ಓ… ವ್ಯಾಮೋಹದ ಕಾರ್ಮೋಡವೇ…

ಓ…ಮೋಹದ ಮೋಡವೇ
ಆವರಿಸದಿರೆನ್ನ ಮನದಾಗಸವ….
ನಿಚ್ಚಳದ ನಿಚ್ಚಣಿಕೆ ಏರಿ
ಸಾಧನೆಯ ಶಿಖರ ತಲುಪಿ
ಸಂಸ್ಕಾರ, ಸಂಸ್ಕೃತಿ, ಸಂಪ್ರೀತಿಯ
ಬಾವುಟ ಹಾರಿಸುವ ತನಕ!
ಓ…ವ್ಯಾಮೋಹದ ಕಾರ್ಮೋಡವೇ
ಬಿರುಮಳೆಯಾಗಿ ಸುರಿಯದಿರು….

ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ
ಕೆಸರುಂಡು ಹಸಿರಾಡಿ ಹಾಲ್ದೆನೆ ರಾಶಿಯ ಬೆಳ್ಳಿಚುಕ್ಕಿ               
ನೆಲ-ಮುಗಿಲು ಬೆಳಗಿ ‌ಮೂಡುವ ತನಕ!
ಓ..ಸಮ್ಮೋಹದ ಮೋಹನ ಮುರುಲಿಯೇ
ಕಾಡದಿರು, ಹಾಡದಿರಪಸ್ವರವ
ಭ್ರಮೆಯ ಮುಸುಕಿನೊಳ ಭ್ರಮರದಂತೆ….!?

ನುಡಿಸು ರಾಗ-ತಾಳ-ಲಯ-ಸ್ವರದಿ
ನಿಂದನೆ; ವಂದನಾ ರೂಪವಾಗಿ
ಅವಮಾನವದೋ ಸನ್ಮಾನವಾಗಿ
ಮಾನವತೆಯ ತತ್ವ ಮೊದಲಾಗಿ
ಸಮಾನತೆಯ ಮಹತ್ವ ಮೇಲಾಗಿ

ನಂಜಿನ ಕೊರಡು ಗಂಧವಾಗಿ;
ಪರಿಮಳದ ಪಲ್ಲವಿ ಪಲ್ಲವಿಸುವತನಕ
ಕ್ರೌರ್ಯದ ಕಾಳಿ ಮರ್ಧನ ಗೈವತನಕ!?


ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.
mahanteshbnittur@gmail.com

error: Content is protected !!