ಕೂಡ್ಲಿಗಿ : ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೂಡ್ಲಿಗಿ, ಮಾ.5-  ಎರಡು ಕಾಲುಗಳನ್ನು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಕೂಡ್ಲಿಗಿ ಸಮೀಪದ ಮೊರಬನಹಳ್ಳಿ ಹೊರವಲಯದಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ತಾಲ್ಲೂಕಿನ ಗುಡೇಕೋಟೆ ಗ್ರಾಮದ  ದೊಡ್ಡ ತಿಪ್ಪಣ್ಣ (32) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದುರ್ದೈವಿಯಾಗಿದ್ದು , ಈತ ಕಳೆದ 8 ವರ್ಷಗಳ ಹಿಂದೆ ಮೊರಬನಹಳ್ಳಿಯ ತಾಯಮ್ಮ (ರಾಧಿಕಾ) ಳೊಂದಿಗೆ ಮದುವೆಯಾಗಿದ್ದು, ಈತನಿಗೆ 3 ಮಕ್ಕಳಿದ್ದಾರೆ. ವರ್ಷದಿಂದ ಗಂಡ, ಹೆಂಡತಿ ನಡುವೆ ಜಗಳ, ಮನಸ್ತಾಪ ಇದ್ದ ಕಾರಣ ಪತ್ನಿ ತನ್ನ ತವರುಮನೆಯಲ್ಲಿ ವಾಸ ಮಾಡುತ್ತಿದ್ದಳು. 

ಗುಡೇಕೋಟೆಯಿಂದ ಗುರುವಾರ ರಾತ್ರಿ ಹೆಂಡತಿ ಮನೆಗೆ ದೊಡ್ಡ ತಿಪ್ಪಣ್ಣ ಹೋಗಿಬಂದಿದ್ದು, ರಾತ್ರಿ 10.45 ರವರೆಗೆ ಮೊರಬನಹಳ್ಳಿ ಗ್ರಾಮದ ಪರಿಚಯಸ್ಥರೊಂದಿಗೆ ದೊಡ್ಡ ತಿಪ್ಪಣ್ಣ ಮಾತನಾಡಿದ್ದಾನೆ. ಬೆಳಿಗ್ಗೆ ನೋಡಿದರೆ ಊರ ಹೊರಗಡೆ ಮರದಲ್ಲಿ ಕಾಲು ಕಟ್ಟಿಕೊಂಡು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 

ಹೆಂಡತಿ ಹಾಗೂ ಹೆಂಡತಿ ಮನೆಯವರ ಕಿರುಕುಳದಿಂದ ಬೇಸತ್ತು ನನ್ನ ಮಗ ನೇಣು ಹಾಕಿಕೊಂಡಿದ್ದಾನೆ ಎಂದು ಮೃತನ ತಾಯಿ ತಿಪ್ಪಮ್ಮ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!