ಅಂತರ್ಜಲ ಹೆಚ್ಚಿಸುವತ್ತ ರೈತರು ಗಮನಹರಿಸಲು ತೋಟಗಾರಿಕೆ ತಜ್ಞ ಡಾ. ಎಂ.ಜಿ. ಬಸವನಗೌಡ ಸಲಹೆ
ಜಗಳೂರು,ಮಾ.21- ತಾಲ್ಲೂಕಿನಾದ್ಯಂತ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚುತ್ತಿದ್ದು, ಹಾಗಾಗಿ ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸುವತ್ತ ರೈತರು ಗಮನಹರಿಸಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಡಾ. ಎಂ.ಜಿ. ಬಸವನಗೌಡ ಸಲಹೆ ನೀಡಿದರು.
ತಾಲ್ಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಮತ್ತು ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಪ್ರಸ್ತುತ ಗ್ರಾಮದಲ್ಲಿ ಹಿಂಗಾರು ಮತ್ತು ಬೇಸಿಗೆಗೆ ಸೂಕ್ತವಾದ ಈರುಳ್ಳಿ ಬೆಳೆಗಳ ಕ್ಷೇತ್ರ ಪ್ರಯೋಗವನ್ನು ಹಮ್ಮಿಕೊಂಡಿದ್ದು, ಭೀಮ ರೆಡ್ ತಳಿ ಉತ್ತಮ ಫಲಿತಾಂಶವನ್ನು ನೀಡಿದೆ. ಅದೇ ರೀತಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಗ್ರಾಮದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೈತರ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ಕೇಂದ್ರದ ವತಿಯಿಂದ ರೂಪಿಸಲಾಗಿದೆ ಎಂದು ತಿಳಿಸಿದರು. ಏಕ ಬೆಳೆ ಪದ್ಧತಿ ಕೈ ಬಿಟ್ಟು, ಬಹು ಬೆಳೆ ಮತ್ತು ಬಹು ಮಹಡಿ ಪದ್ಧತಿ ತೋಟಗಾರಿಕೆಯನ್ನು ಅನುಸರಿಸಿದರೆ ಪ್ರತಿ ವರ್ಷ ನಿಶ್ಚಿತ ಆದಾಯ ಪಡೆಯಬಹುದೆಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಭು ಶಂಕರ್ ಮಾತನಾಡಿ, ಇಲಾಖೆಯ ವತಿಯಿಂದ ಉಚಿತವಾಗಿ ತರಕಾರಿ ಬೀಜಗಳನ್ನು ಮತ್ತು ಹನಿ ನೀರಾವರಿಗೆ ಶೇಕಡ 90ರಷ್ಟು ಸಹಾಯಧನ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ತಿಳಿಸಿದರು.
ಕೇಂದ್ರದ ಬೇಸಾಯ ತಜ್ಞ ಬಿ.ಓ.ಮಲ್ಲಿ ಕಾರ್ಜುನ್ ಮಾತನಾಡಿ, ಜಗಳೂರು ತಾಲ್ಲೂಕಿ ನಲ್ಲಿ ಪ್ರಪ್ರಥಮ ಬಾರಿಗೆ ಈ ವರ್ಷ ನೇರ ಕೂರಿಗೆ ಭತ್ತದ ಪ್ರಾತ್ಯಕ್ಷಿಕೆಯಲ್ಲಿ ಯಶಸ್ವಿಯಾಗಿದ್ದು, ಬರದ ನಾಡಿನಲ್ಲಿ ಭತ್ತವನ್ನು ಬೆಳೆಯಬಹುದೆಂದು ಸಾಬೀತುಪಡಿಸಿದ್ದೇವೆ. ಇದನ್ನು ತಮ್ಮ ಗ್ರಾಮದಲ್ಲೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಅದೇ ರೀತಿ ಹವಾಮಾನ ವೈಪರೀತ್ಯಕ್ಕೆ ಸೂಕ್ತ ಕೃಷಿ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು.
ಕೃಷಿ ಅಧಿಕಾರಿ ಶ್ರೀಮತಿ ಜೀವಿತ ಮಾತನಾಡಿ, ಇಲಾಖೆಯ ವತಿಯಿಂದ ಕೃಷಿ ಹೊಂಡ ಮತ್ತು ಇತರೆ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ತಿಳಿಸಿದರು.
ಬಿದರಿಕೆರೆ ತರಳಬಾಳು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮಂಜುನಾಥ್ ಎಂ. ಎಚ್. ಹಾಗೂ ಉಪಾಧ್ಯಕ್ಷ ಸೋಮನಗೌಡ,
ನಿರ್ದೇಶಕ ಕೃಷ್ಣಮೂರ್ತಿ, ರೈತರಾದ ಶಶಿಧರ, ಮೇಘರಾಜ ಮತ್ತಿತರರು ಇದ್ದರು.