ಸಾಮಾಜಿಕ ಹಿತ ಕಾಪಾಡುವ ಜವಾಬ್ದಾರಿ ಪತ್ರಕರ್ತರಿಗೆ ಇರಬೇಕು

ಸಾಮಾಜಿಕ ಹಿತ ಕಾಪಾಡುವ ಜವಾಬ್ದಾರಿ ಪತ್ರಕರ್ತರಿಗೆ ಇರಬೇಕು

ಹರಿಹರ ಸರ್ಕಾರಿ ಕಾಲೇಜು ಕಾರ್ಯಕ್ರಮದಲ್ಲಿ ದಾವಿವಿ ಡಾ.ಶಿವಕುಮಾರ್ ಕಣಸೋಗಿ  

ಹರಿಹರ,ಮೇ 24-  ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ವೃತ್ತಿಯಲ್ಲಿ ಕರ್ತವ್ಯ ಪ್ರಜ್ಞೆ, ಸಾಮಾಜಿಕ ಹಿತ ಕಾಪಾಡುವ ಜವಾಬ್ದಾರಿಯೂ ಕೂಡ ಪತ್ರಕರ್ತರಿಗೆ ಇರಬೇಕಾಗುತ್ತದೆ ಎಂದು ದಾವಣಗೆರೆ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರುೂ ಆದ ಡಾ.ಶಿವಕುಮಾರ್ ಕಣಸೋಗಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಇಂದು ಕಾಲೇಜಿನಲ್ಲಿ `ಪತ್ರಿಕೋದ್ಯಮದ ವೃತ್ತಿ ಕೌಶಲ ಮತ್ತು ಸಂಹಿತೆ’ ಎಂಬ ವಿಷಯವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿನ ಓರೆಕೋರೆಗಳನ್ನು ತಿದ್ದುವ, ನಿಯಮ ಮತ್ತು ನಿಯಂತ್ರಣಗಳನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾತನಾಡುವ ಮತ್ತು ಬರೆಯುವ ಕೌಶಲ್ಯ ರೂಢಿಸಿಕೊಂಡರೆ ಉತ್ತಮ ಪತ್ರಕರ್ತರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಹಿರಿಯ ಪತ್ರಕರ್ತ ಟಿ. ಇನಾಯತ್ ಉಲ್ಲಾ  ಮಾತನಾಡಿ, ದಿನನಿತ್ಯದ ವೇದಿಕೆ ಕಾರ್ಯಕ್ರಮಗಳನ್ನು ಸುದ್ದಿ ಮಾಡುವುದರೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ವಿಶೇಷ ವರದಿಗಳನ್ನು ಮಾಡುವ ಮೂಲಕ ಸಂಬಂಧಿಸಿದ ಅಧಿಕಾರಿ  ಅಥವಾ ಇಲಾಖೆಯ ಜವಾಬ್ದಾರಿಯನ್ನು ಎಚ್ಚರಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿರಬೇಕೆಂದರೆ ಪತ್ರಿಕೋದ್ಯಮ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸುದ್ದಿಯನ್ನು ಗ್ರಹಿಸುವ ಗುಣ ಮತ್ತು ಸುದ್ದಿ ಮೂಲಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಪತ್ರಕರ್ತನದ್ದಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ  ಮನದಟ್ಟು ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್. ವಿರುಪಾಕ್ಷಪ್ಪ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ.ಜಿ.ಎಸ್.ಸುರೇಶ್ ಮಾತನಾಡಿದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ  ಡಾ.ಯತೀಶ್ ಎಲ್.ಕೋಡಾವತ್  ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. 

ದ್ವಿತೀಯ ಪದವಿ ವಿದ್ಯಾರ್ಥಿನಿ ಕುಮಾರಿ ದೀಕ್ಷಿತಾ ಬಿ.ಹೆಚ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕುಮಾರಿ ಅರ್ಪಿತಾ ಬಿ.ಆರ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಸಿ. ಹುಚ್ಚಂಗಿ  ವಂದಿಸಿದರು.

error: Content is protected !!