ಅಲೆಮಾರಿಗಳ ಸಮಸ್ಯೆ ಆಲಿಸಿದ ಡಿಸಿ

ಅಲೆಮಾರಿಗಳ ಸಮಸ್ಯೆ ಆಲಿಸಿದ ಡಿಸಿ

ಶೀಘ್ರ ಗ್ರಾಮಗಳಿಗೆ ತೆರಳಿ ಅಲ್ಲೇ ಉದ್ಯೋಗ ಮಾಡುವಂತೆ ಸಲಹೆ

ದಾವಣಗೆರೆ, ಮೇ 25-  ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಬನಶಂಕರಿ ಬಡಾವಣೆ ಬಳಿಯ ಸೇವಾ ರಸ್ತೆ ಪಕ್ಕದಲ್ಲಿ ವಿವಿಧ ಟೆಂಟ್‍ಗಳಲ್ಲಿ ವಾಸಿಸುತ್ತಿದ್ದ  ಅಲೆಮಾರಿ ಕುಟುಂಬಗಳನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ   ಭೇಟಿ ಮಾಡಿ, ಕುಂದು ಕೊರತೆಗಳನ್ನು ಆಲಿಸಿದರು. 

ಕಳೆದೆರಡು ದಿನಗಳಿಂದ ವಿವಿಧೆಡೆ ಗಾಳಿ, ಸಿಡಿಲು, ಮಳೆಯಾಗುತ್ತಿದ್ದು ಬಯಲು ಪ್ರದೇಶದಲ್ಲಿ ಈ ಜನರು ವಾಸಿಸುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಅನೇಕ ಕಡೆ ಮಳೆ, ಸಿಡಿಲಿಗೆ ಜನ, ಜಾನುವಾರುಗಳು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಅವರ ಕಷ್ಟಗಳನ್ನು  ಜಿಲ್ಲಾಧಿಕಾರಿಗಳು ಆಲಿಸಿದರು. 

 ಇಲ್ಲಿ ಒಟ್ಟು 21 ಕುಟುಂಬಗಳು ವಾಸಿಸುತ್ತಿದ್ದು, ಇದರಲ್ಲಿ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯ ಕೆಲವು ಕುಟುಂಬಗಳು  ಗ್ಯಾಸ್ ಸ್ಟವ್ ರಿಪೇರಿ ಕೆಲಸ ಮಾಡಲು ಬಂದು ತಾತ್ಕಾಲಿಕ ಟೆಂಟ್‍ನಲ್ಲಿ ನೆಲೆಸಿದ್ದಾರೆ. ಸೊಲ್ಲಾಪುರದಿಂದ ಕೆಲವು ಕುಟುಂಬಗಳು ಬಂದಿದ್ದು, ಇವರು ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ಸೊಲ್ಲಾಪುರಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ಚನ್ನಗಿರಿ ತಾಲ್ಲೂಕಿನ ಅಲ್ತಾಪನಹಳ್ಳಿಯ ಹಕ್ಕಿಪಿಕ್ಕಿ ಜನರು ಇಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ವಿವಿಧ ಉದ್ಯೋಗ ಮಾಡಿ ಇಲ್ಲಿ ವಾಸಿಸುತ್ತಿದ್ದಾರೆ. 

ಈ ಕುಟುಂಬಗಳಲ್ಲಿ ಇರುವ ಚಿಕ್ಕ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೌಷ್ಟಿಕ ಆಹಾರ ವಿತರಣೆಯನ್ನು ಮಾಡಲು ತಿಳಿಸಿ, ಹಕ್ಕಿಪಿಕ್ಕಿ ಜನರು ಜಿಲ್ಲೆಯವರಾಗಿದ್ದು, ಇವರಿಗೆ ಅಭಿವೃದ್ದಿ ನಿಗಮದ ಮೂಲಕ ಸ್ವ- ಉದ್ಯೋಗಕ್ಕೆ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. 

ಇಲ್ಲಿ ವಾಸಿಸುತ್ತಿರುವ ಎಲ್ಲರೂ ಆದಷ್ಟು ಬೇಗ ನಿಮ್ಮ ಗ್ರಾಮಗಳಿಗೆ ತಲುಪಿ, ಅಲ್ಲಿಯೇ ವಿವಿಧ ಉದ್ಯೋಗ ಮಾಡಲು ತಿಳಿಸಿ ಸ್ವ-ಉದ್ಯೋಗ ಕೈಗೊಳ್ಳಲು ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಕೆ ಮಾಡಲು ತಿಳಿಸಿ, ಏನಾದರೂ ತೊಂದರೆಯಾದಲ್ಲಿ ಜಿಲ್ಲಾ ಆಡಳಿತದ ಗಮನಕ್ಕೆ ತನ್ನಿರಿ, ಜಿಲ್ಲಾ ಆಡಳಿತ ತಮ್ಮ ಸಹಾಯಕ್ಕೆ ಸದಾ ಸಿದ್ದವಿದೆ ಎಂದು ಅವರಲ್ಲಿ ಭರವಸೆ ಮೂಡಿಸಿದರು. 

ಈ ವೇಳೆ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಉಪಸ್ಥಿತರಿದ್ದರು. 

error: Content is protected !!