11ನೇ ತಾಲ್ಲೂಕು ಕನ್ನಡ ಸಮ್ಮೇಳನ: ಸದನದಲ್ಲಿ ದನಿ ಎತ್ತುವೆ ಎಂದ ಶಾಸಕ ಬಸವಂತಪ್ಪ
ದಾವಣಗೆರೆ, ಫೆ.1- ಮಧ್ಯ ಕರ್ನಾಟಕದಲ್ಲಿ ರುವ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು, ದಾವಣಗೆರೆ ರಾಜಧಾನಿಯಾಗಬೇಕು ಎಂಬ ಕೂಗು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೆ ಪ್ರತಿಧ್ವನಿಸಿತು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೀರಿ. ಬರುವ ಅಧಿವೇಶನದಲ್ಲಿ ಈ ಬಗ್ಗೆ ನಾನೂ ದನಿ ಎತ್ತುತ್ತೇನೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕನ್ನಡ ಉಳಿದಿರುವುದೇ ದಾವಣಗೆರೆ ಜಿಲ್ಲೆಯಿಂದ ಎಂದರೆ ತಪ್ಪಾಗಲಾರದು. ಪರಿಶುದ್ಧವಾಗಿ ಕನ್ನಡ ಮಾತನಾಡುವ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ಜಿಲ್ಲೆಯಲ್ಲಿ ಹೊರ ರಾಜ್ಯದ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಅವರಿಗೆ ಜಾಗ, ನೀರು ಸೇರಿದಂತೆ ಎಲ್ಲಾ ಸವಲತ್ತು ನಾವು ನೀಡುತ್ತೇವೆ. ಆದರೆ ನಮ್ಮವರಿಗೇ ಅಲ್ಲಿ ಉದ್ಯೋಗ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ತೆಗೆದುಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತ ನಾಡುತ್ತಾ, ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ನೀಡಿತ್ತು. ಅದೇ ರೀತಿ ಜಿಲ್ಲೆ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೂ ಸರ್ಕಾರ ಅನುದಾನ ನೀಡಬೇಕಿದೆ ಎಂದು ಹೇಳಿದರು.
ದಾವಣಗೆರೆ ರಾಜಧಾನಿಯಾಗಲು ಒತ್ತಾಯಿಸಿ
ದಾವಣಗೆರೆ ಮಧ್ಯ ಕರ್ನಾಟಕದಲ್ಲಿದ್ದ ಕಾರಣಕ್ಕಾಗಿ ಇದು ರಾಜಧಾನಿಯಾಗಬೇಕಾಗಿದ್ದು, ಇದು ಒತ್ತಾಯ ಮಾಡಬೇಕಾದ ಸಂಗತಿ ಎಂದು ಹಿರಿಯ ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಅವರು, ಮಧ್ಯ ಕರ್ನಾಟಕದಲ್ಲಿ ಕನ್ನಡ ತನ್ನ ದೇಸೀಯ ತನದಿಂದ, ತನ್ನ ಧ್ವನಿಯಿಂದ ಜೀವಂತವಾಗಿದೆ. ಈ ಪ್ರದೇಶವನ್ನು ರಾಜಧಾನಿ ಮಾಡಿದ್ದರೆ ಎಲ್ಲಾ ಪ್ರದೇಶಗಳಿಗೂ ನೇರವಾದ ನಿಕಟವಾದ ಸಂಪರ್ಕ ಒದಗಿಬರುತ್ತಿತ್ತು ಎಂದು ಅಭಿಪ್ರಾಯಿಸಿದರು. ಇಲ್ಲಿ ಸರ್ವಧರ್ಮಗಳ ಸಮನ್ವಯತೆಯನ್ನೂ ಕಾಣುತ್ತೇವೆ. ಇಲ್ಲಿನ ಕನ್ನಡದ ಗುಣ ರಾಜ್ಯಾದ್ಯಂತ ವಿಸ್ತಾರವಾಗಬೇಕು ಎನ್ನುವುದು ಕನ್ನಡಿಗರೆಲ್ಲರ ಅಭಿಮತವೂ ಹೌದು. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ಉದ್ದೇಶವೂ ಹೌದು ಎಂದರು.
ದೈನಂದಿನ ಬದುಕಿನಲ್ಲಿ ಕನ್ನಡದ ಕಂಪು ಇರಲಿ
ಕವಿಗಳ, ಸಾಹಿತಿಗಳ ಆಶಯದಂತೆ ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡದ ಕಂಪು ಆಚರಣೆಯಲ್ಲಿರಿಸಿಕೊಳ್ಳಲು ಪ್ರಯತ್ನಿಸುವಂತೆ ಸಮ್ಮೇಳನಾಧ್ಯಕ್ಷರಾದ ಶಿವಾನಂದ ಗುರೂಜಿ ಹೇಳಿದರು.
ಹೃನ್ಮನಗಳು ಅರಳುವಂತೆ ಸಾಹಿತ್ಯ ಕೃತಿಗಳನ್ನು ಅವಲೋಕಿಸುವ ಪ್ರಯತ್ನ ನಡೆಯಬೇಕು. ಮೌಢ್ಯಗಳಿಂದ ಹೊರಬಂದು, ಕನ್ನಡ ಮಾತೆಯ
ನಿಜ ಪುತ್ರರಾಗಿ ಬಾಳಬೇಕು ಎಂದವರು ಕರೆ ನೀಡಿದರು.
ಹೊಸ ವರ್ಷದ ಆಚರಣೆ, ಗಣೇಶನ ಚತುರ್ಥಿ, ಶಿವರಾತ್ರಿ ಮೊದಲಾದ ಹಬ್ಬಗಳಲ್ಲಿ ಕನ್ನಡಿಗರು ತಪ್ಪು ಹೆಜ್ಜೆ ಇಡುತ್ತಿರುವುದು ಬೇಸರದ ಸಂಗತಿ ಎಂದ ಅವರು, ಅನುಭಾವಿಗಳು ಮೆಚ್ಚುವಂತೆ ಹಬ್ಬಗಳನ್ನು ಆಚರಿಸಬೇಕು. ರಾಕ್ಷಸೀ ಪ್ರವೃತ್ತಿಯನ್ನು ಹೊರಚೆಲ್ಲಿ ಕನ್ನಡ ಮಾತೆಯ ನಿಜ ಪುತ್ರರಾಗಿ ಬಾಳುವುದನ್ನು ಕಲಿಯುವಂತೆ ಹೇಳಿದರು.
ಸಾಹಿತ್ಯ ಪರಿಷತ್ ನಡೆಸುತ್ತಿರುವ ಕಾರ್ಯಕ್ರಮಗಳಿಂದ ಕನ್ನಡಿಗರು ತಮ್ಮ ಅಂತರಂಗ ಹಾಗೂ ಬಹಿರಂಗದಲ್ಲಿ ಆದರ್ಶರೂಪದ ಹೆಜ್ಜೆಗಳನ್ನಿಡುವಂತೆ ಗುರೂಜಿ ವಿನಂತಿಸಿಕೊಂಡರು.
ಸಮ್ಮೇಳನದಲ್ಲಿ 12 ನಿರ್ಣಯಗಳು
- ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನ್ನೆರಡು ನಿರ್ಣಯಗಳನ್ನು ಕೈಗೊಳ್ಳಲಾಯಿತು.
- ಈ ವರ್ಷ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕು. ಕೂಡಲೇ ಅನುದಾನ ನೀಡಿ, ದಿನಾಂಕ ಘೋಷಿಸಬೇಕು.
- ದಾವಣಗೆರೆಯನ್ನು ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು.
- ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ನೀಡುತ್ತಿರುವ ಶೇ 5 ಮೀಸಲಾತಿಯನ್ನು ಶೇ. 15ಕ್ಕೆ ಏರಿಸಿ, ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಲು ಕ್ರಮ ಕೈಗೊಳ್ಳಬೇಕು.
- ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಆಧಾರಿತ ಹಾಗೂ ಉದ್ಯೋಗ ಸೃಷ್ಠಿಸುವ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಗೊಳ್ಳಬೇಕು.
- ಜಗಳೂರು ತಾಲೂಕಿನ ಎಲ್ಲಾ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರ ಭೇಟಿಗೆ ಗುಣಮಟ್ಟದ ಸಾರಿಗೆ, ರಸ್ತೆ, ವಸತಿ ಮುಂತಾದ ಅನುಕೂಲಗಳನ್ನು ಕಲ್ಪಿಸಿಕೊಡಬೇಕು.
- ಜಗಳೂರು ತಾಲ್ಲೂಕಿನ ಕೊಂಡಕುರಿಯ ಸಂರಕ್ಷಣೆಗೆ ಸರ್ಕಾರ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಕಾರ್ಯಕ್ರಮಗಳಲ್ಲಿ ಕೊಂಡಕುರಿ ಲಾಂಛನವನ್ನು ಕಡ್ಡಾಯವಾಗಿ ಬಳಸುವಂತಾಗಬೇಕು.
- ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸುಸಜ್ಜಿಗ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು.
- ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುವ ಎಲ್ಲಾ ಹಂತಗಳ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು.
- ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲಾ ಕಚೇರಿಗಳಲ್ಲಿ ಮತ್ತು ಬ್ಯಾಂಕ್ ಸೇವಾ ಕ್ಷೇತ್ರಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ನಾಮಫಲಕ, ಸೂಚನ ಫಲಕಗಳನ್ನು ಕನ್ನಡದಲ್ಲೇ ಕಡ್ಡಾಯವಾಗಿ ಬರೆಸುವಂತಾಗಬೇಕು.
- ಬ್ಯಾಂಕುಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಆಗ್ರಹಿಸುವುದು.
- ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಕನ್ನಡ ಶಾಲೆಗಳನ್ನು ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುವುದು.
- ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕು ಹಾಗೂ ಸರ್ಕಾರಿ, ಖಾಸಗಿಯವರ ಸಹಭಾಗಿತ್ವದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರಗಳನ್ನು ಸ್ಥಾಪಿಸಿ, ಯುವಕ-ಯುವತಿಯರಿಗೆ ಹೆಚ್ಚು ಹೆಚ್ಚು ಉದ್ಯೋಗ ದೊರಕುವಂತೆ ಮಾಡುವುದು.
ದಾವಣಗೆರೆಯಲ್ಲಿ ಲೇಖಕರು, ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುಸ್ತಕ ಓದುವುದರಿಂದ ಪರಿಪೂರ್ಣತೆ ಬರುತ್ತದೆ ಎಂದರು. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಬೇಕೆಂದು ಎಲ್ಲರ ಒತ್ತಾಯವಾಗಿದ್ದು, ಅವಕಾಶ ಸಿಕ್ಕರೆ ಅದ್ಧೂರಿಯಾಗಿ ಮಾಡೋಣ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಮತಿ ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಿಂದಿನ ಹತ್ತು ಸಮ್ಮೇಳನಗಳನ್ನು ಹಳ್ಳಿಗಳಲ್ಲಿ ಆಚರಿಸಲಾಗಿತ್ತು. ಆದರೆ ಈ ಬಾರಿ ಅನಿವಾರ್ಯ ಕಾರಣಗಳಿಂದ ಕುವೆಂಪು ಭವನದಲ್ಲಿ ಆಚರಿಸಲಾಗುತ್ತಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಬಿ.ಟಿ. ಜಾಹ್ನವಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷರಾದ ಶಿವಾನಂದ ಗುರೂಜಿ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಆಶಯ ನುಡಿಗಳನ್ನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಿವಶಂಕರ್, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಗೌರವ ಕಾರ್ಯದರ್ಶಿ ಬಿ.ದಿಳ್ಯೆಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೆನಪುರ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ್ ಇತರರು ಉಪಸ್ಥಿತರಿದ್ದರು.
ವಿನೂತನ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು. ಕು.ತೇಜಶ್ರೀ ಕೆ.ಎಸ್. ಮತ್ತು ಗೌರಿಶ್ರೀ ಎಂ.ಎಸ್. ಸ್ವಾಗತ ನೃತ್ಯ ನಡೆಸಿಕೊಟ್ಟರು. ಕೆ.ಸಿ. ಲಿಂಗರಾಜ್ ಸ್ವಾಗತಿಸಿದರು. ದಾಗಿನಕಟ್ಟೆ ಪರಮೇಶ್ವರಪ್ಪ ನಿರೂಪಿಸಿದರು.
ಇದೇ ಸಂದರ್ಭದಲ್ಲಿ `ಬಸವ ಧರ್ಮದ ಇಷ್ಟಲಿಂಗ ತತ್ವ’ (ಎರಡನೇ ಮುದ್ರಣ) `ಅಂತರ್ಜಾಲ’ (ಕವನ ಸಂಕಲನ) ಏಳನೇ ಕೃತಿ, ನನ್ನ `ಬಾಹತ್ತರ’ (ಕವನ ಸಂಕಲನ, ಹದಿನೈದನೇ ಕೃತಿ) ಲೋಕಾರ್ಪಣೆಗೊಳಿಸಲಾಯಿತು.