ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಮತ ನೀಡುವಿರಾ ?

ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಮತ ನೀಡುವಿರಾ ?

ಸಂತೆಮುದ್ದಾಪುರದಲ್ಲಿ ಹನುಮ ಮಾಲಾಧಾರಿಗಳ ಜೊತೆ ಮಾತುಕತೆ ನಡೆಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

ಜಗಳೂರು, ಏ.23- ತಾಲ್ಲೂಕಿನ ಸಂತೆಮುದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ದ್ವಿತೀಯ ವರ್ಷದ ಹನುಮ ಜಯಂತಿ ಮಹೋತ್ಸವದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪಾಲ್ಗೊಂಡು ಸಂಜೀವಿನಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. 

ದೇವರ ದರ್ಶನದ ಬಳಿಕ ಹನುಮ ಮಾಲಾಧಾರಿಗಳ ಜೊತೆ ಮಾತುಕತೆ ನಡೆಸಿದ ಗಾಯತ್ರಿ ಸಿದ್ದೇಶ್ವರ ಅವರು, ರಾಮ-ಹನುಮ ನಮಗೆ ಒಂದು ದಿವ್ಯ ಶಕ್ತಿ ಇದ್ದಂತೆ. ಎಲ್ಲಿ ರಾಮ ನೆಲೆಸಿರುವನೋ ಅಲ್ಲಿ ಹನುಮನೂ ಇರುತ್ತಾನೆ ಎಂದರು.

ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣದಲ್ಲಿ ನಮಗೆ ಶ್ರೀರಾಮ ಮತ್ತು ಸೀತೆಯ ಜೊತೆ ರಾಮ ಭಂಟ ಹನುಮನೂ ಅಷ್ಟೇ ಪ್ರಾಮುಖ್ಯತೆ ಪಡೆದ್ದಾನೆ. ಶ್ರೀರಾಮನ ಸೇವೆಗಾಗಿ ಹನುಮಂತ ಮಾಡಿದ ಲೀಲೆಗಳು ಒಂದೆರಡಲ್ಲ. ಅಂತಹ ಶ್ರೀರಾಮನ ಅಸ್ವಿತ್ವವನ್ನು ಇಂದು ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕೋಟ್ಯಂತರ ಭಾರತೀಯರ ಆರಾಧ್ಯ ದೈವ ಶ್ರೀರಾಮಚಂದ್ರ ಕಾಲ್ಪನಿಕ ಎಂದು ಕಾಂಗ್ರೆಸ್ಸಿಗರು ಕೋರ್ಟ್ ಮೆಟ್ಟಿಲೇರಿದ್ದರು. ಅಂತಹ ಕಾಂಗ್ರೆಸ್ಸಿಗೆ ಚುನಾವಣೆ ಮೂಲಕ ನಾವು ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕು ಎಂದು ಕರೆ ನೀಡಿದರು.

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಮಾಡಲು 500 ವರ್ಷಗಳು ಬೇಕಾಯಿತು. ನೂರಾರು ಕರ ಸೇವಕರ ಪ್ರಾಣ ತ್ಯಾಗ, ಕೋಟ್ಯಂತರ ಭಾರತೀಯರ ಹೋರಾಟದ ಫಲ, ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯಿಂದ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇದೇ ರಾಮಮಂದಿರ ನಿರ್ಮಾಣದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದ್ದಾಗ ಇದರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ 24 ವಕೀಲರನ್ನು ನೇಮಿಸಿತ್ತು. ವಕೀಲರ ತಂಡದ ನೇತೃತ್ವ ವಹಿಸಿದ್ದ ಇದೇ ಕಾಂಗ್ರೆಸ್‌ನ ಕಪಿಲ್ ಸಿಬಾಲ್, ಶ್ರೀರಾಮಚಂದ್ರ ಕೇವಲ ಕಾಲ್ಪನಿಕ ವ್ಯಕ್ತಿ, ಶ್ರೀರಾಮ ಇದ್ದರು ಎನ್ನುವುದಕ್ಕೆ ಏನು ಪುರಾವೆ ಇದೆ ಎಂದು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಂದು ಶ್ರೀರಾಮಚಂದ್ರನ, ಕೋಟ್ಯಂತರ ಭಾರತೀಯರ ಅಸ್ತಿತ್ವವನ್ನು ಪ್ರಶ್ನಿಸಿದ ಕಾಂಗ್ರೆಸ್ ಇಂದು ಶ್ರೀರಾಮ ಮಂದಿರದ ಕ್ರೆಡಿಟ್ ಬಿಜೆಪಿ ತೆಗೆದುಕೊಳ್ಳುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಶ್ರೀರಾಮನ ಅಸ್ತಿತ್ವ ಪ್ರಶ್ನೆ ಮಾಡಿದವರಿಗೆ ಅದರ ಕ್ರೆಡಿಟ್ ಕೇಳುವ ನೈತಿಕತೆ ಇದೆಯೇ ? ನೀವು ಅಂತಹವರಿಗೆ ಮತ ಹಾಕುವಿರಾ ? ಎಂದು ಪ್ರಶ್ನಿಸಿದರು.

ಜಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರಪ್ಪ, ಎಚ್.ಪಿ.ರಾಜೇಶ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಪಲ್ಲಾಗಟ್ಟಿ ಮಹೇಶ್, ಜೆಡಿಎಸ್ ನಾಯಕ ಕಲ್ಲೇರುದ್ರೇಶ್, ಇಂದಿರಾ ರಾಮಚಂದ್ರ, ರೂಪ, ವಿಜಯಲಕ್ಷ್ಮಿ, ಬಿದರಕೆರೆ ರವಿ ಕುಮಾರ್, ರಶ್ಮಿ ರಾಜೇಶ್, ಸೊಕ್ಕೆ  ನಾಗರಾಜ್, ಮಂಜುನಾಥ್, ಯರಬಳ್ಳಿ ಸಿದ್ದಣ್ಣ, ಲಿಂಗರಾಜ್ ಫಣಿಯಾಪುರ, ಚಟ್ನಿಹಳ್ಳಿ ಬಸವರಾಜ್, ಸೇರಿದಂತೆ ಗ್ರಾಮಸ್ಥರು, ಹನುಮ ಮಾಲಾಧಾರಿಗಳು ಇದ್ದರು.

error: Content is protected !!