ಇಡಿಯಾಗಿ ಕುರಿ, ಕೋಳಿಗಳನ್ನು ತರಲಾಗದ ಬಡವರು ಮತ್ತು ತಾರದವರು ಮಾಂಸದಂಗಡಿಯಲ್ಲಿ ತಮಗೆ ಬೇಕಾದಷ್ಟು ಕೆ.ಜಿ. ಖರೀದಿಸುತ್ತಾರೆ. ಮಾಂಸದ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ.ಅಂಗಡಿಗಳ ಮುಂದೆ ಕಡಿದ ಕುರಿಗಳ ತಲೆಗಳ ರಾಶಿ ನೋಡಲು ಭಯವೆನಿಸುತ್ತದೆ. ಹಲಾಲ್ ಮಾಡುವ, ಕುರಿ ತಲೆ ಸುಡುವ ಮತ್ತು ಕುರಿ ಚರ್ಮ ಕೊಳ್ಳುವ ವ್ಯಾಪಾರಸ್ಥರಿಗೆ  ಬಿಡುವಿಲ್ಲದ ಕೆಲಸ.

ಜಾತ್ರೆಯೆಂದರೆ ಅದು ಬರೀ ಅಮ್ಮನ ಪೂಜೆ ಮಾತ್ರವಲ್ಲ  ಅಲ್ಲಿ ಭಕ್ತರಿಗೆ ಬೇಕಾದಂತಹ ಎಲ್ಲವೂ ಲಭ್ಯ. ಮುಖ್ಯವಾಗಿ ಅರಿಶಿಣ-ಕುಂಕುಮ, ಬಳೆ, ಮಕ್ಕಳಿಗೆ ಮುದ ನೀಡುವ ಆಟಿಕೆಗಳು, ತಿಂಡಿ ತಿನಿಸುಗಳು, ಮನರಂಜಿಸಲು ನಾಡಿನ ಹೆಸರಾಂತ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಪ್ರಿಯರಿಗೆ ಮಲ್ಲಯುದ್ಧ, ಕುರಿ ಕಾಳಗ, ರುಚಿ -ರುಚಿಯಾದ ಊಟ.
ಜಾತ್ರೆಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ  ಅಗತ್ಯ ಸೌಲಭ್ಯ   ಕಲ್ಪಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಸೂಚನೆ ನೀಡಿದ್ದಾರೆ.

ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಅವರು ಸಹ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅಗತ್ಯ ಸೌಕರ್ಯ ಒದಗಿಸುವಂತೆ ಪಾಲಿಕೆ ಸಿಬ್ಬಂದಿ ವರ್ಗದವರಿಗೆ ಸೂಚಿಸಿದ್ದಾರೆ.
ದುಬಾರಿಯಾದ ಕುರಿಗಳು… 20 ಕೆಜಿ ತೂಗುವ ಕುರಿಗಳ ಬೆಲೆಯೇ  28ರಿಂದ 30 ಸಾವಿರವಂತೆ, ಇನ್ನು ಕೋಳಿಗಳು ಸಹ ಐದು ನೂರರವರೆಗೆ ತಮ್ಮ ಬೆಲೆಯನ್ನು ಹೆಚ್ಚಿಸಿಕೊಂಡಿವೆ.

‘ಈ ಹಬ್ಬಕ್ಕೆ ಮಾಡುವ ಸಾಲ ಮುಂದಿನ ಹಬ್ಬದವರೆಗೂ ಇರುತ್ತದೆ. ಕೆಲವರ ಸಾಲ ಹಬ್ಬ ಮುಗಿದರೂ ತೀರಿರುವುದಿಲ್ಲ’ ಎಂದು ಹೇಳುವ ಹಗೇದಿಬ್ಬ ಸರ್ಕಲ್ ನ ಸಿದ್ದಪ್ಪ  ಹಬ್ಬ ಐದು ವರ್ಷಕ್ಕೊಮ್ಮೆ ನಡೆದರೆ ಎಲ್ಲರಿಗೂ ಚೆಂದ ಎನ್ನುತ್ತಾರೆ.


ದುಗ್ಗಮ್ಮನ `ಮಹಾಪೂಜೆಗೆ' ಸಜ್ಜಾದ ದೇವನಗರಿ - Janathavani

ಉತ್ತಂಗಿ ಕೊಟ್ರೇಶ್,
9886411119
[email protected]

error: Content is protected !!