23 ಕಡೆ ಅಡಾಪ್ಟಿವ್ ಸಿಗ್ನಲ್ಸ್

ದಾವಣಗೆರೆ, ಮಾ. 16- ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ನಗರದ ವಿವಿಧ ವೃತ್ತಗಳಲ್ಲಿನ 23 ಸಿಗ್ನಲ್ ಸ್ಥಳಗಳಲ್ಲಿ ಸ್ಮಾರ್ಟ್ ಅಡಾಪ್ಟಿವ್ ಸಿಗ್ನಲ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.

ನಗರದ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ವ್ಯವಸ್ಥೆಯಲ್ಲಿ ಸಂಚಾರ ಉಲ್ಲಂಘನೆಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಿ, ಚಲನ್ ಜನರೇಟ್ ಮಾಡಿ ವಾಹನ ಮಾಲೀಕರಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ಅಡಾಪ್ಟಿವ್ ಸಿಗ್ನಲ್‌ ವ್ಯವಸ್ಥೆಯಿಂದ ವಾಹನ ಸವಾರರ ಕಾಯುವಿಕೆ ಸಮಯ ಉಳಿಯುತ್ತದೆ. ನಗರದಲ್ಲಿನ 23 ಸಾ ಮಾನ್ಯ ಸಿಗ್ನಲ್‌ಗಳಲ್ಲಿ ಓಡಾಡುವುದಕ್ಕಿಂತ ಅಡಾಪ್ಟಿವ್ ಸಿಗ್ನಲ್‌ಗಳಲ್ಲಿ ಸಂಚರಿಸಿದರೆ ಸುಮಾರು 15 ನಿಮಿಷಗಳು ಉಳಿತಾಯವಾಗುವುದು ಕಂಡು ಬಂದಿದೆ ಎಂದರು.

ಮಾಮೂಲಿ ಸಿಗ್ನಲ್‌ಗಳಲ್ಲಿ ಗ್ರೀನ್ ಸಿಗ್ನಲ್ ಬರಲು 60 ಸೆಕೆಂಡ್ ಕಾಯಬೇಕಾಗಿರುತ್ತದೆ. ವಾಹನಗಳ ದಟ್ಟಣೆ ಇದ್ದರೂ, ಇರದಿದ್ದರೂ ಕಾಯುವಿಕೆ ಅನಿವಾರ್ಯವಾಗಿರುತ್ತದೆ. ಆದರೆ ಅಡಾಪ್ಟಿವ್ ಸಿಗ್ನಲ್‌ಗಳಲ್ಲಿ ಗ್ರೀನ್ ಸಿಗ್ನಲ್ ಬಿದ್ದಾಗ  ವಾಹನಗಳ ದಟ್ಟಣೆ ಕಡಿಮೆ ಇದ್ದರೆ, ಬೇರೆ ಮಾರ್ಗದ ವಾಹನಗಳು ಸಂಚರಿಸಲು ಗ್ರೀನ್ ಸಿಗ್ನಲ್ ತೋರಿಸುತ್ತದೆ. ಇದರಿಂದ ಕಾಯುವಿಕೆಯ ಸಮಯ ಉಳಿಯುತ್ತದೆ ಎಂದರು.

ಆರ್‌ಎಲ್‌ವಿಡಿ (ರೆಡ್ ಲೈಟ್ ವೈಲೇಷನ್ ಡಿಕೆಟ್ಷನ್) : ಪಿ.ಬಿ. ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಸಿಗ್ನಲ್‌ನಲ್ಲಿ ಆರ್‌ಎಲ್‌ವಿಡಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 9 ಕಡೆ ಇಂತಹ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಎಸ್ಪಿ ರಿಷ್ಯಂತ್ ಹೇಳಿದರು.

ಪೊಲೀಸರು ಇಲ್ಲ ಎಂದು ತಿಳಿದು ಸಿಗ್ನಲ್ ಜಂಪ್ ಮಾಡುವ ಕಾರ್ಯಕ್ಕೆ ಮುಂದಾಗಬಾರದು. ಯಾರೇ ವಾಹನ ಸವಾರರು ಸಿಗ್ನಲ್ ಜಂಪ್ ಮಾಡಿದರೆ ಹಾಗೂ ಹೆಲ್ಮೆಟ್ ಹಾಕದೇ ಇದ್ದರೆ ಸ್ಥಳದಲ್ಲಿ ಪೊಲೀಸರು ಇರದಿದ್ದರೂ ಸ್ವಯಂ ಚಾಲಿತವಾಗಿ ಗುರುತಿಸಿ ದಂಡದ ಚಲನ್‌ ತಯಾರಾಗುತ್ತದೆ. ಈಗಾಗಲೇ ಕಳೆದ ಎರಡು ತಿಂಗಳಿನಿಂದ 5 ಸಾವಿರ ವಾಹನ ಮಾಲೀಕರಿಗೆ ದಂಡದ ಚಲನ್‌ ರವಾನಿಸಲಾಗಿದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮಾತನಾಡಿ, ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದೇ ಮುಖ್ಯವಲ್ಲ. ಮತ್ತೆ ಮತ್ತೆ ತಪ್ಪು ಮಾಡುವುದನ್ನು ತಡೆಯುವ ಉದ್ದೇಶದಿಂದ ದಂಡ ವಿಧಿಸಲಾಗುತ್ತದೆ. ಇದರೊಟ್ಟಿಗೆ ಇದೇ 20ರಿಂದ ವಿವಿಧೆಡೆ ನಿಯಮ ಪಾಲನೆ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

ಗೂಡ್ಸ್ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ ಎಂದು ಎಸ್ಪಿ ರಿಷ್ಯಂತ್ ಹೇಳಿದರು. ಪ್ರಯಾಣಿಕರ ಆಟೋ ಹೊರತುಪಡಿಸಿ ಬೇರೆ ಗೂಡ್ಸ್ ಆಟೋಗಳಲ್ಲಿ ಜನರನ್ನು ಕರೆದೊಯ್ಯುವುದು ಕಂಡು ಬಂದರೆ ಸಾರ್ವಜನಿಕರು 112ಕ್ಕೆ ಕರೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತ್ರಿಬಲ್ ರೈಡಿಂಗ್ ಕಟ್ಟು ನಿಟ್ಟಿನ ಕ್ರಮ: ಕಾಲೇಜು ವಿದ್ಯಾರ್ಥಿಗಳ ತ್ರಿಬ್ಬಲ್ ರೈಡಿಂಗ್ ಹೆಚ್ಚಾಗಿದ್ದು, ಇದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ಪಿ ಹೇಳಿದರು.  ಕಳೆದ ತಿಂಗಳು ಒಂದು ವಾರಗಳ ಕಾಲ ಪೊಲೀಸರು ದಂಡ ವಿಧಿಸುವ ಕೆಲಸ ಮಾಡಿದ್ದರು. ಈಗ ಮತ್ತೆ ದಂಡ ವಿಧಿಸುವ ಕಾರ್ಯ ಆರಂಭಿಸಲಾಗುವುದು ಎಂದರು.