ರಾಣೇಬೆನ್ನೂರು, ಸೆ.7- ಸೇವೆಯಲ್ಲಿರುವ ಶಿಕ್ಷಕರನ್ನು ವಾರಿಯರ್ಸ್ ಎಂದು ಪರಿಗಣಿಸಬೇಕು. ಕೋವಿಡ್ನಿಂದ ನಿಧನರಾದವರಿಗೆ ಇತರರಿಗೆ ಕೊಡುವ ಧನಸಹಾಯ ಕೊಡು ವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಶಾಸಕ ಅರುಣಕುಮಾರ ಗುತ್ತೂರ ಹೇಳಿದರು.
ಇಲ್ಲಿನ ಶಿಕ್ಷಕರ ಸಹಕಾರಿ ಸಂಘದ ಸಭಾ ಭವನದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, ಶಿಕ್ಷಕರು ಮಾಡಿದ ಮನವಿಗಳನ್ನು ಪ್ರಸ್ತಾಪಿಸಿ ಅವರು ಮಾತನಾಡುತ್ತಿದ್ದರು.
ಈಗಿರುವ ಈ ಭವನ ಚಿಕ್ಕದಾಗಿದ್ದು, ನಗರದ ನೂತನ ಬಡಾವಣೆಯಲ್ಲಿ 20 ಗುಂಟೆ ನಿವೇಶನ ಮತ್ತು ಸದರಿ ನಿವೇಶನದಲ್ಲಿ ಸುಸಜ್ಜಿತ ಕಟ್ಟಡವನ್ನೂ ಸಹ ಕಟ್ಟಿಸಿ ಮುಂದಿನ ಶಿಕ್ಷಕರ ದಿನಾಚರಣೆ ಒಳಗಾಗಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಶಾಸಕರ ಪಗಾರ…
ತಮಗೆ ಪ್ರತಿ ವರ್ಷ ಸುಮಾರು 15 ರಿಂದ 20 ಲಕ್ಷದಷ್ಟು ಸರ್ಕಾರದ ಪಗಾರ ಬರುತ್ತೆ. ಅದರಲ್ಲಿಯೇ ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಬಯಕೆ ನನ್ನದಾಗಿದೆ. ಕಾರಣ ನಿವೃತ್ತರಾದವರು ಅಥವಾ ನಿಧನರಾದವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಇದ್ದವರು ನನ್ನನ್ನ ಸಂಪರ್ಕಿಸಿರಿ. ಸರ್ಕಾರ ಕೊಡುವ ಪಗಾರದಲ್ಲಿ ಸಹಾಯ ಮಾಡುತ್ತೇನೆ ಎಂದು ಶಾಸಕ ಅರುಣಕುಮಾರ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಶಿಕ್ಷಕಗೆ ಹೊಡೆದ ಶಾಸಕ !
ತಾವು ಶಾಲೆಯಲ್ಲಿ ಅಭ್ಯಾಸ ಮಾಡುವದಕ್ಕಿಂತ ಏನಾದರು ಕೆಲಸ ಮಾಡುವ ಆಸಕ್ತಿ ಹೆಚ್ಚು ಇತ್ತು, ಹಾಗಾಗಿ ಆಗಾಗ ಶಾಲೆ ತಪ್ಪಿಸುತ್ತಿದ್ದ ನನಗೆ ಶಿಕ್ಷಕರಿಂದ ಛಡಿ ಏಟುಗಳು ಬೀಳುತ್ತಿದ್ದವು. ಆ ಏಟುಗಳ ಪ್ರತಿಕಾರಕ್ಕೆ ಸಿಟ್ಟಿನಿಂದ ಇಟ್ಟಿಗೆ ತುಂಡಿನಿಂದ ಶಿಕ್ಷಕರಿಗೆ ಹೊಡೆದಿದ್ದೆ. ಆ ತಪ್ಪಿಗಾಗಿ ಅಜ್ಜನಿಂದ ಹೊಡೆಸಿಕೊಂಡು 8 ದಿನಗಳ ಕಾಲ ಜ್ವರದಿಂದ ಬಳಲಿದ್ದೆ. ಆಗ ನಮ್ಮ ತಪ್ಪುಗಳಿಗೆ ಮನೆಯ ಹಿರಿಯರಿಂದ ಶಿಕ್ಷೆ ಕಾದಿತ್ತು ಎಂದು ಶಾಸಕ ಅರುಣಕುಮಾರ ಪ್ರಾಥಮಿಕ ಶಾಲೆಗೆ ಹೋಗುವಾಗ ನಡೆದ ಘಟನೆಯನ್ನು ವಿವರಿಸಿದರು.
ತಪ್ಪಿತಸ್ಥರನ್ನು ಸರಿದಾರಿಗೆ ತರುವ ಶಿಕ್ಷಕರು ತಪ್ಪುಗಳನ್ನು ಮಾಡಬಾರದು ಎಂದ ಶಾಸಕರು, ಉತ್ತಮ ನಾಗರಿಕರನ್ನು ತಯಾರು ಮಾಡಿ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು ಎಂದರು.
ಜಿ.ಪಂ ಸದಸ್ಯರಾದ ಏಕನಾಥ್ ಭಾನು ವಳ್ಳಿ, ಶಿವಾನಂದ ಕನ್ನಪ್ಪಳವರ, ಮಂಗಳಗೌರಿ ಪೂಜಾರ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ, ತಹಶೀಲ್ದಾರ್ ಬಸನಗೌಡ ಕೋಟೂರ, ಇಲಾಖೆ ಅಧಿಕಾರಿ ಶ್ರೀಧರ, ಈಓ ಎಸ್.ಎಂ.ಕಾಂಬಳೆ ಮತ್ತಿತರಿದ್ದರು.