ದಾವಣಗೆರೆ ವೃತ್ತಿ ರಂಗೋತ್ಸವ : ಮೂರು ಹಗಲು, ಮೂರು ರಾತ್ರಿಗಳ ಮಹಾ ಬೆರಗು

ದಾವಣಗೆರೆ ವೃತ್ತಿ ರಂಗೋತ್ಸವ : ಮೂರು ಹಗಲು, ಮೂರು ರಾತ್ರಿಗಳ ಮಹಾ ಬೆರಗು

ದಾವಣಗೆರೆ ನಗರದ ದೃಶ್ಯಕಲಾ ಮಹಾವಿದ್ಯಾಲ ಯದ ಆವರಣದಲ್ಲಿ ಮಾರ್ಚ್ 15, 16, 17 ರಂದು ಜರುಗಲಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವಕ್ಕೆ ಉತ್ಸಾಹದ ವಿನೂತನ ರಂಗು ಮೂಡಿದಂತಾಗಿದೆ.

ಅಂದಹಾಗೆ ಇದು ದಾವಣಗೆರೆ ರಂಗಾಯಣದ ಪ್ರಥಮ `ರಾಷ್ಟ್ರೀಯ ವೃತ್ತಿ ರಂಗೋತ್ಸವ’ ಆಗಿದೆ. ಮೂರು ಹಗಲು ಮತ್ತು ಮೂರು ರಾತ್ರಿಗಳ ಕಾಲ ರಂಗದ ಮಹಾ ಬೆರಗು. ಏಳೆಂಟು ಬಗೆಯ ಕಾರ್ಯಕ್ರಮಗಳು ಜರುಗುತ್ತಲಿವೆ. ರಂಗ ಸಂಸ್ಕೃತಿಯ ದಿವಿನಾದ ಸಾಕ್ಷಿಯಂತಿರುವ ಮುಖ್ಯಮಂತ್ರಿ ಚಂದ್ರು ಅವರು ವೃತ್ತಿ ರಂಗೋತ್ಸವ – 2025 ಉದ್ಘಾಟಿಸುವರು.   ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ರಂಗ ನಾಟಕಗಳ ಉದ್ಘಾಟನೆ ನೆರವೇರಿಸುವರು. ಶ್ರೀನಿವಾಸ ಜಿ. ಕಪ್ಪಣ್ಣ ಸಮಾರೋಪ ಭಾಷಣ ಮಾಡುವರು. ಇದೆಲ್ಲಾ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜರುಗುತ್ತಿರುವುದು ಅದರ ವಿಭಿನ್ನ ರಂಗಚಿಂತನೆಗೆ ಮೆರಗು ಮೂಡಿಸಿದೆ. ಅದರಲ್ಲೂ ನೂತನ ಬಯಲು ರಂಗಮಂದಿರದ ಚೆಂದನೆಯ ವಿನ್ಯಾಸದಲ್ಲಿ ಮೂರು ದಿನ – ರಾತ್ರಿಗಳ ರಂಗ ಸಂಭ್ರಮ ಅದಾಗಿದೆ. ಪ್ರತಿ ದಿನ ಜರುಗುವ ವೃತ್ತಿ ರಂಗಭೂಮಿ ಕುರಿತಾದ ವಿಚಾರ ಸಂಕಿರಣಗಳಲ್ಲಿ ಮೂಡಿಬರುವ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಇರಾದೆಯೂ ನಮ್ಮದು. ವೃತ್ತಿರಂಗ ಪರಂಪರೆಯ ಸೂಕ್ಷ್ಮತೆ, ಜೀವಚೈತನ್ಯ ಗುರುತಿಸಬಹುದಾದ ಚಿಂತನೆಗಳು ಅಲ್ಲಿರಬಲ್ಲವು.

ಮೂರು ರಾತ್ರಿ; ಕನ್ನಡ, ತಮಿಳು, ತೆಲುಗು ನಾಟಕಗಳ ಹಬ್ಬ. ಮೊದಲಿಗೆ ಕನ್ನಡದ ನಾಟಕ. ಅದು ಗದಗಿನ ಪ್ರಸಿದ್ಧ ನಾಟಕಕಾರ ಮಹಾದೇವ ಹೊಸೂರ ಬರೆದ `ಅಕ್ಕ ಅಂಗಾರ ತಂಗಿ ಬಂಗಾರ’ ಎಂಬ ಸಾಮಾಜಿಕ ನಾಟಕ. ಈಗಾಗಲೇ ಕೊಪ್ಪಳ ಮತ್ತು ಬನಶಂಕರಿ ಜಾತ್ರೆಗಳಲ್ಲಿ ಲಕ್ಷ ಲಕ್ಷ ಪ್ರೇಕ್ಷಕ ಪ್ರಭುಗಳ ಮನಸೂರೆಗೊಂಡ ನಾಟಕ ಇದಾಗಿದೆ. ಅಕ್ಕ ತಂಗಿಯರಿಬ್ಬರೂ ಒಬ್ಬನೇ ಯುವಕನ ಮೋಹಪಾಶದ ಬಲೆಯಲ್ಲಿ ಬೀಳುವ, ಭರಪೂರ ಕಚಗುಳಿಯುಳ್ಳ ಕಥನ ವಸ್ತು. ಸಂಮೋಹಕ ವಿನೋದ ಉಕ್ಕಿಸುವಲ್ಲಿ ಅದು ಮೊದಲ ಸಾಲಿನ ರಂಗಕಾವ್ಯವೇ ಹೌದು. ಅಂದಹಾಗೆ ಜೇವರ್ಗಿ ರಾಜಣ್ಣ ನಿರ್ದೇಶನ ಮತ್ತು ನಿರ್ಮಾಣ ತಂಡದ ನಾಟಕವಿದು. ಕಿರುತೆರೆಯ ತಾರೆಯರಾದ ಸುಜಾತ ಮತ್ತು ನೀಲಾ ಎಂಬ ಜೇವರ್ಗಿ ಸೋದರಿಯರ ಮನೋಜ್ಞ ಅಭಿನಯದ ರಸದೌತಣ. ವರ್ತಮಾನದ ವೃತ್ತಿ ರಂಗ ನಾಟಕ ಗಳಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ರಂಗಪ್ರಯೋಗ. 

 ಅಂದಹಾಗೆ ಎರಡನೇ ದಿನದ್ದು ತಮಿಳು ನಾಟಕ. ಪಾಂಡಿಚೆರಿಯ ವೆಲಿಪ್ಪಡೈ ಥಿಯೇಟರ್ ಮೂಮೆಂಟ್ ತಂಡದ `ನಡಾಪಾವಾಡೈ’ ಎಂಬ ಗಂಭೀರ ಚಿಂತನೆಗೆ ತೊಡಗಿಸುವ ಸ್ತ್ರೀ ಪರ ಒಲವಿನ ಪ್ರಯೋಗಶೀಲ ರಂಗನಾಟಕ. ಹೆಣ್ಣೊಬ್ಬಳು, ತಂದೆಯ ಶವಸಂಸ್ಕಾರ ನಿರ್ವಹಿಸುವ ದಿಟ್ಟ ಸಾಹಸದ ನಿಲುವು. ನಾಟಕದುದ್ದಕ್ಕು ಓತಪ್ರೋತ ಪ್ರವಹಿಸುವ ಪ್ರಗತಿಪರ ತಾತ್ವಿಕತೆಯನ್ನು ಮೆರೆಯುತ್ತದೆ. ಇದನ್ನು ಎಸ್. ರಾಮಸ್ವಾಮಿ ರಚಿಸಿ, ನಿರ್ದೇಶಿಸಿದ್ದಾರೆ.

ಮೂರನೇ ದಿನದ ತೆಲುಗು ನಾಟಕದ ಹೆಸರು ಮಾಯಾ ಬಜಾರ್. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ತೆಲಂಗಾಣ ಸುರಭಿ ತಂಡದ ನಾಟಕ. ನೂರಾ ನಲವತ್ತು ವರ್ಷಗಳಷ್ಟು ಹಳತಾದುದು ಸುರಭಿ ತಂಡ. ಶ್ರೀ ವೆಂಕಟೇಶ್ವರ `ಸುರಭಿ’ ನಾಟಕ ಮಂಡಳಿ ಅದಾಗಿದೆ. ಒಂದೇ ಕುಟುಂಬದ ನಲವತ್ತಕ್ಕೂ ಹೆಚ್ಚು ಮಂದಿ ಕಲಾವಿದರಿಂದ ಮಾಯಾಬಜಾರ್ ರೂಪುಗೊಂಡಿದೆ. ಇಲ್ಲಿ ಹತ್ತು ಹಲವು ಚಮತ್ಕಾರ, ಕೌತುಕ, ಪೌರಾಣಿಕ ಸನ್ನಿವೇಶಗಳು ನಾಟಕದ ತುಂಬಾ ತುಂಬಿ ತುಳುಕು ತ್ತವೆ. ಕ್ಷಣ ಕ್ಷಣಕ್ಕೂ ಪ್ರೇಕ್ಷಕರ ಕುತೂಹಲ ಕೆರಳಿಸುವ ಸುಸಂಪನ್ನ ಮಾಯಾಲೋಕವನ್ನೇ ಸೃಷ್ಟಿಸುವ ನಾಟಕ.  

 ರಂಗಭೂಮಿಯ ಭಾವದೊಡಲು ತುಂಬಿ ತುಳುಕಿದಾಗ ಭಾಷೆಯೆಂಬುದು ತೊಡಕಾಗದು. ಹೀಗಾಗಿ ತೆಲುಗು ಮತ್ತು ತಮಿಳು, ಕನ್ನಡಿಗರಿಗೆ ಬಾರದ ಭಾಷೆಯೆನಿಸಿದರೂ ರಂಗಸಂವ ಹನಕ್ಕೆ ಅಡ್ಡಿಯೆನಿಸದು. ಇನ್ನುಳಿದಂತೆ ಇಡೀ ಉತ್ಸವವೆಂದರೆ ವೃತ್ತಿ ರಂಗದ ಎಲ್ಲ ಆಯಾಮಗಳ ಕುರಿತು ಮತ್ತದರ ಬದಲಾಗುತ್ತಿರುವ ರಂಗ ಸ್ವರೂಪದ ಮೇಲೆ ಬೆಳಕು ಚೆಲ್ಲುವ ವಿಚಾರಧಾರೆಗಳ ಮೊತ್ತ. ಪ್ರತಿದಿನ ಮುಂಜಾನೆ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಭಿನ್ನ ಚಿಂತನೆಯ ವಿಚಾರ ಸಂಕಿರಣಗಳು.

ಉತ್ಸವದ ಮತ್ತೊಂದು ಮಹತ್ವದ ವಿಷಯವೆಂದರೆ;
ಡಾ. ಶೃತಿರಾಜ್ ಮತ್ತು ಸಂಗಡಿಗರಾದ ನಂದಾದೇವಿ, ಅಸ್ಮಿತಾ ಅವರಿಂದ ವೃತ್ತಿ ರಂಗದ ರಂಗಸಂಗೀತ ಪರಂಪರೆಯನ್ನು ಬಿಂಬಿಸುವ ರಂಗಗೀತೆಗಳ ಗಾಯನ. ಇಡೀ ಉತ್ಸವಕ್ಕೆ ಮೆರಗು ನೀಡುವಂತಹ ಇನ್ನೊಂದು ಸಂಗತಿಯೆಂದರೆ ಅಜ್ಜಂಪುರದ ಎ.ಎಸ್. ಕೃಷ್ಣಮೂರ್ತಿ ಸಂಪಾದಿಸಿರುವ ರಂಗ ದಾಖಲೆಗಳ ಪ್ರದರ್ಶನ. ಅವು ಏನಿಲ್ಲವೆಂದರೂ ಅರ್ಧ ಶತಮಾನದಷ್ಟು ಸಮೃದ್ಧ ಆಯುಷ್ಯ ಹೊಂದಿವೆ. ನಾಕೈದು ದಶಕಗಳಷ್ಟು ಹಿಂದಿನಿಂದಲೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ರಂಗ ದಾಖಲೆಗಳು. ಅರ್ಧ ಶತಮಾನದಿಂದ ಕೃಷ್ಣಮೂರ್ತಿ ಸಂಗ್ರಹಿಸಿದ ಸಹಸ್ರ ಸಹಸ್ರ ಸಂಖ್ಯೆಯ ದಾಖಲೆಗಳನ್ನು ಸಾಗಣೆ ಮಾಡುವುದೇ ದುಸ್ತರ. ನಾಕೈದು ಕ್ವಿಂಟಲ್ ಭಾರದ ಅವುಗಳನ್ನು ಜತನವಾಗಿ ಸಾಗಿಸಲು ಮಿನಿ ಲಾರಿಯೇ ಆಗಬೇಕು. ಮೂವರು ಕೆಲಸಗಾರರೇ ಬೇಕು. ಇಂತಹ ಅಪರೂಪದ ದಾಖಲೆಗಳನ್ನು ಸಂಪಾದಿಸಿರುವ ಕೃಷ್ಣಮೂರ್ತಿ, ಬೆಳಗಾವಿಯಲ್ಲಿ ಜರುಗಿದ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ್ದಾರೆ. 

ಇಂತಹ ಅಪರೂಪದ ರಂಗಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯು ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿ ಸಿದೆ. ಕೃಷ್ಣಮೂರ್ತಿ ಅವರ ಸಮಗ್ರ ರಂಗ ದಾಖಲೆಗಳ ಸಂಗ್ರಹದ ಪ್ರದರ್ಶನ. ಅಲ್ಲದೇ ಅತ್ಯಪರೂಪದ ರಂಗ ನಾಟಕದ ಪುಸ್ತಕಗಳು ಮೂರು ದಿವಸವೂ ಪ್ರದರ್ಶನಗೊಳ್ಳುತ್ತವೆ. ಅದರ ಜತೆಗೆ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಕಲಾ ಶಿಬಿರದಲ್ಲಿ ರಚಿಸಿದ ಮತ್ತೊಂದು ಮಹತ್ವದ ಚಿತ್ರಕಲಾ ಪ್ರದರ್ಶನ. ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲ ಯದ ವಿದ್ಯಾರ್ಥಿಗಳ ಸೃಜನಾತ್ಮಕ ರಂಗಕಲೆ ಯನ್ನು ಬಿಂಬಿಸುವ ಹತ್ತು ಹಲವು ಪೇಂಟಿಂಗ್ಸ್. ವೃತ್ತಿ ರಂ ಗಭೂಮಿ ನಾಟಕಗಳು ಮತ್ತು ಆಧುನಿಕ ರಂಗನಾಟಕ ದೃಶ್ಯಗಳ ಸೃಜನಶೀಲ ಚಿತ್ರಗಳು ಅಲ್ಲಿವೆ. ಅದರಲ್ಲೂ ಬಹುಮಾನಿತ ಚಿತ್ರಗಳ ಪ್ರದರ್ಶನ. ಅದರಲ್ಲಿ ರಂಗೋತ್ಸವದ ಲಾಂಛನವೂ ಇರಬಲ್ಲದು.

ಹಿರಿಯ ರಂಗ ಕಲಾವಿದರೊಂದಿಗೆ ಸಂವಾದ ಮತ್ತು ರಂಗ ಗೌರವವೂ ಇರುತ್ತದೆ. ಕಾಲೇಜು ವಿದ್ಯಾರ್ಥಿಗಳಿ ಗಾಗಿ ನಾಟಕ ವಿಮರ್ಶಾ ಸ್ಪರ್ಧೆ ಕೂಡಾ ಏರ್ಪಡಿಸಲಾಗಿದೆ. ಮೂರು ದಿನ ಜರುಗುವ ಈ ನಾಟಕಗಳನ್ನು ನೋಡಿ ವಿಮರ್ಶೆ ಬರೆಯಬೇಕು. ಈ ಸ್ಪರ್ಧೆಯಲ್ಲಿ ಬಹುಮಾನಕ್ಕೆ ಭಾಜನಗೊಂಡವರನ್ನು ಮಾರ್ಚ್ 27ರಂದು ಜರುಗುವ ವಿಶ್ವ ರಂಗಭೂಮಿ ದಿನಾಚ ರಣೆ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು   


– ಮಲ್ಲಿಕಾರ್ಜುನ ಕಡಕೋಳ   

error: Content is protected !!