ಸೈನಿಕರೊಂದಿಗೆ ಸಾಣೇಹಳ್ಳಿಯ ಸ್ವಾಮೀಜಿ ಸಂವಾದ

ಸೈನಿಕರೊಂದಿಗೆ ಸಾಣೇಹಳ್ಳಿಯ ಸ್ವಾಮೀಜಿ ಸಂವಾದ

ಸಾಣೇಹಳ್ಳಿ, ಮೇ 16-  ಭಾರತೀಯ ಸೇನೆಯ ಯೋಧರ ಜೊತೆ ಇಲ್ಲಿನ ಶ್ರೀಮಠದ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಸಾಣೇ ಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ    ಸಂವಾದ ನಡೆಸಿದರು.  ಶ್ರೀಮಠದಿಂದ  ಔತಣ ನೀಡುವ ಮೂಲಕ, ದೇಶ ಕಾಯುವ ಸೈನಿಕರನ್ನು   ಗೌರವಿಸಿ, ಆಶೀರ್ವದಿಸಿದರು.   

ಚುನಾವಣಾ ಕಾರ್ಯಕ್ಕೆ ಕರ್ತವ್ಯದ ಮೇಲೆ ಬಂದಿದ್ದ ಭಾರತೀಯ ಸೇನೆಯ (ಸಿಆರ್‍ಫಿಎಫ್‍ನ ಡಿ/134 ತುಕಡಿಯ 60 ಜನರ ತಂಡ) ತಂಡ ಕಳೆದ ಒಂದು ತಿಂಗಳಿಂದ ಶ್ರೀಮಠದ ಪಕ್ಕದಲ್ಲೇ ಇರುವ ವಸತಿ ನಿಲಯದಲ್ಲಿ ಬೀಡು ಬಿಟ್ಟಿತ್ತು. ದಿನವೂ ಬೆಳಗ್ಗೆ ತೋಟಕ್ಕೆ ಹೋಗುವಾಗ ಅಲ್ಲಿಂದಲೇ ಪೂಜ್ಯರು ಹಾದು ಹೋಗುತ್ತಿದ್ದರು. ಆಗೆಲ್ಲ ವ್ಯಾಯಾಮ ನಿರತರಾಗಿದ್ದ ಸೈನಿಕರು ಪೂಜ್ಯರಿಗೆ ಅಲ್ಲಿಂದಲೇ ಕೈಮುಗಿದು ನಮಸ್ಕರಿಸುತ್ತಿದ್ದರು. 

ಪೂಜ್ಯರೂ ದೂರದಿಂದಲೇ ಆಶೀರ್ವದಿಸುತ್ತಿದ್ದರು. ಆದರೆ, ಅವರಿಗೆ ಪೂಜ್ಯರ ಬಗ್ಗೆ, ಮಠದ ಬಗ್ಗೆ, ಮಠದ ಚಟುವಟಿಕೆಗಳ ಬಗ್ಗೆ ತಿಳಿದು ಕೊಳ್ಳುವ ಹಂಬಲವಿತ್ತು. ಆದರೆ ಅವರಲ್ಲಿನ ಕೆಲವರು ಕರ್ತವ್ಯದ ಮೇಲೆ ಬೇರೆ ಬೇರೆ ಕಡೆ ಹೋಗಿರುತ್ತಿದ್ದರಿಂದ ಎಲ್ಲರೂ ಒಟ್ಟಿಗೆ ಸೇರುವ ಸಮಯಾವಕಾಶವಾಗಿರಲಿಲ್ಲ. 

ಚುನಾವಣೆ ಮುಗಿದಂತೆ ಅವರ ಕರ್ತವ್ಯಗಳೂ ಮುಗಿದು ಸೈನಿಕರು ತಮ್ಮ ತಮ್ಮ ಮೂಲ ಸ್ಥಾನಗಳಿಗೆ ಒಂದೆರಡು ದಿನಗಳಲ್ಲಿ ಹಿಂದಿರುಗಬೇಕಾದ ಅನಿವಾರ್ಯತೆ ಉಂಟಾಗಿತ್ತು. ಅವರ ಬಯಕೆಯನ್ನು ಈಡೇರಿ ಸುವ ಸಲುವಾಗಿ ಇಂದು ಸಂಜೆ ಅವರಿಗೆಲ್ಲ ಶ್ರೀಮಠದಲ್ಲಿ ಔತಣವನ್ನಿಟ್ಟು ಕೊಳ್ಳಲಾಗಿತ್ತು. ಔತಣಕ್ಕಿಂತ ಮುಂಚೆ ಬಯಲು ರಂಗಮಂದಿರದಲ್ಲಿ ಕುಳಿತು ಒಂದಿಷ್ಟು ಹೊತ್ತು ಸೈನ್ಯ, ಧರ್ಮ, ಬಸವಾದಿ ಶಿವಶರಣರು, ಅವರು ರಚಿಸಿದ ವಚನಗಳು, ರಾಜಕೀಯ, ಜನಜೀವನ, ಶಿಕ್ಷಣ, ಸಂಸ್ಕೃತಿ, ನಾಟಕ, ಸಾಹಿತ್ಯ, ಸಂಗೀತ, ಕರ್ನಾಟಕದ ವಾತಾವರಣ, ಜನರ ವರ್ತನೆ, ಆಲೋಚನೆ, ವಿಚಾರ-ನಿಲುವು ಮೊದಲಾದವುಗಳ ಕುರಿತು ಅನೌಪಚಾ ರಿಕವಾಗಿ ಪರಸ್ಪರ ಚರ್ಚಿಸಲಾಯಿತು. 

ಈ ಸಂದರ್ಭದಲ್ಲಿ ಹೆಚ್. ಎಸ್. ದ್ಯಾಮೇಶ್ ಸ್ವಾಗತಿಸುವುದರ ಜೊತೆಗೆ ಅನುವಾದಕರಾಗಿ ಕೆಲಸ ಮಾಡಿದರು. ನಟರಾಜ್ ಹೊನ್ನವಳ್ಳಿ, ಬಿ.ಎಸ್. ಶಿವಕುಮಾರ್, ಟಿ.ಎಂ.ಮರುಳಸಿದ್ದಯ್ಯ, ರಾಜು, ಮಧು, ಜೀವನ್ ಮೊದಲಾದವರು ಉಪಸ್ಥಿತರಿದ್ದರು. ವೈ.ಡಿ.ಬದಾಮಿ ವಂದಿಸಿದರು. ಹೆಚ್.ಎಸ್.ನಾಗರಾಜ್ ವಚನ ಗೀತೆಗಳನ್ನು ಹಾಡಿದರು. ಸೈನಿಕರಲ್ಲೊಬ್ಬರು ದೇಶಭಕ್ತಿಗೀತೆ ಹಾಡಿದರು. 

error: Content is protected !!