`ನನ್ನ ಲೈಫ್ ನನ್ನ ಪರಿಸರ’ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

`ನನ್ನ ಲೈಫ್ ನನ್ನ ಪರಿಸರ’ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಜಗಳೂರು, ಮೇ 20- ಪಟ್ಟಣದಲ್ಲಿ ಸಾರ್ವಜನಿಕರು ತ್ಯಾಜ್ಯ ದೇಣಿಗೆದಾರರಾಗಿ `ನನ್ನ ಲೈಫ್, ನನ್ನ ಸ್ವಚ್ಛ ನಗರ’ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮನವಿ ಮಾಡಿದರು.

ಪಟ್ಟಣದ ಪಂಪ್ ಹೌಸ್ ಬಳಿ ಮರು ಬಳಕೆ, ಪುನರ್‌ ಬಳಕೆ, ತ್ಯಾಜ್ಯ ವಸ್ತುಗಳ (ಆರ್.ಆರ್.ಆರ್.) ಸಂಗ್ರಹಣಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಸ್ವಚ್ಛ ಭಾರತ್ ಮಿಷನ್ ನಗರ-2 ಯೋಜನೆಯಡಿ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಆಟಿಕೆ ವಸ್ತುಗಳು, ಬಳಸಿದ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ, ಮರುಬಳಸಬಹುದಾದ ವಸ್ತುಗಳನ್ನು ಹಾಗೂ  ಉತ್ಪಾದನೆ ರಕ್ಷಿಸುವ ಉದ್ದೇಶದಿಂದ ಜೂನ್ 5ರ ವರೆಗೆ  ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಿದ್ದು, ತಮ್ಮ ಮನೆಯಲ್ಲಿನ ತ್ಯಾಜ್ಯ ನೀಡಿ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಸುಸ್ಥಿರ ಜೀವನ ಪದ್ಧತಿ ಅಳವಡಿಸಿಕೊಂಡು ಪರಿಸರ ಸ್ವಚ್ಛತೆಗೊಳಿಸಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಎನ್.ಎಂ.ಲೋಕೇಶ್ ಮಾತನಾಡಿ, ಪ್ರತಿ ಶಾಲಾ-ಕಾಲೇಜು ಹಂತಗಳಲ್ಲಿ ಮಕ್ಕಳಿಗೆ ಪರಿಸರ ಸ್ವಚ್ಛತೆ ಜಾಗೃತಿ ಮೂಡಿಸಲಾಗುತ್ತಿದೆ. 

ಪ್ಲಾಸ್ಟಿಕ್ ಪರಿಸರಕ್ಕೆ ಅಪಾಯಕಾರಿಯಾಗಿದ್ದು, ಪ್ರಕೃತಿಯಲ್ಲಿ ವಿಷಪೂರಿತ ಗಾಳಿ ಪಸರಿಸುತ್ತದೆ. ಮನುಷ್ಯನ ಉತ್ತಮ ಆರೋಗ್ಯಕ್ಕೆ ಆಮ್ಲಜನಕ ಅಗತ್ಯವಾಗಿದೆ. ಆದ್ದರಿಂದ ಪರಿಸರ ಸ್ವಚ್ಛತೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸ್ ವೃತ್ತ ನಿರೀಕ್ಷಕ  ಶ್ರೀನಿವಾಸ್ ಮಾತನಾಡಿ, ಪ್ರತಿ ಮನೆಗಳನ್ನು ಹಬ್ಬ, ಹರಿದಿನಗಳಲ್ಲಿ ಸ್ವಚ್ಛಗೊಳಿಸಿದಾಗ ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು, ಹಳೆಯ ಪುಸ್ತಕ, ಬಟ್ಟೆಗಳನ್ನು ಸಂಗ್ರಹಿಸಿ ಇತರರಿಗೆ ಮರುಬಳಕೆ ಮಾಡಲು ಅವಕಾಶ ನೀಡಿದರೆ, ನಮ್ಮ ನೆರೆಹೊರೆಯ ಪರಿಸರ ಸ್ವಚ್ಛತೆ ಸಾಧ್ಯ. ಎಲ್ಲೆಂದರಲ್ಲಿ ಎಸೆದರೆ ಅವುಗಳಿಂದ ರೋಗ ರುಜಿನಗಳು ಆಕ್ರಮಿಸುತ್ತವೆ ಎಂದರು.

ಪುಸ್ತಕಗಳನ್ನು ಶಾಲಾ-ಕಾಲೇಜಿಗೆ ನೀಡುವುದು ಮತ್ತು ಹಳೆಯ ಬಟ್ಟೆಗಳನ್ನು ಪುನರ್ ಬಳಕೆಗೆ ಯೋಗ್ಯವಾದ ಸಾಮಾನು, ಬಟ್ಟೆಗಳನ್ನು ಅನಾಥಾಶ್ರಮಗಳಿಗೆ ಕೊಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಕುಮಾರಿ, ಸದಸ್ಯರಾದ ಲಲಿತಮ್ಮ, ಶಕೀಲ್ ಅಹಮ್ಮದ್, ರವಿಕುಮಾರ್, ರಮೇಶ್ ರೆಡ್ಡಿ, ಲುಕ್ಮಾನ್ ಖಾನ್, ಪಾಪಲಿಂಗಪ್ಪ, ಸಿದ್ದಪ್ಪ, ನಾಮನಿರ್ದೇಶಿತ ಸದಸ್ಯರಾದ ಬಿ.ಪಿ.ಸುಭಾನ್, ರುದ್ರಮುನಿ, ಟಿಎಚ್‌ಓ ಡಾ.ನಾಗರಾಜ್, ಆರೋಗ್ಯ ನಿರೀಕ್ಷಕ ಖಿಫಾಯತ್, ಶಾಹಿನಾ, ನೂರ್ ಜಹಾನ್ ಮತ್ತಿತರರು ಇದ್ದರು.

error: Content is protected !!