ದಾವಣಗೆರೆ, ಜೂ. 5- ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ರಕ್ಷಣೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಸ್ಥಿರ ಪರಿಸರ ಅಭಿವೃದ್ಧಿಗಾಗಿ ಜಾಗತಿಕ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೇಂಟ್ ಜಾನ್ಸ್ ಶಾಲಾ ವಿದ್ಯಾರ್ಥಿಗಳು ಪರಿಸರ ಜಾಗೃತಿ ಅಭಿಯಾನ ನಡೆಸಿದರು.
ಶಾಲಾ ಆವರಣದಿಂದ ಆರಂಭವಾದ ಜಾಥಾ ದುರ್ಗಾಂಬಿಕಾ ದೇವಸ್ಥಾನದವರೆಗೆ ಪರಿಸರ ಸಂರಕ್ಷಣೆಯ ಘೋಷಣೆ ಕೂಗುತ್ತಾ, ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಕುರಿತು ಕಿರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
ಈ ಜಾಥಾದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರೀತಾ ಟಿ. ರೈ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ಎಸ್.ಎಂ. ನೇತ್ರಾವತಿ, ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.