ವರ್ಷಾಂತ್ಯಕ್ಕೆ ಹೆದ್ದಾರಿ ಯೋಜನೆ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ

ಶಿರಮಗೊಂಡನಹಳ್ಳಿ ರಸ್ತೆ ಬಳಿಯ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಬುಧವಾರ ವೀಕ್ಷಿಸಿದರು.

ದಾವಣಗೆರೆ, ಜೂ.24- ಆರು ತಿಂಗಳ ಒಳಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ  ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಯ ಕಾರ್ಯಾನುಷ್ಠಾನದಲ್ಲಿ ಅಂತಹ ಪ್ರಗತಿಯಾಗಿಲ್ಲ. ಅಲ್ಲಿನ ಸುತ್ತಲಿನ ಜನರಿಗೆ ತೊಂದರೆ ಆಗದಂತೆ ತಕ್ಷಣವೇ ಕೆಲಸಕ್ಕೆ ಚುರುಕು ಮುಟ್ಟಿಸಿ ಮುಗಿಸಬೇಕು ಎಂದು ಹೇಳಿದರು.

ಆರು ಪಥ ರಸ್ತೆ ನಿರ್ಮಾಣಕ್ಕೆ
ಸಂಬಂಧಿಸಿದಂತೆ ಈಗಾಗಲೇ ಶೇ.98.62 ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಶಾಮನೂರು ಮತ್ತು ಹೆಚ್. ಕಲಪನಹಳ್ಳಿಯಲ್ಲಿ ಒಟ್ಟು 1 ಹೆಕ್ಟೇರ್ ಜಮೀನು ಅನುಮೋದನೆಗೆ ಬಾಕಿ ಇದೆ. ವಿಶೇಷ ಭೂಸ್ವಾಧೀನಾಧಿಕಾರಿಗಳು, ಸಂಬಂಧಿಸಿದ ತಹಶೀಲ್ದಾರರು ಜಿಲ್ಲಾಧಿಕಾರಿ ಅವರೊಂದಿಗೆ ಯಾಕೆ ಭೂಸ್ವಾಧೀನ ವಿಳಂಬವಾಗುತ್ತಿದೆ ಎಂಬ ಬಗ್ಗೆ ವಿವರಣೆ ನೀಡಿ, ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿಕೊಂಡು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಯೋಜನೆ ತರುವ ಕೆಲಸ ನಮ್ಮದು. ಆದರೆ ಅದನ್ನು ನಿಗದಿತ ಸಮಯದಲ್ಲಿ ಅಧಿಕಾರಿಗಳು ಮತ್ತು ಏಜೆನ್ಸಿಯವರು ಪೂರ್ಣಗೊಳಿಸಬೇಕು ಎಂದರು.

ಅಂಡರ್‍ಪಾಸ್‍ಗಳಲ್ಲಿ ರಸ್ತೆ ಸರಿಪಡಿಸುವುದು ಮತ್ತು ಅವಶ್ಯಕತೆ ಇರುವೆಡೆ ಅಂಡರ್‍ಪಾಸ್ ನಿರ್ಮಿಸಬೇಕೆಂದು ಎನ್‍ಹೆಚ್ ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ. ನಾನು ಮತ್ತು ಜಿಲ್ಲಾಧಿಕಾರಿ ಹದಡಿ-ಕುಂದುವಾಡ ರಸ್ತೆ ಪರಿಶೀಲನೆ ನಡೆಸಿದ ನಂತರ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಬನಶಂಕರಿ ಬಡಾವಣೆ ಮತ್ತು ವಿದ್ಯಾನಗರದಲ್ಲಿ ಸರ್ವೀಸ್ ರಸ್ತೆ ಆಗಿಲ್ಲ. ಹೈಟೆನ್ಶನ್ ಲೈನ್‍ಗಳು ಶಿಫ್ಟಿಂಗ್ ಆಗಬೇಕು. 

ಜೂನ್ 2020 ರೊಳಗೆ ಈ ಯೋಜನೆ ಮುಗಿಯಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರವೇ ಆರು ತಿಂಗಳು ಹೆಚ್ಚುವರಿ ಅವಧಿ ನೀಡಿದ್ದು, ಈ ವರ್ಷಾಂತ್ಯದಲ್ಲಿ ಎನ್‍ಹೆಚ್ ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವಿಶೇಷ ಭೂಸ್ವಾಧೀನಾಧಿಕಾರಿ ಬಾಲಕೃಷ್ಣ ಪ್ರತಿಕ್ರಿಯಿಸಿ, ಇನ್ನು ಎರಡು ವಾರಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದರು

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ4 ರ ಪ್ರಾದೇಶಿಕ ಅಧಿಕಾರಿ ಸೂರ್ಯವಂಶಿ ಮಾತನಾಡಿ, ಹಲವೆಡೆ ತಾಂತ್ರಿಕ ತೊಂದರೆಗಳಿಂದ ರಸ್ತೆ ಅಗಲೀಕರಣ ಮತ್ತು ಅಂಡರ್‍ಪಾಸ್ ಕೆಲಸಗಳಲ್ಲಿ ಹಿನ್ನಡೆಯಾಗಿದೆ. ಮತ್ತೆ ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇವನ್ನೆಲ್ಲ ಸರಿಪಡಿಸಿಕೊಂಡು ಇನ್ನು ಆರು ತಿಂಗಳ ಒಳಗೆ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು. 

ಎನ್‍ಹೆಚ್ ನವರು ನೆಲ ಅಗಿಯುವ ಒಂದು ದಿನ ಮೊದಲೇ ಬಿಎಸ್‍ಎನ್‍ಎಲ್‍ಗೆ ತಿಳಿಸಿ ಎನ್‍ಹೆಚ್ ಮತ್ತು ಬಿಎಸ್‍ಎನ್‍ಎಲ್ ಇಬ್ಬರೂ ಸಹಯೋಗ ಮತ್ತು ಸಹಕಾರದಿಂದ ಕೆಲಸ ಮಾಡಬೇಕು ಎಂದು ಸಂಸದರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಗ್ಗೆ ಡಿಪಿಆರ್‍ನಲ್ಲಿ ಸಮರ್ಪಕವಾಗಿ ಯೋಜನೆ ತಯಾರಾಗಿಲ್ಲ. ನಮ್ಮದು ಸ್ಮಾರ್ಟ್‍ಸಿಟಿ, ಜೊತೆಗೆ ಶೈಕ್ಷಣಿಕ ನಗರ ಮತ್ತು ದೊಡ್ಡ ನಗರವಾಗಿದೆ. ಇಂತಹ ನಗರಕ್ಕೆ ಒಂದು ಉತ್ತಮ ಮತ್ತು ವ್ಯವಸ್ಥಿತವಾದ ಪ್ರವೇಶ ದ್ವಾರಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿಲ್ಲ. ಆದಷ್ಟು ಶೀಘ್ರದಲ್ಲಿ ದೊಡ್ಡದಾದ ಮತ್ತು ಉತ್ತಮವಾದ ಪ್ರವೇಶದ್ವಾರ ನಿರ್ಮಿಸಿ ಎಂದು ಸಂಸದರು ಸೂಚಿಸಿದರು. 

ಸಭೆಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ರಾಷ್ಟ್ರೀಯ ಹೆದ್ದಾರಿ ಯೋಜನೆಯ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು, ಎಸಿ ಮಮತಾ ಹೊಸಗೌಡರ್, ರಾಷ್ಟ್ರೀಯ ಹೆದ್ದಾರಿ ಟೆಕ್ನಿಕಲ್ ಮ್ಯಾನೇಜರ್ ಮಲ್ಲಿಕಾರ್ಜುನ್, ಇರ್ಕಾನ್ ಕಂಪೆನಿಯ ಅಧಿಕಾರಿ ನಾಗರಾಜ್ ಪಾಟೀಲ್, ದೊಡ್ಡಯ್ಯ, ಪಿಎನ್‍ಸಿ ಏಜೆನ್ಸಿಯ ಕಂಟ್ರ್ಯಾಕ್ಟರ್ ಬ್ಯಾನರ್ಜಿ, ಈರಪ್ಪ ಮೇಟಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಹಾಗೂ ಇತರೆ ಅಧಿಕಾರಿಗಳು ಇದ್ದರು. 

error: Content is protected !!