ಹಾಲಿವಾಣದಲ್ಲಿ ಗ್ರಾಮದೇವತೆ ಜಾತ್ರೆಗೆ ವಿಧ್ಯುಕ್ತ ಚಾಲನೆ

ಹಾಲಿವಾಣದಲ್ಲಿ ಗ್ರಾಮದೇವತೆ ಜಾತ್ರೆಗೆ ವಿಧ್ಯುಕ್ತ ಚಾಲನೆ

ಮಲೇಬೆನ್ನೂರು, ಏ.1- ಹಾಲಿವಾಣ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಗೆ ಸೋಮವಾರ ಬೆಳಿಗ್ಗೆ ಕಂಕಣಧಾರಣೆ, ಎಣ್ಣೆ ಹರಿಶಿಣ ಕಾರ್ಯ ಮಾಡುವ ಮೂಲಕ 5 ದಿನಗಳ ಕಾಲ ಏಳು ಊರುಗಳಲ್ಲಿ ಜರುಗುವ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಬೆಳಿಗ್ಗೆ ಗಂಗೆಯನ್ನು ತಂದು ಶ್ರೀ ಕರಿಯಮ್ಮ ದೇವಿಗೆ ಅಭಿಷೇಕ ಮಾಡಿದ ನಂತರ ಪುಷ್ಪಾಲಂಕಾರ ಹಾಗೂ ಪೂಜೆ ಮಾಡಲಾಯಿತು.

ನಂತರ ಮಹಾಪ್ರಸಾದ ವಿನಿಯೋಗ ನಡೆಯಿತು. ಸಂಜೆ ದೇವಸ್ಥಾನದಲ್ಲಿ ಶ್ರೀದೇವಿಯ ಸ್ಮೃತಿ ಮತ್ತು ಮಾರುತಿ ಭಜನಾ ತಂಡದಿಂದ ನಡೆದ ಭಜನೆ ಮತ್ತು ರಾತ್ರಿ 9 ರಿಂದ ಹೊನ್ನಾಳಿಯ ಶ್ರೀ ಸಂತೃಪ್ತಿ ಅಂಧರ ಶಾಲೆಯ ಮಕ್ಕಳು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಗ್ರಾಮದ ದೇವರು ಗಳಾದ ಶ್ರೀ ಕರಿಯಮ್ಮ, ಶ್ರೀ ಬೀರಲಿಂಗೇಶ್ವರ, ಶ್ರೀ ಹಾಲಸ್ವಾಮಿ, ಶ್ರೀ ಯಲ್ಲಮ್ಮದೇವಿ, ಶ್ರೀ ಗಲ್ಲೆಕಟ್ಟೆ ದುರ್ಗಮ್ಮ ದೇವಿ, ಶ್ರೀ ಪರಶುರಾಮ ಸೇರಿದಂತೆ ಗೂಡುಕಟ್ಟಿಗೆ ಸೇರಿದ ಎಲ್ಲಾ ಏಳು ಗ್ರಾಮಗಳ ದೇವರುಗಳ ಮೆರವಣಿಗೆಯು ಗ್ರಾಮದ ರಾಜಬೀದಿ ಗಳಲ್ಲಿ ಡೊಳ್ಳಿನ ತಂಡಗಳ ಕುಣಿತದೊಂದಿಗೆ ಆಗಮಿಸಿ, ಕರಿಯಮ್ಮ ದೇವಸ್ಥಾನ ತಲುಪುವುದು. ಸಂಜೆ 6 ಗಂಟೆಯಿಂದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಐರಣಿ ಮಠದ ಆನೆಯ ಅಂಬಾರಿಯ ಮೇಲೆ ಇಟ್ಟು ಉಡುಪಿಯ ರುದ್ರತಾಂಡವ ಚಂಡೆವಾದ್ಯ ಹಾಗೂ ಸಿಡಿಮದ್ದು  ಸಿಡಿತದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಬುಧವಾರ ಬೆಳಗಿನ ಜಾವದವರೆಗೂ ವಿಜೃಂಭಣೆ ಯಿಂದ ಮೆರವಣಿಗೆ ಮಾಡಲಾಗುವುದು.

ನಾಡಿದ್ದು ದಿನಾಂಕ 3ರ ಬುಧವಾರ ಬೆಳಗಿನ ಜಾವ 4.30ಕ್ಕೆ ಏಳೂರು ಘಟೆ ಬಂದ ನಂತರ ದೇವಸ್ಥಾನದ ಬಳಿ ಓಕುಳಿ ತುಂಬಿದ ಹಿಟ್ಟಿನ ಕೋಣಗಳ ಬಲಿ ನೀಡಲಾ ಗುವುದು. ಬೆಳಿಗ್ಗೆ 6 ಗಂಟೆಗೆ ಚರಗ ಹಾಕಲಾಗುವುದು. 8 ಗಂಟೆ ಯಿಂದ ಹರಕೆ ಹೊತ್ತ ಭಕ್ತರಿಂದ ಉರುಳು ಸೇವೆ, ಬೇವಿನ ಉಡುಗೆ, ಬಾಯಿಬೀಗ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. 

ದಿನಾಂಕ 4ರ ಗುರುವಾರ ಬೆಳಿಗ್ಗೆ 8 ಗಂಟೆಗೆ ದೇವಿಗೆ ವಿಶೇಷ ಪೂಜೆ ಮತ್ತು ಸಂಜೆ 4 ರಿಂದ ಸಿಡಿ ಉತ್ಸವ, ರಾತ್ರಿ 8 ಗಂಟೆಗೆ ಭದ್ರಾವತಿಯ ಚಂದನ ಮ್ಯೂಸಿಕಲ್ ನೈಟ್ಸ್ ಆರ್ಕೆಸ್ಟ್ರಾ ವತಿಯಿಂದ ಮತ್ತು ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ದಿನಾಂಕ 5ರ ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಸಂಜೆ 4 ರಿಂದ ಬೆಲ್ಲದ ಬಂಡಿ ಉತ್ಸವ ಮತ್ತು ಓಕುಳಿ, ಸಂಜೆ 6 ಗಂಟೆಗೆ ಮಹಾ ಮಂಗಳಾರತಿ ಹಾಗೂ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದು ಎಂದು ಎಸ್.ಜಿ. ಪರಮೇಶ್ವರಪ್ಪ ಮಾಹಿತಿ ನೀಡಿದರು.

error: Content is protected !!