ಹರಪನಹಳ್ಳಿ, ಮಾ.11- ಪ್ರಜಾಪ್ರಭುತ್ವ ಉಳಿಯಬೇಕಾದರೆ ಶೋಷಿತ ವರ್ಗದವರು ಮತಗಳನ್ನು ಮಾರಿಕೊಳ್ಳಬಾರದು ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಕರೆ ನೀಡಿದರು.
ಪಟ್ಟಣದ ಡಾ.ಬಾಬುಜಗಜೀವನ ರಾಂ ಸಮುದಾಯ ಭವನದಲ್ಲಿ ಎ.ನಾರಾಯಣಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜನಪದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪ ನವರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಕೊಟ್ಟ ನಂತರದ ದಿನಗಳಲ್ಲಿ 22 ಶಾಸಕರಿದ್ದ ಮಾದಿಗ ಸಮುದಾಯದವರು ಇಂದು 5 ಜನ ಮಾತ್ರ ಇದ್ದಾರೆ, ಕಾರಣ ಶೋಷಿತ ವರ್ಗದವರು ಮತ ಮಾರಿಕೊಂಡಿದ್ದರಿಂದ ಎಂದು ಹೇಳಿದರು.
ದಲಿತರ ಓಟು ಮಾರುಕಟ್ಟೆಯಲ್ಲಿಲ್ಲ ಎಂದು ಹೇಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಬರುತ್ತದೆ ಎಂದ ಅವರು, ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ಕೊಡಬೇಕು ಎಂದು ತಿಳಿಸಿದರು.
ದೇವದಾಸಿ ಪದ್ದತಿ ನಿರ್ಮೂಲನೆಯಾಗಬೇಕು, ಅಂತಹ ಸಂತ್ರಸ್ಥ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೌಲಭ್ಯ ಒದಗಿಸುತ್ತವೆ ಎಂದು ಹೇಳಿದರು.
ಸಹಕಾರ ಪ್ರಕೋಷ್ಠದ ರಾಜ್ಯ ಘಟಕದ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿ, ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು, ಸಮ ಸಮಾಜ ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೆಲಸ ಮಾಡುತ್ತಿವೆ ಎಂದರು.
ಜಿ.ಪಂ. ಮಾಜಿ ಸದಸ್ಯೆ ಸುವರ್ಣ ನಾಗರಾಜ, ಬಿಜೆಪಿ ವಿಜಯನಗರ ಜಿಲ್ಯಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಮುಖಂಡ ಪಿ.ಮಹಾಬಲೇಶ್ವರಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪನವರನ್ನು ಸನ್ಮಾನಿಸಿ, ಗೌರವಿಸಲಾಯಿತು. ದಲಿತ ಮುಖಂಡ ತೆಲಿಗಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮುಖಂಡ ಕಣವಿಹಳ್ಳಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಆರುಂಡಿ ನಾಗರಾಜ, ಎ.ಪಿ.ನಾಯ್ಕ, ಸತ್ತೂರು ಹಾಲೇಶ, ಪುರಸಭಾ ಅಧ್ಯಕ್ಷ ಎಚ್.ಎ.ಅಶೋಕ, ಲಿಂಗಾನಂದ, ನಿಚ್ಚವನಹಳ್ಳಿ ಭೀಮಪ್ಪ, ಹಗರಿಬೊಮ್ಮನಹಳ್ಳಿ ರಾಮಣ್ಣ, ಆಲೂರು ನಿಂಗರಾಜ,ಕೆಂಚಪ್ಪ ಕಂಚಿಕೇರಿ, ಇಂದ್ರಪ್ಪ ಹಲುವಾಗಲು, ಹೊಸಪೇಟೆ ಯಲ್ಲಪ್ಪ ಭಂಡಾರದರ ಹಾಗೂ ಇತರರು ಹಾಜರಿದ್ದರು.