ಪಕ್ಷ, ರಾಜಕೀಯದ ಶುದ್ಧೀಕರಣ ಆಗಬೇಕಿದೆ

ಪಕ್ಷ, ರಾಜಕೀಯದ ಶುದ್ಧೀಕರಣ ಆಗಬೇಕಿದೆ

ಕೊಟ್ಟೂರು, ಫೆ. 1 – ಸ್ವಾತಂತ್ರ್ಯ ದುರ್ಬಳಕೆ ಯಾಗಿ ದೇಶ ಅತಂತ್ರವಾಗುತ್ತಿದೆ. ಸಂವಿಧಾನ ಗೌರವಿಸದೇ ಲೂಟಿ, ಭ್ರಷ್ಟಾಚಾರಗಳು ನಡೆಯು ತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷಗಳು ಹಾಗೂ ರಾಜಕೀಯದ ಶುದ್ಧೀಕರಣ ಆಗಬೇಕಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲೆ ಉದ್ಧಾರ ಮಾಡುತ್ತೇವೆ ಎಂದು ರಾಜಕಾರಣಿಗಳು ಭರವಸೆ ನೀಡುತ್ತಾರೆ. ಆದರೆ, ಈ  ಬಗ್ಗೆ ಕಾಳಜಿ ವಹಿಸದ ಕಾರಣ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.

ನಾನು 70 ವರ್ಷವಾದಾಗ ರಾಜಕೀಯದಲ್ಲಿರುವುದಿಲ್ಲ ಎಂಬ ನಿರ್ಧಾರ ಮಾಡಿದ್ದೆ. ಉಳಿದವರೂ ಅದೇ ನಿರ್ಧಾರ ಮಾಡಲಿ. ಈಗ ಗಾಲಿ ಕುರ್ಚಿಯಲ್ಲಿರುವವರಿಗೂ ಅಧಿಕಾರ ಬೇಕಿದೆ. ನಮ್ಮ ಮಕ್ಕಳೇ ಅಧಿಕಾರ ವಹಿಸಿಕೊಳ್ಳಬೇಕು ಎಂಬ ಸ್ವಾರ್ಥ ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವವೇ? ಇದು ಸರ್ವರಿಗೂ ಸಮಬಾಳು ಸಮಪಾಲೇ? ಎಂದವರು ಪ್ರಶ್ನಿಸಿದರು.

ಮತದಾನ ಮಾಡಬೇಕಾ ದರೆ ಕನ್ಯಾದಾನ ಮಾಡುವಷ್ಟೇ ಎಚ್ಚರಿಕೆ ವಹಿಸಬೇಕು. ನಮ್ಮ ಮತ ಪಡೆಯುವವನು ಯೋಗ್ಯ ನೇ? ನಮ್ಮನ್ನು ಸರಿಯಾಗಿ ನೋಡುತ್ತಾನಾ? ಕಾಪಾಡುತ್ತಾನಾ? ಎಂಬುದನ್ನು ನೋಡಿ ಮತ ಚಲಾಯಿಸಿ ಎಂದವರು ಕಿವಿಮಾತು ಹೇಳಿದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ತರಳಬಾಳು ಹುಣ್ಣಿಮೆ ಕೇವಲ ಕಾರ್ಯಕ್ರಮವಲ್ಲ. ಇದು ಜಾತಿ ಧರ್ಮಗಳ ಸಮ್ಮಿಲನದ ಅಮೃತ ಮಹೋತ್ಸವ. ತರಳಬಾಳು ಹುಣ್ಣಿಮೆ ನಡೆದ ಸ್ಥಳಗಳನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳೆಸಲು ತರಳಬಾಳು ಶ್ರೀಗಳು ಶ್ರಮಿಸುತ್ತಾ ಬಂದಿದ್ದಾರೆ ಎಂದರು.

ಸಮಾಜದಲ್ಲಿ ಅನ್ಯೋನ್ಯತೆ ತರುವ ಹಾಗೂ ಸಮಾಜದ ಗಣ್ಯರನ್ನು ಒಂದೇ ವೇದಿಕೆಗೆ ತರುವ ಹುಣ್ಣಿಮೆಯಾಗಿದೆ. ಇಲ್ಲಿನ ಸಂದೇಶಗಳನ್ನು ಇಲ್ಲೇ ಬಿಟ್ಟು ಹೋಗದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಹುಣ್ಣಿಮೆ ಸಾರ್ಥಕವಾಗುತ್ತದೆ ಎಂದವರು ಹೇಳಿದರು.

error: Content is protected !!