ಲಿಂ. ಶಿವಕುಮಾರ ಶ್ರೀಗಳವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಶ್ರೀಗಳ ಆಶೀರ್ವಚನ
ಸಿರಿಗೆರೆ, ಸೆ. 20 –ಮಗುವಿಗೆ ಧರ್ಮ, ಸಂಸ್ಕಾರ ಜೀವನದ ದಾರಿ ಮತ್ತು ಸಂಸ್ಕೃತಿಯನ್ನು ಕಲಿಸಿಕೊಟ್ಟ ಮೊದಲಿಗರೇ ತಾಯಿ. ಶಿಕ್ಷಣದಲ್ಲಿ ಪರಿವರ್ತನೆಯಾಗದೇ ಜಗತ್ತಿಗೆ ಸುಖವಿಲ್ಲ ಎಂದು ಶಿಕ್ಷಣಕ್ಕೆ ಭದ್ರಬುನಾದಿ ನೀಡಿದವರು ನಮ್ಮ ಲಿಂ.ಶ್ರೀಗಳವರು ಎಂದು ತರಳಬಾಳು ಜಗ ದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನೀಡಿದರು.
ಶುಕ್ರವಾರದಂದು ನಡೆದ ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಎಸ್.ಎಸ್ ಟ್ರಸ್ಟ್ನಿಂದ ನಮ್ಮ ನಡೆ ಆರೋಗ್ಯದ ಕಡೆ ಧ್ಯೇಯವಾಕ್ಯದಂತೆ ಸಿರಿಗೆರೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಿಸಿದ್ದೇವೆ. ಶಿವಕುಮಾರ ಶ್ರೀಗಳವರ ದಿಟ್ಟ ಹೆಜ್ಜೆ ಧೀರಕ್ರಮ ಪುಸ್ತಕದಲ್ಲಿ ಅವರ ಶ್ರಮವನ್ನು ಕಾಣಬಹುದು. ಶಿವಕುಮಾರ ಶ್ರೀಗಳವರ ಬದುಕು ತೆರೆದ ಪುಸ್ತಕದಂತಿತ್ತು. ಅಂತರಜಾತಿ ವಿವಾಹ, ಅಮವಾಸ್ಯೆಯ ದಿನ ವಿವಾಹ, ಇತರೆ ಕಾರ್ಯಗಳನ್ನು ನಡೆಸಿದ್ದಾರೆ. ವಚನಗಳ ಮೂಲಕ ಶರಣರ ತತ್ವಗಳನ್ನು ಜನರಿಗೆ ತಲುಪಿಸಿದರು. ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ. ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು ಜನರಿಗೆ ಜ್ಞಾನದಾಸೋಹ ನೀಡಿದವರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ ಕರ್ನಾಟಕದಲ್ಲಿ ರೈತರಿಗೋಸ್ಕರ ಇರುವ ಒಬ್ಬರೇ ಸ್ವಾಮೀಜಿ ನಮ್ಮ ತರಳಬಾಳು ಶ್ರೀಗಳವರು. ಭರಮಸಾಗರ, ಜಗಳೂರು ಕೆರೆಗಳಿಗೆ ಏತ ನೀರಾವರಿಗಳ ಮೂಲಕ ತುಂಬಿಸಿದ ಕೀರ್ತಿ ಶ್ರೀಗಳವರಿಗೆ ಸಲ್ಲುತ್ತದೆ. ಶ್ರೀಗಳ ಕಾರ್ಯದಿಂದ ರೈತರಲ್ಲಿ ಹೊಸ ಚೈತನ್ಯ ಮೂಡುತ್ತಿದೆ. ರೈತರಿಗಾಗಿ ನೀರಿನ ಹೋರಾಟದಲ್ಲಿ ಯಶಸ್ವಿಯಾಗಿರುವ ತರಳಬಾಳು ಶ್ರೀಗಳವರಿಗೆ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ವಿಧಾನ ಪರಿಷತ್ತು ಶಾಸಕ ಡಾ. ಧನಂಜಯ ಸರ್ಜಿ ಮಾತನಾಡಿ ಮೃತ್ಯುವಿನಿಂದ ಅಮೃತದ ಕಡೆಗೆ ಕರೆದೊಯ್ಯುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ. ವಚನ ಸಾಹಿತ್ಯ ಪ್ರಚಾರದಲ್ಲಿ ಗುರುಗಳ ಶ್ರಮವಿದೆ. ಶರಣರ ವಚನಗಳನ್ನು ಮನೆ ಮನೆಗೆ ವಿವಿಧ ಭಾಷೆಗಳಲ್ಲಿ ತಲುಪಿಸುವಲ್ಲಿ ಆಸಕ್ತಿವಹಿಸಿದವರು ಹಿರಿಯ ಗುರುಗಳು. ಅನ್ನದಾಸೋಹ ಮತು ವಿದ್ಯಾದಾನ ಮಾಡಿದ ಸಿರಿಗೆರೆ ಬೃಹನ್ಮಠಕ್ಕೆ ಸಲ್ಲುತ್ತದೆ. ಪ್ರಸ್ತುತ ಸಿರಿಗೆರೆ ಡಾ.ಶ್ರೀಗಳವರು ಸಮಾಜದ ಬಡತನ, ರೈತರ ಹಿತದೃಷ್ಠಿಯನ್ನು ಅರಿತು ನೀರನ್ನು ಕೆರೆಗಳಿಗೆ ಹರಿಸಿದವರು. ಎಲ್ಲದಕ್ಕೂ ವೈಜ್ಞಾನಿಕ ಕಾರಣ.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿ ನುಡಿಂದಂತೆ ನಡೆದವರು ಶರಣರು. ಹಿರಿಯ ಗುರುಗಳು ಶಿಕ್ಷಣವಂಚಿತರಿಗೆ ಹಳ್ಳಿ-ಹಳ್ಳಿಗಳಲ್ಲಿ ಜ್ಞಾನದಾಸೋಹ ನೀಡಿದವರು. ಜನಗಳ ಮನ-ಮನೆಗಳಲ್ಲಿ ಶಿಕ್ಷಣದ ಮೂಲಕ ಜ್ಞಾನದ ಜ್ಯೋತಿ ಮೂಡಿಸಿದವರು ಶಿವಕುಮಾರ ಶ್ರೀಗಳವರು. ಮಕ್ಕಳಲ್ಲಿ ಸಂಸ್ಕಾರ ಕಲಿಸುವಲ್ಲಿ ಪೋಷಕರು ವಂಚಿತರಾಗುತ್ತಿದ್ದಾರೆ. ಆದರೆ ಮಠ ಮಾನ್ಯಗಳು ಸಂಸ್ಕಾರಗಳನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.
ಶಾಸಕ ಹಿರೇಕೆರೂರು ಯು.ಬಿ.ಬಣಕಾರ್ ಮಾತನಾಡಿ, ನಾಡಿನಲ್ಲಿ ತಮ್ಮದೇ ಆದರ್ಶಗಳಿಂದ ಮನೆ ಮಾತಾದವರು ಶಿವಕುಮಾರ ಶ್ರೀಗಳವರು, ಮಕ್ಕಳಲ್ಲಿ ಸಂಸ್ಕಾರವನ್ನು ತುಂಬುವ ಕೆಲಸ ಸಿರಿಗೆರೆ ಶ್ರಿಮಠ ಮಾಡುತ್ತಿದೆ. ಅನ್ನ, ಅಕ್ಷರ ದಾಸೋಹದ ಜೊತೆಗೆ ನ್ಯಾಯದಾಸೋಹವನ್ನು ಹಾಗೂ ಸರ್ಕಾರದ ಕಿವಿ ಹಿಂಡಿ ಏತನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದವರು ಡಾ.ಶ್ರೀಗಳವರು.
ಆದ್ರಿಕಟ್ಟೆ ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಗಿರಿಯಾಪುರ ವಚನ ಸಾಹಿತ್ಯ ಪ್ರಚಾರ ಮತ್ತು ಶರಣರ ಕ್ಷೇತ್ರ ಸಂಶೋಧನೆಗೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಶಿವಮೊಗ್ಗ ಹಾಲು ಒಕ್ಕೂಟ ನಿಯಮಿತ ಅಧ್ಯಕ್ಷ ವಿದ್ಯಾಧರ್ ಮಾತನಾಡಿದರು,
ಕಾರ್ಯಕ್ರಮದಲ್ಲಿ ಹಿರೇಕೆರೂರು ಶಾಸಕ ಯು ಬಿ ಬಣಕಾರ್. ಶಿವಮೊಗ್ಗ ಹಲ್ವಾ ಕೋಟ ಅಧ್ಯಕ್ಷ ವಿದ್ಯಾಧರ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಹಾಸ್ಯ ಸಾಹಿತಿ ಎಂಎಸ್ ನರಸಿಂಹಮೂರ್ತಿ, ಡಾ. ಧನಂಜಯ ಸರ್ಜಿ ಶಾಸಕರು ವಿಧಾನ ಪರಿಷತ್ ಶಿವಮೊಗ್ಗ ಉಪಸ್ಥಿತರಿದ್ದರು