ಅಧಿಕಾರ ಇಂದು ಇರುತ್ತೆ, ಹೋಗುತ್ತೆ, ಆದರೆ ವಿಶ್ವಾಸ ಮುಖ್ಯ: ಎಸ್ಸೆಸ್ಸೆಂ

ಅಧಿಕಾರ ಇಂದು ಇರುತ್ತೆ, ಹೋಗುತ್ತೆ, ಆದರೆ ವಿಶ್ವಾಸ ಮುಖ್ಯ: ಎಸ್ಸೆಸ್ಸೆಂ - Janathavaniದಾವಣಗೆರೆ, ಜೂ. 3-  ಅಧಿಕಾರ ಇಂದು ಇರುತ್ತೆ, ಹೋಗುತ್ತೆ. ಆದರೆ ವಿಶ್ವಾಸ ಮುಖ್ಯ. ನೀವು ನಮ್ಮ ಮೇಲೆ ಇಟ್ಟಿರುವ ಈ ವಿಶ್ವಾಸ ಮುಂದೆಯೂ ಇರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ, ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರೂ ಆದ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ನಗರದ ಜಯದೇವ ವೃತ್ತದಲ್ಲಿ ಮಾತನಾಡಿದ ಅವರು, ಮಂತ್ರಿಯಾಗಿ ನಗರಕ್ಕೆ ಮೊದಲ ಬಾರಿಗೆ ಬಂದ ನನಗೆ ವಿವಿಧ ಭಾಗಗಳಿಂದ ಬಂದು ಆಶೀರ್ವದಿಸಿದ್ದೀರಿ. ಶುಭಾಶಯ ಕೋರಿದ್ದೀರಿ. ನಿಮ್ಮೆಲ್ಲರಿಗೂ ತುಂಬು  ಹೃದಯದಿಂದ ಅಭಿನಂದಿಸುತ್ತೇನೆ ಎಂದರು.

ದಾವಣಗೆರೆ, ಉತ್ತರ, ದಕ್ಷಿಣ ಸೇರಿದಂತೆ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು  ನಿಮ್ಮೆಲ್ಲರ ಉತ್ಸಾಹ, ಕಾರ್ಯಕರ್ತರ ಶ್ರಮ ಕಾರಣ ಎಂದು ಶ್ಲ್ಯಾಘಿಸಿದರು.

ಮುಖ್ಯಮಂತ್ರಿಗಳು ಚುನಾವಣಾ ಪೂರ್ವದಲ್ಲಿ ಹೇಳಿದ್ದ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ಎಂದಿಗೂ ಬಡವರ ಪಕ್ಷ ಎಂದರು.

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಯಾವ ರೀತಿ ದುರಾಡಳಿತ ನಡೆಸಿದೆ ಎಂಬುದನ್ನು ಎಲ್ಲರೂ ನೋಡಿದ್ದೇವೆ. ಪಾಲಿಕೆ, ದೂಡಾ ಸೇರಿದಂತೆ ಹಲವೆಡೆ ಕಾಂಗ್ರೆಸ್ ಮೆಜಾರಿಟಿ ಇದ್ದರೂ ದುರಾಡಳಿತದಿಂದ ಬಿಜೆಪಿ ಅಧಿಕಾರ ನಡೆಸಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಇನ್ನು ಮುಂದೆ  ನಾವು ಜಿಲ್ಲೆಯನ್ನು ಅಭಿವೃದ್ಧಿ  ಪಥದತ್ತ ಕೊಂಡೊಯ್ಯಬೇಕಿದೆ ಎಂದರು.

ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಅದಕ್ಕಾಗಿಯೂ ಹೋರಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ದಾವಣಗೆರೆ ಜಿಲ್ಲೆ ಎಂದರೆ ಕಾಂಗ್ರೆಸ್ ಜಿಲ್ಲೆ ಎನ್ನುವಂತೆ ಹೋರಾಟ ನಡೆಸೋಣ. ನಗರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸೋಣ ಎಂದರು.

error: Content is protected !!