ಮತದಾರರ ಒಲವು ಸಾಮಾನ್ಯ ಕಾರ್ಯಕರ್ತನ ಕಡೆಗೆ

ಮತದಾರರ ಒಲವು ಸಾಮಾನ್ಯ ಕಾರ್ಯಕರ್ತನ ಕಡೆಗೆ - Janathavaniದಾವಣಗೆರೆ, ಮೇ 10- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಾಮಾನ್ಯ ಕಾರ್ಯಕರ್ತನಾದ ನನಗೆ ಮತದಾರರು ಬೆಂಬಲಿಸಿದ್ದಾರೆ. ಬಿಜೆಪಿಗೆ ಒಲವು ಹೆಚ್ಚು ಎಂದು ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿರುವ ಬಕ್ಕೇಶ್ವರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಮ್ಮ ಕುಟುಂಬ ಸಮೇತ ಬಂದು ಮತ ಹಾಕಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತೆ ಈ ಸಾರಿ ಬದಲಾವಣೆ ಬಯಸಿದ್ದಾರೆ. ಅಧಿಕ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸ ನನ್ನದು. ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳಾದ ನಾಗರಾಜ್ ಮತ್ತು ನಾನು ಇಬ್ಬರೂ ಹೊಸಬರು. ಎರಡೂ ಕ್ಷೇತ್ರಗಳ ಮತದಾರರು ನಮಗೆ ಆದ್ಯತೆ ನೀಡಿದ್ದಾರೆಂದು ಹೇಳಿದರು.

ಬಿಜೆಪಿ ವರಿಷ್ಠರು ಈ ಬಾರಿ ಯುವಕರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದರು. ಅದರಂತೆ 80 ರಿಂದ 90 ಯುವಕರು, ಹೊಸಬರಿಗೆ ಅವಕಾಶ ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಸಾಮಾನ್ಯ ಕಾರ್ಯಕರ್ತನಾದ ನನಗೆ ಮತ್ತು ಹಿರಿಯ ಶಾಸಕರೊಂದಿಗೆ ಪೈಪೋಟಿ ಇತ್ತು. ಗೆಲ್ಲುವ ವಿಶ್ವಾಸ ಕೂಡ ಇದೆ ಎಂದರು.

error: Content is protected !!