ದಾವಣಗೆರೆ, ಫೆ.20- ಬರುವ ಆರ್ಥಿಕ ವರ್ಷಕ್ಕೆ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ರೂ. 1,99,80000 ಗಳ ಬಜೆಟ್ ನೀಡಿ ಮಹಾಪೌರರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಚಮನ್ಸಾಬ್ ಅನುಮೋದನೆ ನೀಡಿದ್ದಾರೆ ಎಂದು ನಗರ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ. ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರ ಕಚೇರಿಯಲ್ಲಿ ಮೊನ್ನೆ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಆಯವ್ಯಯ ಸಭೆಯಲ್ಲಿ ಬಜೆಟ್ಗೆ ಅನುಮೋದನೆ ನೀಡಲಾಯಿತು.
ದೇವರಾಜ ಅರಸು ಬಡಾವಣೆ ಗ್ರಂಥಾಲಯದ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ವಹಿಸಲು ಅನುಮೋದನೆ ನೀಡಿದರು. ಬಡಾವಣೆ ಪೊಲೀಸ್ ಠಾಣೆ ಎದುರಿಗಿರುವ ಸಿಲ್ವರ್ ಜ್ಯುಬಿಲಿ ಶಾಖಾ ಗ್ರಂಥಾಲಯಕ್ಕೆ ಓದುಗರ ಅನುಕೂಲಕ್ಕೆ ಬೋರ್ವೆಲ್ ಕೊರೆಸಲು ಅನುಮೋದನೆ ನೀಡಿದ್ದಲ್ಲದೇ ಸ್ಥಳದಲ್ಲಿಯೇ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಪರಿಷತ್ ಕಾರ್ಯದರ್ಶಿ ಎಸ್. ಶ್ರೀನಿವಾಸ, ಧ.ರಾ.ಮ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರೂಪಶ್ರೀ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎಲ್.ಗೋವಿಂದರಾಜು, ರಾಜನಹಳ್ಳಿ ಸೀತಮ್ಮ ಬಾಲಕೀಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎ.ಆರ್.ಮಂಜಪ್ಪ ಹಾಗೂ ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.