ವಾಹನ ಸವಾರರೇ ಎಚ್ಚರ ಸಿಸಿ ಟಿವಿ ಕಣ್ಗಾವಲಿದೆ, ದಂಡದಿಂದ ತಪ್ಪಿಸಿಕೊಳ್ಳಲಾಗದು
ದಾವಣಗೆರೆ, ಫೆ. 6- ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ದು, ನಗರದಲ್ಲಿ ಸುಸಜ್ಜಿತವಾದ ರಸ್ತೆಗಳು ನಿರ್ಮಾಣವಾಗಿವೆ. ಸಂಚಾರಿ ನಿಯಮಗಳ ಪಾಲನೆಗಾಗಿ ಸಿಗ್ನಲ್ ಅಳವಡಿಕೆ ಮಾಡಿದ್ದರೂ ಉಲ್ಲಂಘನೆ ಮಾಡಿ ಸಂಚರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಮ ಪಾಲನೆ ಮಾಡದ ಸವಾರರಿಗೆ ದಂಡ ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ನಗರದ ವರ್ತುಲ ರಸ್ತೆಯಲ್ಲಿನ ಶ್ರೀ ಶಾರದಾಂಬ ದೇವಸ್ಥಾನ ಬಳಿ ಹಾಗೂ ಎಂ.ಬಿ.ರವೀಂದ್ರನಾಥ ವೃತ್ತ ಸೇರಿದಂತೆ ಇನ್ನಿತರೆ ವೃತ್ತಗಳಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯ ವೇಳೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಸಂಚರಿಸಿದ ಸವಾರರಿಗೆ ಒಂದೇ ಗಂಟೆಯಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ದಂಡ ಹಾಕಲಾಗಿದೆ ಎಂದು ಅವರು ಹೇಳಿದರು.
ಕೆಲವು ದ್ವಿಚಕ್ರ ವಾಹನ ಸವಾರರು ವಿಮುಖವಾಗಿ ಸಂಚರಿಸುವುದು ಕಂಡು ಬರುತ್ತಿದ್ದರೆ, ಕೆಲವು ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದನ್ನು ಗಮನಿಸಲಾಗಿದೆ. ಮತ್ತು ಯಾವುದೇ ಸೂಚನೆಯನ್ನು ನೀಡದೇ ಮತ್ತು ಹಿಂದಿನ ವಾಹನಗಳನ್ನು ಗಮನಿಸದೇ ತಿರುವು ಪಡೆಯುವುದು ಸಹ ಅಪಘಾತಕ್ಕೆ ಕಾರಣವಾಗಿದ್ದು, ಅಪಘಾತಗಳನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಟಾನ ಮಾಡಲಾಗುತ್ತಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರು ಸೇರಿದಂತೆ, ವೃತ್ತಗಳಲ್ಲಿ ಸಿಗ್ನಲ್ ಜಂಪ್ ಮಾಡಿ ಸಂಚರಿಸಿದಲ್ಲಿ ದಂಡ ಕಟ್ಟಿಟ್ಟ ಬುತ್ತಿಯಾಗಿದೆ.
ಸ್ಮಾರ್ಟ್ಸಿಟಿ ಕಮಾಂಡ್ ಸೆಂಟರ್ನಲ್ಲಿ ಸೆರೆ ; ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ಯಾವುದೇ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಅದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ನಗರದಲ್ಲಿ 525 ಕ್ಕೂ ಹೆಚ್ಚು ಹೈ ರೆಸ್ಯುಲೂಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಸಂಪೂರ್ಣ ಡಾಟಾವನ್ನು ಸಂರಕ್ಷಣೆ ಮಾಡಲಾಗುತ್ತದೆ. ಯಾವುದೇ ವೃತ್ತ, ರಸ್ತೆಯಲ್ಲಿ ಸಂಚಾರಿ ನಿಯಮಗಳು ಉಲ್ಲಂಘನೆಯಾದರೂ ಸೆರೆಯಾಗುತ್ತದೆ.
ಸಂಚಾರಿ ನಿಯಮ ಜಾಗೃತಿ; ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 300 ಕ್ಕಿಂತ ಹೆಚ್ಚು ಜನರು ಅಪಘಾತ ಪ್ರಕರಣಗಳಲ್ಲಿ ಅಸುನೀಗಿದ್ದು ಇದು ಈ ವರ್ಷ ತಗ್ಗಿದೆ. ಅಪಘಾತ ಪ್ರಕರಣಗಳನ್ನು ಎರಡಂಕಿಗೆ ಇಳಿಸುವ ಉದ್ದೇಶದಿಂದ ಸಂಚಾರಿ ನಿಯಮಗಳ ಪಾಲನೆಯನ್ನು ಕಠಿಣಗೊಳಿಸಲಾಗುತ್ತಿದೆ. ಈಗಾಗಲೇ ಆಟೋ ಚಾಲಕರು, ಖಾಸಗಿ ಶಾಲಾ ಬಸ್ ಚಾಲಕರು, ಕೆಎಸ್ಆರ್ಟಿಸಿ ಬಸ್ ಚಾಲಕರ ಸಭೆ ಮಾಡಿ ಅರಿವು ಮೂಡಿಸಲಾಗಿದೆ. ನಗರದಲ್ಲಿ ವಿವಿಧ ಆಟೋ ಸಂಘಗಳೊಂದಿಗೂ ಮತ್ತು ಗೂಡ್ಸ್ ಆಟೋ, ಲಾರಿ ಮಾಲೀಕರ ಸಂಘಗಳೊಂದಿಗೂ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.