ದಾವಣಗೆರೆ, ಮಾ.10- 2024-25 ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಅನುಷ್ಟಾನಗೊಳಿಸುತ್ತಿರುವ ಅಭಿವೃದ್ದಿ ಕಾರ್ಯ ಕ್ರಮಗಳ ಸಂಪೂರ್ಣ ಪ್ರಗತಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳಿಂದ ಪ.ಜಾತಿ ಉಪಯೋಜನೆ, ಗಿರಿಜನ ಉಪಯೋಜನೆದಡಿ ಅನುಷ್ಟಾನಗೊಳ್ಳುತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಒಟ್ಟು 40 ಇಲಾಖೆಗಳ ವರದಿಯನ್ನು ಪರಿಶೀಲಿಸಿದ ಅವರು, ಮಾರ್ಚ್ ಮೊದಲ ವಾರದಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆ ಯಡಿ ಬಿಡುಗಡೆಗೊಳಿಸಲಾದ ಅನುದಾನವನ್ನು ಬಳಕೆ ಮಾಡಿ, ವರದಿಯನ್ನು ನೀಡಬೇಕು.
ಎಸ್ಸಿಪಿ,ಟಿಎಸ್ಪಿ ಯೋಜನೆಯಡಿ ಕೈಗೊಳ್ಳ ಲಾಗಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಕಾಮಗಾರಿಗಳನ್ನು ನಿಗದಿತ ಸಮಯ ದೊಳಗೆ ಮುಗಿಸಿ ಮುಂದಿನ ಸಭೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ವರದಿಯನ್ನು ನೀಡಬೇಕು. ಅರಣ್ಯ ಇಲಾಖೆಯವರಿಗೆ ಮಾರ್ಚ್ ಅಂತ್ಯದವರೆಗೆ ವರದಿ ನೀಡದಿದ್ದಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದೆಂದು ಅಧಿಕಾರಿಗಳಿಗೆ ತಿಳಿಸಿದರು.
ಆಯುಷ್ ಇಲಾಖೆ ಶೇ.85, ಮಹಾನಗರ ಪಾಲಿಕೆ ಶೇ.90, ನೀರಾವರಿ ಇಲಾಖೆ ಶೇ.88, ನಗರಾಭಿವೃದ್ದಿ ಇಲಾಖೆ ಶೇ.76, ವಿಶ್ವವಿದ್ಯಾನಿಲಯ ಶೇ.38, ಲೋಕೋಪಯೋಗಿ ಇಲಾಖೆ ಶೇ.35 ಇನ್ನೂ ವಿವಿಧ ಇಲಾಖೆಗಳು ಶೇ.100 ರಷ್ಟು ಪ್ರಗತಿ ಸಾಧಿಸಿವೆ. ನಿಗದಿತ ಪ್ರಗತಿ ಗುರಿ ಸಾಧಿಸದ ಕೆಲವು ಇಲಾಖೆ ಯ ಅಧಿಕಾರಿಗಳಿಗೆ ಮಾರ್ಚ್ ಅಂತ್ಯದೊಳಗೆ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಿ ಗುರಿ ಸಾಧಿಸುವಂತೆ ತಿಳಿಸಿದರು.
ಎಸ್ಸಿಪಿ ರೂ.261.65 ಕೋಟಿ ಹಂಚಿಕೆ ಯಾಗಿದ್ದು, ಬಿಡುಗಡೆಯಾದ ರೂ.144.33 ಕೋಟಿಯಲ್ಲಿ ರೂ.126.92 ಕೋಟಿ ಖರ್ಚು ಮಾಡಿ ಶೇ.87.94 ರಷ್ಟು ಪ್ರಗತಿ ಸಾಧಿಸಲಾಗಿದೆ. ಟಿಎಸ್ಪಿ ರೂ.116.45 ಕೋಟಿ ಹಂಚಿಕೆಯಾಗಿದ್ದು ರೂ.72.86 ಕೋಟಿ ಬಿಡುಗಡೆಯಾದ ಅನುದಾನದಲ್ಲಿ ರೂ.62.06 ಕೋಟಿ ಖರ್ಚು ಮಾಡಿ ಶೇ.85.17 ರಷ್ಟು ಪ್ರಗತಿ ಸಾಧಿಸಲಾಗಿದೆ.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಡಿಡಿಪಿಐ ಕೊಟ್ರೇಶ್, ಡಿಹೆಚ್ಓ ಡಾ.ಷಣ್ಮುಖಪ್ಪ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು