ಡೆಂಘಿ ಜ್ವರ : ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ

ಡೆಂಘಿ ಜ್ವರ : ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ

ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ

ದಾವಣಗೆರೆ, ಜು.8- ರಾಜ್ಯದಲ್ಲಿ ಡೆಂಘಿ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಡೆಂಘಿ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ನಿರ್ಲಕ್ಷ್ಯ ಕಂಡು ಬಂದರೆ ವೈದ್ಯರು ಮತ್ತು ಸಿಬ್ಬಂದಿಗಳ  ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಸಿದರು.

ನಗರದ ಚಿಗಟೇರಿ ಆಸ್ಪತ್ರೆಯಲ್ಲಿರುವ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ನಡೆಸಿದ ಶಾಸಕರು, ಮಾಯಕೊಂಡ ಕ್ಷೇತ್ರದ ಎಲ್ಲಾ ಪಿಎಚ್‍ಸಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಡೆಂಘಿ ಸೋಂಕಿತರ ಸಂಖ್ಯೆ ಉಲ್ಬಣ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಲ್ಲದೇ ಕ್ಷೇತ್ರದಲ್ಲಿ ಜ್ವರದಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.

ಸೋಂಕಿತ ಜ್ವರದಿಂದ ಬಳಲಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ಆ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಕ್ಷೇತ್ರದ ಎಲ್ಲಾ ಪಿಎಚ್‍ಸಿ ಕೇಂದ್ರಗಳಲ್ಲಿ ಲ್ಯಾಬ್‍ಗಳು ಇವೆ. ರಕ್ತದ ಮಾದರಿ ಸಂಗ್ರಹಿಸಿ ಡೆಂಘಿ ಜ್ವರವೋ ಅಥವಾ ಸಾಮಾನ್ಯ ಜ್ವರವೋ ಎಂಬ ಬಗ್ಗೆ ದೃಢಪಡಿಸಿಕೊಳ್ಳಬೇಕು ಎಂದರು.

ಕೆಲವು ಪಿಎಚ್‍ಸಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಔಷಧಿ ದಾಸ್ತಾನು ಮಾಡಲಾಗಿದೆ. ಕೆಲವು ಪಿಎಚ್‍ಸಿಗಳಲ್ಲಿ ಔಷಧಿ ಕೊರತೆ ಕಂಡು ಬರುತ್ತಿದೆ. ಈ ರೀತಿ ಆಗಬಾರದು. ಕೆಲವು ವೈದ್ಯರು ಹೊರಗಡೆ ಔಷಧಿ ತರಲು ಚೀಟಿ ಬರೆದುಕೊಡುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ತಾಲೂಕು ವೈದ್ಯಾಧಿಕಾರಿಗಳು ಮತ್ತು ಡಿಎಚ್‍ಒ ಎಲ್ಲಾ ಪಿಎಚ್‍ಸಿಗಳಿಗೆ ತಿಂಗಳಿ ಗೊಮ್ಮೆ ಭೇಟಿ ನೀಡಿ ಇವುಗಳಿಗೆ ಕಡಿವಾಣ ಹಾಕಬೇಕೆಂದು ತಾಕೀತು ಮಾಡಿದರು.

ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿರುವ ಕೋಳಿ ಫಾರಂಗಳಿಂದಾದ ನೊಣಗಳ ಹಾವಳಿಯಿಂದ ಗ್ರಾಮಸ್ಥರನ್ನು ವಿವಿಧ ರೋಗಗಳು ಕಾಡುತ್ತಿವೆ. ಈ ಬಗ್ಗೆ ಕೋಳಿ ಫಾರಂ ಮಾಲೀಕರಿಗೆ ಸ್ವಚ್ಛತೆ ಬಗ್ಗೆ ನಿಗಾವಹಿಸಲು ಸೂಚನೆ ನೀಡಬೇಕು. ಪಿಎಚ್‍ಸಿಗಳಲ್ಲಿ ವೈದ್ಯರ ಕೊರತೆ ಇದ್ದರೆ, ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದೆ. ಸಂಬಂಧಪಟ್ಟವರಿಗೆ ಸ್ವಚ್ಛತೆಗೊಳಿಸಲು ಸೂಚನೆ ನೀಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ದೇವರಾಜ್ ಪಟ್ಟೇಗ, ಟಿಎ ಚ್‍ಒ ಕಚೇರಿ ಮೇಲ್ವಿಚಾರಕ ಎಚ್.ಉಮಾ ಪತಿ, ಡಾ.ಮಹೇಶ್, ಡಾ.ಮಂಜುನಾಥ್, ಡಾ.ರುದ್ರೇಶ್, ಡಾ.ಹೇಮಂತ್‍ಕುಮಾರ್, ಡಾ.ಮಂಜುನಾಥ ಆರ್‌ಜಿಹಳ್ಳಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟಾಚಲ ಕುಮಾರ್, ಕಾರ್ಯಕ್ರಮ ವ್ಯವಸ್ಥಾಪಕ ರವಿ ಹಾಗೂ ತಾಲ್ಲೂಕಿನ ಎಲ್ಲಾ ವೈದ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲಾಗಿ ಡೆಂಘಿ ಸೋಂಕಿತ ರೋಗಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. 

ನಿರ್ಲಕ್ಷ್ಯ  ಕಂಡು ಬಂದರೆ ಶಿಸ್ತು ಕ್ರಮ : ಕ್ಷೇತ್ರದ ವ್ಯಾಪ್ತಿಯ ಕೆಲವು ಪಿಎಚ್‍ಸಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಅವ್ಯವಸ್ಥೆ ಕಂಡು ಬಂದಿವೆ.  ವೈದ್ಯರು, ಲ್ಯಾಬ್ ಟೆಕ್ನಿಸಿಯೇನ್‍ಗಳು, ನರ್ಸ್‌ಗಳು ಸರಿಯಾಗಿ ಕೆಲಸ ನಿರ್ವಹಿಸದಿರುವುದು ಕಂಡು ಬಂದಿದೆ. ಬೆಳಗ್ಗೆ ಬಂದು ಮಧ್ಯಾಹ್ನದ ವೇಳೆಗೆ ಮನೆಗಳಿಗೆ ಹೋಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಕೆಲವೆಡೆ ತಾವು ಭೇಟಿ ನೀಡಿದಾಗ ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಜನರ ಜೀವದ ಜೊತೆ ಚೆಲ್ಲಾಟ ಆಡಲು ಬಿಡುವುದಿಲ್ಲ. ನಿರ್ಲಕ್ಷ್ಯ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಸಿದರು.

error: Content is protected !!