ದಾವಣಗೆರೆ, ಸೆ.15-ಮಲೇಬೆನ್ನೂರು ಸಮು ದಾಯ ಆರೋಗ್ಯ ಕೇಂದ್ರ, ಹೊನ್ನಾಳಿಯ ತಾಲ್ಲೂಕು ಆರೋಗ್ಯ ಕೇಂದ್ರ, ಮಾದನ ಬಾವಿಯ ಕೋವಿಡ್ ಕೇರ್ ಸೆಂಟರ್ ಮತ್ತು ಚನ್ನಗಿರಿಯ ತಾಲ್ಲೂಕು ಆರೋಗ್ಯ ಕೇಂದ್ರ ಹಾಗೂ ಕಾಕನೂರು ಕೋವಿಡ್ ಕೇರ್ ಸೆಂಟರ್ಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪದ್ಮಾ ಬಸವಂತಪ್ಪ ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದರಿ ಕೇಂದ್ರಗಳಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ, ಕೋವಿಡ್ ರೋಗಿಗಳಿಗೆ ನಿಗದಿತ ಚಿಕಿತ್ಸೆ ಹಾಗೂ ಶುಚಿ ಮತ್ತು ರುಚಿಯಾದ ಬಿಸಿ ಬಿಸಿ ಆಹಾರವನ್ನು ವಿತರಿಸಲು ಕೋವಿಡ್ ಕೇರ್ ಕೇಂದ್ರದ ಸಿಬ್ಬಂದಿಗಳಿಗೆ ತಿಳಿಸಿದರು.
ಪ್ರತಿದಿನ ನಿಗದಿಪಡಿಸಲಾದ ಗಂಟಲು ದ್ರವ ಪರೀಕ್ಷೆಗಳನ್ನು ಮಾಡಲು ಸೂಕ್ತ ಕ್ರಮ ವಹಿಸುವಂತೆ ಟಿಎಚ್ಓಗಳಿಗೆ ಹಾಗೂ ಸ್ವ್ಯಾಬ್ ಕಲೆಕ್ಷನ್ ಟೀಮ್ಗಳಿಗೆ ಸಹಕಾರ ನೀಡಲು ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಯಿತು.