ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ನಿಮ್ಮ ಉದಾಸೀನತೆಯಿಂದಾಗಿ ನಿಂತುಹೋಗಿರುವ ಕೆಲಸ, ಕಾರ್ಯಗಳ ಕಡೆ ಗಮನಹರಿಸುವುದು ಮೇಲು. ಪ್ರವಾಸೋದ್ಯಮವನ್ನು ನಡೆಸುತ್ತಿರುವವರಿಗೆ ಬಿಡುವಿಲ್ಲದ ಕೆಲಸವಾಗಲಿದೆ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ನಡುವೆ ಬರಬಹುದಾದ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ಎಲ್ಲಾ ಅರ್ಹತೆಯುಳ್ಳ ಮಡದಿಗೆ ಉತ್ತಮ ಕಂಪನಿಯಲ್ಲಿ ನೌಕರಿ ಸಿಗಲಿದೆ. ತಾಂತ್ರಿಕ ವರ್ಗದಲ್ಲಿ ನಿಪುಣರಾದವರಿಗೆ ವಿದೇಶಗಳಲ್ಲಿ ಉತ್ತಮ ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರಲಿವೆ. ಹಣಕಾಸಿನ ಸ್ಥಿತಿಗತಿ ಉತ್ತಮವಾಗಿರಲಿದೆ.ಹಿರಿಯರನ್ನು ಗೌರವಿಸಿ. ಮಂಗಳ-ಬುಧ-ಗುರು-ಶುಭ ದಿನಗಳು.
ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)
ಕುಟುಂಬಕ್ಕೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆ ನೀವೇ ತೀರ್ಮಾನ ತೆಗೆದುಕೊಳ್ಳದೇ, ಹಿರಿಯರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಹಣಕಾಸಿನ ಹರಿವು ಸಾಕಷ್ಟಿರುವುದರಿಂದ ಚಿಂತೆಬೇಡ. ಸಹೋದ್ಯೋಗಿಗಳೊಂದಿಗೆ ವಿಚಾರ ವಿನಿಮಯ ಮಾಡುವುದರಿಂದ ಔದ್ಯೋಗಿಕ ಸಮಸ್ಯೆಯೊಂದು ಬಗೆಹರಿಯಲಿದೆ. ರೈತಾಪಿ ಜನರಿಗೆ ಕೃಷಿಯಿಂದ ಉತ್ತಮ ಆದಾಯವಾಗಲಿದೆ. ವಿದೇಶದಲ್ಲಿ ಬಂಡವಾಳ ಹೂಡಿದವರಿಗೆ ಆದೇಶದ ಕಾನೂನಿನ ತೊಡಕು ಎದುರಾಗಲಿದೆ. ಹಾಗೆಂದ ಮಾತ್ರಕ್ಕೆ ಚಿಂತೆಬೇಡ. ವೈಯಕ್ತಿಕ ಆರೋಗ್ಯವನ್ನು ಕಡೆಗಣಿಸುವುದು ಅಷ್ಟು ಸೂಕ್ತವಲ್ಲ. ವಿದ್ಯಾರ್ಥಿಗಳಿಗೆ ನೆರವಾಗಿ. ಸೋಮ-ಶುಕ್ರ-ಶನಿ-ಶುಭದಿನಗಳು.
ಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ಯಂತ್ರೋಪಕರಣಗಳ ಬಿಡಿಭಾಗಳ ವಹಿವಾಟು ಜೋರಾಗಿಯೇ ನಡೆಯಲಿದೆ. ವಿದ್ಯಾರ್ಥಿಗಳು ಅಧ್ಯಯನದ ಕಡೆ ವಿಶೇಷ ಗಮನ ಹರಿಸುವುದು ಮೇಲು. ಕಳೆದು ಹೋಗಿದ್ದ ಅಮೂಲ್ಯ ದಾಖಲೆಯೊಂದು ಇಷ್ಟರಲ್ಲೇ ಸಿಗಲಿದೆ. ಅವಿವಾಹಿತರ ಮದುವೆ ಪ್ರಸ್ತಾಪ ಅನಿರೀಕ್ಷಿತವಾಗಿ ಮುಂದೆ ಹೋಗಲಿದೆ. ಆರ್ಥಿಕ ಸ್ಥಿತಿಗತಿ, ಉತ್ತಮಗೊಳ್ಳಲಿದ್ದು, ಕೆಲವು ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಹಿರಿಯರ ಮಾತನ್ನು ಗೌರವಿಸಿ,ಇದರಲ್ಲೇ ನಿಮ್ಮ ಯಶಸ್ಸು ಅಡಗಿದೆ. ಭೋಗ ಜೀವನ ಬೇಸರ ಮೂಡಿಸಲಿದೆ. ಅಶಾಂತಗೊಂಡ ಮನಸ್ಸು, ಶಾಂತಿಯನ್ನರಿಸಿ ಅಲೆದಾಡಲಿದೆ. ಭಾನು-ಸೋಮ-ಬುಧ-ಶುಭ ದಿನಗಳು.
ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ಸರ್ಕಾರಿ ಮೇಲಾಧಿಕಾರಿಗಳು ತಮ್ಮ ಕೈಕೆಳಗಿನ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳದೇ ಹೋದಲ್ಲಿ, ತೊಂದರೆಯನ್ನು ಅನುಭವಿಸಬೇಕಾದೀತು. ಈ ವಿಚಾರದಲ್ಲಿ ಹಿಂಜರಿಕೆ ಬೇಡ. ಪ್ರತಿಯೊಂದಕ್ಕೂ ಪರರನ್ನು ಅವಲಂಬಿಸುವುದು ಅಷ್ಟು ಕ್ಷೇಮಕರವಲ್ಲ.ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಮಾಡಿ ಮುಗಿಸುವುದು ಮೇಲು. ರಂಗಭೂಮಿಯಲ್ಲಿ ತೊಡಗಿಕೊಂಡವರಿಗೆ ಪದೋನ್ನತಿ ಯಾದರೂ, ವೇತನ ಮಾತ್ರ ಅಷ್ಟಕ್ಕಷ್ಟೇ. ರಾಜಕೀಯ ರಂಗದಲ್ಲಿ ಬೆಳೆಯಲು ಇಚ್ಛಿಸುವವರು ಹೆಚ್ಚು ಶ್ರಮವಹಿಸಿ, ಚುರುಕಾಗಿ ಓಡಾಡಿಕೊಂಡಿರಬೇಕಾಗಬಹುದು. ಸೋಮ-ಮಂಗಳ-ಗುರು-ಶುಭ ದಿನಗಳು.
ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಆತ್ಮಾಭಿಮಾನ ಇರುವುದು ಉತ್ತಮವೇ ಆದರೂ ಅದು ಅತಿಯಾದಲ್ಲಿ ದುರಭಿಮಾನವಾಗಿ ಯಶಸ್ಸಿಗೆ ಅಡ್ಡಗಾಲಾಗಬಹುದು. ಮನೆಯಲ್ಲಿ ಪೂರ್ವ ನಿರ್ಧರಿತ ಮಂಗಳ ಕಾರ್ಯವೊಂದು ಮುಂದೆ ಹೋಗಲಿದ್ದು, ಅದಕ್ಕೆ ಕಾರಣ ಏನೇ ಇದ್ದರೂ, ನಿಮ್ಮನ್ನೇ ಹೊಣೆಯಾಗಿಸುವರು. ಕೊಟ್ಟಸಾಲ ಸಮಯಕ್ಕೆ ಬರದೇ ನೀವೇ ಸಾಲಮಾಡಬೇಕಾಗಬಹುದು. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಉದಾಸೀನರಾಗಿರುವುದು ತರವಲ್ಲ. ರೈತಾಪಿ ಮಿತ್ರರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು, ಪದಾರ್ಥಗಳ ರೂಪದಲ್ಲಿ ಸಿಗಲಿವೆ. ಗುರುಗಳನ್ನು ವಿಶೇಷವಾಗಿ ಆರಾಧಿಸಿ. ಭಾನು-ಮಂಗಳ-ಗುರು-ಶುಭ ದಿನಗಳು.
ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ಮತ್ತು ವಿವೇಕ ಶಾಲಿಗಳಾಗಿದ್ದರೂ ಕೂಡ ಪರಿಸ್ಥಿತಿಯ ಕೈಗೊಂಬೆಯಾಗಿ, ದುರ್ಮಾಗಕ್ಕಿಳಿಯುವ ಸಂಭವವಿದೆ. ಈ ವಿಷಯನ್ನು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಭರವಸೆಯನ್ನು ಕೊಟ್ಟವರು, ಕೊನೇ ಘಳಿಗೆಯಲ್ಲಿ ಮಾತು ತಪ್ಪಬಹುದು. ಹಣ ಸಂಪಾದನೆ ಮಾರ್ಗದಲ್ಲೇ ಹೋಗುವ ನಿಮಗೆ, ಹದಗೆಡುತ್ತಿರುವ ಆರೋಗ್ಯದ ಕಡೆ ಗಮನ ಹರಿಯದೇ ಹೋಗಬಹುದು.ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳದೇ ಬೇರೆ ಮಾರ್ಗೋಪಾಯವಿಲ್ಲ. ಮನೆಯಲ್ಲಿ ಮಂಗಳ ಕಾರ್ಯದ ಪ್ರಸ್ತಾಪವಾಗಲಿದೆ. ಬುಧ-ಶುಕ್ರ-ಶನಿ-ಶುಭ ದಿನಗಳು.
ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)
ರಾಜಕಾರಣಿಗಳು ತಮ್ಮ ನಿಲುವುಗಳನ್ನು ಪದೇ ಪದೇ ಬದಲಾಯಿಸುವುದರಿಂದ ಜನರ ನಂಬಿಕೆ ಕಳೆದುಕೊಳ್ಳಬೇಕಾದೀತು. ಮಡದಿ ಮಕ್ಕಳ ಆಸರಿಕೆ, ಬೇಸರಿಕೆಗಳ ಕಡೆ ತುಸು ಗಮನಹರಿಸುವುದು ಉತ್ತಮ. ಪಾರಂಪರಿಕ ಕೃಷಿ ಪದ್ಧತಿಗೆ ಹೆಚ್ಚಿನ ಮಾನ್ಯತೆ ದೊರೆಯಲಿದೆ. ಸಹೋದ್ಯೋಗಿಗಳು ವಿನಾಕಾರಣ, ನಿಮ್ಮ ವಿಚಾರದಲ್ಲಿ ಅಸಹಕಾರ ತೋರುವರು. ಕೈಕಾಲು ಸೆಳೆತ ಮೊದಲಾದ ನರಸಂಬಂಧಿ ಅನಾರೋಗ್ಯ ಸಮಸ್ಯೆ ಎದುರಾಗಬಹುದು. ಅವಿವಾಹಿತ ಕನ್ಯೆಯರಿಗೆ, ಉತ್ತಮ ಸಂಬಂಧಗಳು ತಾವಾಗಿಯೇ ಹುಡುಕಿಕೊಂಡು ಬರಲಿವೆ. ಅತಿಮಾತುಗಾರಿಕೆ ಬೇಡ. ಸೋಮ-ಶುಕ್ರ-ಶನಿ-ಶುಭ ದಿನಗಳು.
ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ಆಸಕ್ತ ಕ್ರೀಡಾಪಟುಗಳಿಗೆ ಉತ್ತಮ ತರಬೇತುದಾರರು ಸಿಗುವರು. ಕ್ಷಣ ಚಿತ್ತ – ಕ್ಷಣ ಪಿತ್ತದ ನಿಮ್ಮ ಈ ಸ್ವಭಾವ ಹಲವರಿಗೆ ಹಿಡಿಸದೇ ಹೋಗಬಹುದು. ಮತ್ತೊಬ್ಬರ ಒತ್ತಾಯಕ್ಕೆ ಮಣಿದು ಜವಾಬ್ದಾರಿ ತೆಗೆದುಕೊಂಡಲ್ಲಿ ಮುಂದೆ ತೊಂದರೆ ಅನುಭವಿಸಬೇಕಾದೀತು. ವೈಯಕ್ತಿಕ ವಿಚಾರಗಳ ಬಗ್ಗೆ ಸ್ವಲ್ಪ ಗಂಭೀರವಾಗಿ ಚಿಂತಿಸುವುದು ಮೇಲು. ಹಿರಿಯರ ಮಧ್ಯಸ್ಥಿಕೆಯಲ್ಲಿ ನಿಮಗೆ ಬರಬೇಕಾಗಿರುವ ಪಾಲು ಸುಲಭವಾಗಿ ಬರಲಿದೆ. ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಾಂಶವಿಲ್ಲದಿದ್ದರೂ, ನಷ್ಟವಂತೂ ಖಂಡಿತಾ ಇಲ್ಲ. ವಿಷ್ಣು ಸಹಸ್ರನಾಮವನ್ನು ಪಠಿಸಿ. ಭಾನು-ಮಂಗಳ-ಗುರು-ಶುಭ ದಿನಗಳು.
ಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ಯುವಕರು ತಮ್ಮ ಜೀವಿತದ ಗುರಿ ಸಾಧಿಸಲು ಹೆಚ್ಚಿನ ಶ್ರಮಪಡದೇ ಅನ್ಯೋಪಾಯವಿಲ್ಲ. ಪ್ರಾಮಾಣಿಕ ವ್ಯಕ್ತಿಗಳು ತುಸು ತಡವಾದರೂ, ತಕ್ಕ ಪ್ರತಿಫಲ ಪಡೆಯುವರು. ಪರಿಣತರಿಗೆ ಉದ್ಯೋಗಾವಕಾಶಗಳು ತಾವಾಗಿಯೇ ಅರಸಿಕೊಂಡು ಬರಲಿವೆ. ಅದನ್ನು ಸದುಪಯೋಗಪಡಿಸಿಕೊಳ್ಳುವುದು ಮೇಲು. ಪ್ರಾಯಕ್ಕೆ ಬಂದ ಮಕ್ಕಳ ವಿಚಾರದಲ್ಲಿ ತುಸು ತಾಳ್ಮೆಯಿಂದ ವರ್ತಿಸುವುದು ಉತ್ತಮ. ಆದಾಯವು ಸಾಮಾನ್ಯವಾಗಿರುವುದರಿಂದ, ಉಳಿತಾಯದ ವಿಚಾರ ಸದ್ಯಕ್ಕೆ ಬೇಡ, ತೀರ್ಥಯಾತ್ರೆಗೆ ಹೊರಡಲಿರುವ ನೀವು, ಪೂರ್ವಸಿದ್ಧತೆಯೊಂದಿಗೆ ಹೊರಡುವುದು ಲೇಸು. ಸೋಮ-ಬುಧ-ಗುರು-ಶುಭ ದಿನಗಳು.
ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ಪಾಲುದಾರಿಕೆಯಲ್ಲಿ ಆರಂಭಿಸಿದ್ದ ಯೋಜನೆಯೊಂದರ ಬಗ್ಗೆ ತಕ್ಷಣ ನಿಮ್ಮ ನಿರ್ಧಾರ ಹೇಳುವ ಪ್ರಸಂಗವೊಂದು ಬರಲಿದೆ. ಅದನ್ನು ಜಾಣತನದಿಂದ ನಿಭಾಯಿಸುವುದನ್ನು ಕಲಿಯಿರಿ. ಅವಕಾಶಗಳನ್ನು ಹುಡುಕಿಕೊಂಡು ಹೋಗುವು ದಕ್ಕಿಂತ, ತಾನೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದರಲ್ಲೇ ಬುದ್ಧಿವಂತಿಕೆ ಅಡಗಿದೆ ಎಂಬುದು ನೆನಪಿರಲಿ. ಧನಾದಾಯ ಸಾಧಾರಣವಾಗಿರುವುದರಿಂದ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಡಿ. ಹಿರಿಯರ ಆರೋಗ್ಯದಲ್ಲಾಗುವ ವ್ಯತ್ಯಾಸ ನಿಮ್ಮನ್ನು ತುಸು ಕಂಗಾಲಾಗಿಸಲಿದೆ, ಗುರು ಸೇವೆ ಮಾಡಿ. ಗುರು-ಶುಕ್ರ-ಶನಿ-ಶುಭ ದಿನಗಳು.
ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಆಪಾದನೆಗಳು ಸಹಜ. ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡುವವರು ತುಸು ಎಚ್ಚರದಿಂದ ಕರ್ತವ್ಯ ನಿರ್ವಹಿಸುವುದು ಉತ್ತಮ. ಅನುಭವಿಲ್ಲದ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿದಲ್ಲಿ, ನಷ್ಟ ಖಂಡಿತಾ ತಪ್ಪಿದ್ದಲ್ಲ. ರಂಗ ಕರ್ಮಿಗಳಿಗೆ ಉತ್ತಮ ಹೆಸರು ತರುವ ಪ್ರದರ್ಶನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿವೆ. ಹಣಕಾಸಿನ ಹರಿವು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇರಲಿದೆ. ಕೆಲವು ವಿಚಾರಗಳನ್ನು ಮಡದಿ, ಮಕ್ಕಳೊಂದಿಗೆ ಕುಳಿತು ಚರ್ಚಿಸುವುದು ಉತ್ತಮ.ಅಧ್ಯಾಪಕ ವೃಂದದವರಿಗೆ ಉತ್ತಮ ದಿನಗಳು. ಗೋ ಸೇವೆ ಮಾಡಿ ಪುಣ್ಯಗಳಿಸಿರಿ. ಬುಧ-ಗುರು-ಶನಿ-ಶುಭ ದಿನಗಳು.
ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ಐಷಾರಾಮಿ ಜೀವನವನ್ನು ನಡೆಸಲು ಇಚ್ಛಿಸುವವರು ಬದಲಿ ಮಾರ್ಗೋಪಾಯ ಹುಡುಕಿಕೊಂಡು ಹೋಗುವರು. ಪರೀಕ್ಷಾ ಸಮಯದಲ್ಲಿ, ವಿದ್ಯಾರ್ಥಿಗಳು ಸಹ ಪಾಠಿಗಳೊಂದಿಗೆ ಹೊಂದಿಕೊಂಡು ಹೋಗುವುದು ಲೇಸು. ಚಾಡಿ ಮಾತನ್ನು ಕೇಳಿ ಸ್ನೇಹಿತರೊಂದಿಗೆ ವಿಶ್ವಾಸ ಕಳೆದುಕೊಳ್ಳಬೇಡಿ. ರಾಜಕಾರಣಿ ಗಳು ಬಹುಜನರ ಅಭಿಪ್ರಾಯಗಳನ್ನು ಗೌರವಿಸುವುದು ಉತ್ತಮ. ಆರ್ಥಿಕ ಹರಿವು ಮಂದವಾಗಿರುವುದರಿಂದ. ಖರ್ಚು-ವೆಚ್ಚಗಳ ಮೇಲೆ ಕಡಿವಾಣ ಹಾಕುವುದು ಮೇಲು. ಗುರು-ಹಿರಿಯರನ್ನು ಗೌರವಿಸಿರಿ. ಭಾನು-ಸೋಮ-ಗುರು-ಶುಭ ದಿನಗಳು.
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]