ಮಲೇಬೆನ್ನೂರು, ಮೇ 22 – ಭಾನುವಾರ ರಾತ್ರಿ ಸ್ವಲ್ಪ ಹೊತ್ತು ಸುರಿದ ಭಾರೀ ಗಾಳಿ-ಮಳೆಗೆ ಮಲೇಬೆನ್ನೂರು ಸುತ್ತ-ಮುತ್ತ ಭತ್ತದ ಬೆಳೆ ನೆಲಕಚ್ಚಿದೆ.
ನಂದಿತಾವರೆ, ಕುಣಿ ಬೆಳಕೆರೆ, ದೇವರ ಬೆಳಕೆರೆ, ಸಾಲಕಟ್ಟಿ, ಸಲಗನಹಳ್ಳಿ, ಬೂದಿಹಾಳ್, ನಿಟ್ಟೂರು, ಕುಂಬಳೂರಿನಲ್ಲಿ ಸುಮಾರು 250 ಎಕರೆ ಭತ್ತದ ಬೆಳೆ ನೆಲ ಕಚ್ಚಿದ್ದು, ರೈತರಿಗೆ ತೊಂದರೆ ಆಗಿದೆ.
ಯಲವಟ್ಟಿಯಲ್ಲಿ ಅಂಬಿಕಾಬಾಯಿ ಎಂಬುವವರ ಮನೆ ಕುಸಿದು ಬಿದ್ದಿದೆ. ಈ ವೇಳೆ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಕಂದಾಯ ನಿರೀಕ್ಷಕ ಆನಂದ್ ತಿಳಿಸಿದ್ದಾರೆ.
ಯಲವಟ್ಟಿಯಲ್ಲಿ ಭದ್ರಾ ಕಾಲುವೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ ಎಂದು ಗ್ರಾಮದ ಶಂಕರಪ್ಪ ತಿಳಿಸಿದ್ದಾರೆ. ದೇವರಬೆಳಕೆರೆ ಪಿಕಪ್ ಡ್ಯಾಂಗೆ ಜಲ ಸಸ್ಯರಾಶಿ ಹರಿದು ಬರುತ್ತಿದ್ದು. ಜಲಾಶಯದ ನೀರು ಹೊರ ಹೋಗದ ಕಾರಣ ಹಿನ್ನೀರಿನಲ್ಲಿ ನೂರಾರು ಎಕರೆ ಭತ್ತದ ಬೆಳೆ ಜಲಾವೃತ ಆಗುವ ಆತಂಕದಲ್ಲಿ ಸಂಕ್ಲೀಪುರ ಮತ್ತಿತರೆ ಗ್ರಾಮಗಳ ರೈತರಿದ್ದಾರೆ.
ತಹಶೀಲ್ದಾರ್ ಭೇಟಿ :- ಗಾಳಿ-ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಸೋಮವಾರ ತಹಶೀಲ್ದಾರ್ ಪೃಥ್ವಿ ಸ್ಥಾನಿಕರಿ ಭೇಟಿ ನೀಡಿ ಪರಿಶೀಲಿಸಿ ಹಾನಿ ಬಗ್ಗೆ ವರದಿ ನೀಡುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.