ಪಿಟಿಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ : ಬಂಜಾರ್ ಸಮಾಜದ ಮುಖಂಡರ ಸ್ಪಷ್ಟನೆ

ಹರಪನಹಳ್ಳಿ, ಏ.7- ಭೋವಿ ಹಾಗೂ ಇನ್ನಿತರೆ ಎಲ್ಲಾ ಸಮಾಜದ ಜೊತೆ ಬಂಜಾರ್ ಸಮಾಜದ ನಾಯಕರು ಯಾವುದೇ ರೀತಿ ಭೇದಭಾವ ಇಲ್ಲದೇ ಅನ್ಯೋನ್ಯವಾಗಿ ಇದ್ದು, ಎಲ್ಲರೂ ಒಂದೇ ಎಂಬ ಮನೋಭಾವದಿಂದ  ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್  ನೋಡಿಕೊಳ್ಳುತ್ತಿದ್ದಾರೆ.

ಎಂ.ವಿ. ಅಂಜಿನಪ್ಪ ಅವರಿಗೆ ವಡ್ಡರು ಎಂದು ಹೇಳಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಪರಮೇಶ್ವರ್ ನಾಯ್ಕ್ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು  ವಕೀಲ ನಂದೀಶ್ ನಾಯ್ಕ, ಸೇರಿದಂತೆ ಬಂಜಾರ್ ಸಮಾಜದ ಮುಖಂಡರು ಸ್ಪಷ್ಟಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂಜಾರ್ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಿ.ಟಿ. ಪರಮೇಶ್ವರ್ ನಾಯ್ಕ್ ಹಿಂದುಳಿದ ವರ್ಗಗಳ ಹಾಗೂ ದೀನ, ದಲಿತರ ಹಾಗೂ ತಳ ಸಮುದಾಯಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆಯೇ ಹೊರತು, ಜಾತಿ ನಿಂದನೆ ಮಾಡುವಂತಹ ನೀಚ ಕೆಲಸಕ್ಕೆ ಕೈ ಹಾಕುವ ಜಾಯಮಾನ ಪಿ.ಟಿ.ಪಿ ಅವರದಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಎಂ.ವಿ. ಅಂಜಿನಪ್ಪ ಪುರಸಭೆ ಚುನಾವಣೆಯಲ್ಲಿ ಪಿಟಿಪಿ ಅವರ ಕಾಲಿಗೆ ಬಿದ್ದು, ಕಾಂಗ್ರೆಸ್ ಪಕ್ಷದ ಬಿ ಫಾರಂ ಪಡೆದು ಗೆದ್ದ ನಂತರ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಇಂತಹ ಕಾರ್ಯ ಚಟುವಟಿಕೆಯನ್ನು ಖಂಡಿಸುವುದಕ್ಕೆ ಪಿಟಿಪಿ ಮಾತನಾಡಿದ್ದಾರೆಯೇ ಹೊರತು ಯಾವುದೇ ರೀತಿ ತಳ ಸಮುದಾಯಗಳನ್ನು ಜಾತಿ ನಿಂದನೆ ಮಾಡಿಲ್ಲ. ಕೆಲ ಸಮುದಾಯದ ನಾಯಕರು ರಾಜಕೀಯ ದ್ವೇಷದಿಂದ ದೂರುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತೊಗರಿಕಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಡಿ. ನೇಮ್ಯಾನಾಯ್ಕ, ಗುತ್ತಿಗೆದಾರ ಉಮೇಶ್ ನಾಯ್ಕ, ಟಿಎಪಿಎಂಎಸ್ ನಿರ್ದೇಶಕ ತಿಮ್ಮಾನಾಯ್ಕ್, ಶಿವಕುಮಾರ ನಾಯ್ಕ, ಹನುಮಂತ ನಾಯ್ಕ, ವೇದುನಾಯ್ಕ, ತಾವರ್ಯಾನಾಯ್ಕ, ಸ್ವಾಮಿನಾಯ್ಕ, ಮುಖಣ್ಣ ನಾಯ್ಕ, ಮಂಜ್ಯಾ ನಾಯ್ಕ, ಯಮುನ ನಾಯ್ಕ, ಕೃಷ್ಣ ನಾಯ್ಕ, ನಾಗ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!