ಹಿರೇಕಲ್ಮಠದಲ್ಲಿ ನಾಳೆ ಸಾಮೂಹಿಕ ವಿವಾಹ

ಹೊನ್ನಾಳಿ, ಮಾ.9- ಇಲ್ಲಿನ ಹಿರೇಕಲ್ಮಠದಲ್ಲಿ ನಾಳೆ ದಿನಾಂಕ 10 ಮತ್ತು 11ರಂದು ಲಿಂ. ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ 55ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ 10ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

ಶ್ರೀಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿನಾಂಕ 10ರ ಬೆಳಗ್ಗೆ 9.20ಕ್ಕೆ ಕೋಣಂದೂರು ಮಠದ ಅಭಿನವ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು  ಧರ್ಮ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಸಂಜೆ 7ಕ್ಕೆ ಚನ್ನಪ್ಪಸ್ವಾಮಿ ಜನ ಕಲ್ಯಾಣ ಸೇವಾ ಟ್ರಸ್ಟಿನ ಸಹಯೋಗದಲ್ಲಿ ಸಾಹಿತಿ ಲಿಂ. ಎಚ್. ತಿಪ್ಪೇರುದ್ರಸ್ವಾಮಿ, ಮತ್ತು ಲಿಂ. ಎಚ್.ಎನ್. ಷಡಾಕ್ಷರ ಶಾಸ್ತ್ರಿ ಇವರ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ಹಿರೇಕಲ್ಮಠದ ಶ್ರೀಗಳು, ಮೈಸೂರು ಬನ್ನಿಕೊಪ್ಪ ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಶ್ರೀ ಹಾಗೂ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ.

ಜಯಶೀಲ ಗಂಗಾಧರ ಸ್ವಾಮಿ ದತ್ತಿ ಉಪನ್ಯಾಸ ನೀಡಲಿದ್ದು, ಕದಳಿ ಕರ್ಪೂರ ಸಾಹಿತ್ಯ ಚಿಂತನೆ ವಿಷಯ ಕುರಿತು ಡಾ.ಎಚ್.ತಿಪ್ಪೇರುದ್ರಸ್ವಾಮಿ ಉಪನ್ಯಾಸ ನೀಡಿಲಿದ್ದಾರೆ.

ಸಂಸ್ಕೃತ ಪಾಠ ಶಾಲೆಯ ಪ್ರಾಚಾರ್ಯೆ ಡಾ. ಪ್ರತಿಮಾ ನಿಜಗುಣ ಶಿವಯೋಗಿ ಸ್ವಾಮಿ ಪಂಡಿತ ಹೆಚ್.ಎನ್. ಷಡಾಕ್ಷರಿ ಶಾಸ್ತ್ರೀಗಳ ಬದುಕು ಮತ್ತು ಸಾಧನೆ ಕುರಿತು ದತ್ತಿ ಉಪನ್ಯಾಸ ನೀಡುವರು.

ದಿನಾಂಕ 11ರ ಬೆಳಗ್ಗೆ 8.30ಕ್ಕೆ ಲಿಂ.ಗುರುಗಳ ಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಹೇಳಿದರು.

10.30ಕ್ಕೆ ಧರ್ಮ ಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಷ್ಟೂರು ರುದ್ರಮುನಿ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸುವರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ, ಡಾ.ಡಿ.ಬಿ. ಗಂಗಪ್ಪ ಹಾಗೂ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮುಂಡರಗಿ ತಾಲ್ಲೂಕಿನ ಕೂರ್ಲಹಳ್ಳಿಯ ನಾಗಪ್ಪ ಗಂಗಪ್ಪ ಮಜ್ಜಿಗೆ ಅವರಿಗೆ `ಚಂದ್ರಶೇಖರ ಶಿವಾಚಾರ್ಯ ಶ್ರೀ’ ಪ್ರಶಸ್ತಿ ನೀಡಲಾಗುವುದು ಎಂದ ಅವರು, ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು.

error: Content is protected !!