ಹರಿಹರ, ಫೆ. 26 – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಶಿವ ಧ್ವಜಾರೋಹಣ, ಸಹಸ್ರಲಿಂಗ ದರ್ಶನ, ದ್ವಾದಶ ಜ್ಯೋತಿರ್ಲಿಂಗಗಳ ಉತ್ಸವದ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್, ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ಸದಸ್ಯ ಮುಜಾಮಿಲ್ ಬಿಲ್ಲು, ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಲಸಬಾಳು ಶಿವಾನಂದಪ್ಪ ಅವರು ಚಾಲನೆ ನೀಡಿದರು.
ಮೆರವಣಿಗೆಯು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಂಭಾಗದಿಂದ ಪ್ರಾರಂಭಗೊಂಡು ಗಾಂಧಿ ವೃತ್ತ, ಮುಖ್ಯರಸ್ತೆ, ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಟಿ.ಬಿ. ರಸ್ತೆ, ಹಳೆ ಪಿ.ಬಿ. ರಸ್ತೆಯಲ್ಲಿ ಸಾಗಿ ಪುನಃ ದೇವಾಲಯದ ಆವರಣದಲ್ಲಿ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಕಾರಿನ ಮೇಲೆ ಶಿವಲಿಂಗದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಮಾಳ, ಶ್ರೀ ಹರಿಹರೇಶ್ವರ ಮಹಿಳಾ ಡೊಳ್ಳು ಕುಣಿತ, ಬ್ಯಾಂಡ್ ಸೆಟ್ ಸೇರಿದಂತೆ ವಿವಿಧ ಕಲಾ ಮೇಳಗಳು ಪಾಲ್ಗೊಂಡು ಮೆರ ವಣಿಗೆಗೆ ಮೆರಗನ್ನು ನೀಡಿದವು. ಮೆರವಣಿಗೆ ಮುಗಿದ ನಂತರ ಮಕ್ಕಳಿಂದ ಶಿವಸ್ತುತಿ ನೃತ್ಯ, ವಿಶ್ವ ಶಾಂತಿ ಗಾಗಿ ಧ್ಯಾನ ಮುಂತಾದ ಕಾರ್ಯಕ್ರಮಗಳು ಜರುಗಿದವು.
ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವದೇವಿ ಈ ಎಲ್ಲಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಬ್ರಹ್ಮಾಕುಮಾರಿ ಅನಸೂಯಾ ಹಾಗೂ ಇತರರು ಹಾಜರಿದ್ದರು.