ಜಗಳೂರು, ಸೆ.12- ಯಾವುದೇ ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ. ಕ್ಷೇತ್ರದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಬೇಡರ ಕಣ್ಣಪ್ಪ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ದೈಹಿಕ ಶಿಕ್ಷಕರ ಸಂಘಗಳ ವತಿಯಿಂದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಲಿಂಗ ತಾರತಮ್ಯವಿಲ್ಲ. ನೈಜ ಪ್ರತಿಭೆಗಳಿಗೆ ಉತ್ತಮ ಅವಕಾಶಗಳಿವೆ. ಶಿಕ್ಷಕರು ಸಂಕುಚಿತ ಮನೋಭಾವ ತೊರೆದು, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು. ಓಟಗಾರ್ತಿ ಪಿ.ಟಿ. ಉಷಾ ಮಹಿಳೆಯರಿಗೆ ಸ್ಪೂರ್ತಿ ಎಂದರು.
ಕ್ರೀಡೆಯಿಂದ ಮಕ್ಕಳಲ್ಲಿ ದೈಹಿಕ ಸದೃಢತೆ, ಮಾನಸಿಕ ಏಕಾಗ್ರತೆ ಹೆಚ್ಚುವುದಲ್ಲದೆ, ಶಾಶ್ವತ ಆರೋಗ್ಯ ಕಾಪಾಡಿಕೊಳ್ಳಬಹುದು. ಮನುಷ್ಯ ಜೀವನದಲ್ಲಿ ಆಸ್ತಿ, ಹಣ ಗಳಿಸಬಹುದು, ಆದರೆ ಆರೋಗ್ಯ ಗಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ದೇಶದಲ್ಲಿ ಕ್ರೀಡಾ ರಂಗ ದೈಹಿಕ ಆರೋಗ್ಯದ ಸದೃಢತೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಲು ಸೂಕ್ತ ವೇದಿಕೆಯಾಗಿದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಅವರು ಕ್ರೀಡಾಕೂಟಕ್ಕೆ ವೈಯಕ್ತಿಕವಾಗಿ 10,000 ರೂ. ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ
ಪರಿವೀಕ್ಷಕ ಸುರೇಶ್ ರೆಡ್ಡಿ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ನಾಗರಾಜ್, ತಾಲ್ಲೂಕು
ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಯ್ಕ, ಜಿಲ್ಲಾ ಉಪಾಧ್ಯಕ್ಷ ಮೂರ್ತಿ, ಸತೀಶ್, ಆನಂದಪ್ಪ, ಕಲ್ಲಿನಾಥ್, ತಾಲ್ಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆರ್.ಮಂಜಪ್ಪ, ರೂಪ, ತಿಪ್ಪಮ್ಮ, ಪ್ಯಾರಿಮಾಬಿ,
ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್, ಪ.ಪಂ. ಸದಸ್ಯ ರಮೇಶ್ ರೆಡ್ಡಿ ಇದ್ದರು.