1.10 ಕೋಟಿ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ: ಮುಖ್ಯಮಂತ್ರಿ ಬೊಮ್ಮಾಯಿ
ದಾವಣಗೆರೆ, ಮಾ.17- ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ ರಾಜ್ಯದ 40 ಲಕ್ಷ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿದೆ. ಬರುವ ದಿನಗಳಲ್ಲಿ 1.10 ಕೋಟಿ ಮನೆಗಳಿಗೆ ನಳದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊನ್ನಾಳಿ ನಗರದಲ್ಲಿ ಶುಕ್ರವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಕೈಗೊಂಡಿರುವ 1933 ಕೋಟಿ ರೂ. ಮೊತ್ತದ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸೌಲಭ್ಯ ವಿತರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ರಾಜ್ಯದ 25 ಲಕ್ಷ ಮನೆಗಳಿಗೆ ಮಾತ್ರ ನಳದ ನೀರು ಸಂಪರ್ಕ ಕಲ್ಪಿಸಲಾಗಿತ್ತು ಎಂದು ಹೇಳಿದರು.
12 ಕೋಟಿ ಮನೆಗಳಿಗೆ ನೀರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಪ್ರತಿ ಮನೆಗೆ ಪ್ರತಿ ವ್ಯಕ್ತಿಗೆ 50 ಲೀಟರ್ ನೀರು ನೀಡುವುದಾಗಿ ಹೇಳಿದ್ದರು. ಇಂದು ಇಡೀ ದೇಶದಲ್ಲಿ 12 ಕೋಟಿ ಮನೆಗಳಿಗೆ ನಳದ ನೀರು ನೀಡಿದ್ದಾರೆ. ದೇಶದ 130 ಕೋಟಿ ಜನಸಂಖ್ಯೆಗೆ ಪ್ರತಿದಿನ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವುದು ಕಷ್ಟವಾದ ಕೆಲಸವಾಗಿದರೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.
ರೈತರಿಗೆ ವಿಮೆ: ಈ ವರ್ಷ ಪ್ರತಿ ರೈತ ಕುಟುಂಬಕ್ಕೆ ಇನ್ಸೂರೆನ್ಸ್ ಮಾಡಿಸಲು ನಮ್ಮ ಸರ್ಕಾರ 180 ಕೋಟಿ ರೂ. ಹಣ ಕಾಯ್ದಿರಿಸಿದೆ. ಸಹಜ ಮರಣ ಹೊಂದಿದ್ದರೂ ಎರಡು ಲಕ್ಷ ರೂ. ಇನ್ಸೂರೆನ್ಸ್ ಹಣ ರೈತರಿಗೆ ಬರುತ್ತದೆ ಎಂದರು.
ನಿಜವಾದ ಸಾಮಾಜಿಕ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪನವರು. ಭಾಗ್ಯ ಲಕ್ಷ್ಮಿ ಯೋಜನೆ, ಕಾಗಿನೆಲೆ ಅಭಿವೃದ್ಧಿ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಭೋವಿ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪನವರು ಎಂದು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಿಸುವ ಸಂದರ್ಭದಲ್ಲಿ ಜೇನುಗೂಡಿಗೆ ಕೈಹಾಕಿದಂತೆ ಎಂದು ಹೇಳುತ್ತಿದ್ದರು. ಆದರೆ ಧ್ವನಿ ಇಲ್ಲದ ಹಾಗೂ ನೆಲೆ ಇಲ್ಲದ ಜನಾಂಗಕ್ಕೆ ಜೇನು ತುಪ್ಪ ಕೊಡುವ ದಿಟ್ಟ ಹೆಜ್ಜೆ ಇಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ನೋಡಿ ರೇಣುಕಾಚಾರ್ಯರಿಗೆ ಮತ ನೀಡಬೇಕು ಎಂದು ಹೇಳಿದರು.
ರಾರಾಜಿಸಿದ ಬಿಜೆಪಿ ಧ್ವಜಗಳು
ದಾವಣಗೆರೆ: ಇಂದಿನ ಕಾರ್ಯಕ್ರಮದಲ್ಲಿ ಬಿಜೆಪಿ ಧ್ವಜಗಳು ರಾರಾಜಿಸಿದವು. ಈ ವೇಳೆ ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಪಕ್ಷದ ಧ್ವಜಗಳು ಬೇಡ ಎಂದು ಕಾರ್ಯಕ್ರಮದ ನಿರೂಪಕರು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಶಾಸಕ ರೇಣುಕಾಚಾರ್ಯ, ವೇದಿಕೆಯಲ್ಲಷ್ಟೇ ಬಿಜೆಪಿ ಧ್ವಜ ಬೇಡ. ಕೆಳಗೆ ನೀವು ಪಕ್ಷದ ಬಾವುಟ ಹಿಡಿದುಕೊಳ್ಳಿ. ಇಲ್ಲಿ ಯಾರೂ ಕಾಂಗ್ರೆಸ್ ಕಾರ್ಯಕರ್ತರು ಬಂದಿಲ್ಲ. ಬಂದಿರುವವರೆಲ್ಲ ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ ಎಂದು ಕಾರ್ಯಕಕರ್ತರನ್ನು ಹುರಿದುಂಬಿಸಿದರು. ಇದರಿಂದ ಕಾರ್ಯಕರ್ತರು ಹುಮ್ಮಸ್ಸು ಹೆಚ್ಚಾಗಿ ಕೇಕೇ ಹಾಕಿ ಬಿಜೆಪಿ ಧ್ವಜ ರಾರಾಜಿಸುವಂತೆ ಮಾಡಿದರು.
ಹೊನ್ನಾಳಿಯಲ್ಲಿ ಇವತ್ತು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಈ ಕ್ಷೇತ್ರದಲ್ಲಿ ರೇಣುಕಾಚಾರ್ಯರ ಪ್ರಯತ್ನದಿಂದ 1993 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇದೊಂದು ದಾಖಲೆ. ರೇಣುಕಾಚಾರ್ಯ ಈ ಕ್ಷೇತ್ರವನ್ನು ಮತ್ತು ಇಲ್ಲಿಯ ಜನರನ್ನು ಮಕ್ಕಳಂತೆ ಪ್ರೀತಿ ಮಾಡುತ್ತಾರೆ. ಕೊರೊನಾ ಸಮಯದಲ್ಲಿ ನಿಮ್ಮೊಂದಿಗೆ ಇದ್ದು ಆತ್ಮಸ್ಥೈರ್ಯ ತುಂಬಿದ ನಾಯಕ. ಹೊನ್ನಾಳಿ-ನ್ಯಾಮತಿ ಚಿತ್ರಣ ಬದಲಾವಣೆ ಮಾಡಿದ್ದಾರೆ, ದಾಖಲೆ ಪ್ರಮಾಣದಲ್ಲಿ ಸೇವೆ ಮಾಡಿದ್ದಾರೆ. ಒಂದು ಹಳ್ಳಿಗೆ ಹತ್ತತ್ತು ಬಾರಿ ರೇಣುಕಾಚಾರ್ಯ ಬಂದಿದ್ದಾರೆ. ಜನಪ್ರಿಯ ಶಾಸಕರಿರುತ್ತಾರೆ. ರೇಣುಕಾಚಾರ್ಯ ಜನೋಪಯೋಗಿ ಶಾಸಕರಾಗಿದ್ದಾರೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನನ್ನ ಹಾಗೂ ಬೊಮ್ಮಾಯಿ ಅವರ ಅವಧಿಯಲ್ಲಿ ಎಂ.ಪಿ.ರೇಣುಕಾಚಾರ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾವಿರಾರು ಕೋಟಿ ತಂದು ಅಭಿವೃದ್ಧಿ ಮಾಡಿದ್ದಾರೆ. ಈ ಕ್ಷೇತ್ರದ ಜನತೆ 25 ಸಾವಿರ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಈ ಕ್ಷೇತ್ರಕ್ಕೆ ರೂ.4,500 ಕೋಟಿ ಅನುದಾನ ತಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಅಭಿವೃದ್ಧಿ ಮಾಡಲಾಗಿದೆ. ಸೇತುವೆ, ಶಾಲೆ-ಕಾಲೇಜು, ಕುಡಿಯುವ ನೀರು, ಧೂಳು ಮುಕ್ತ ರಸ್ತೆ, ಚರಂಡಿಗೆ ಸಾವಿರಾರು ಕೋಟಿ ನೀರಿಗೆ ವೆಚ್ಚ ಮಾಡಲಾಗಿದೆ. ಅವಳಿ ತಾಲ್ಲೂಕುಗಳಿಗೆ ಚುತುಷ್ಪಥ ರಸ್ತೆಯಾಗಿದೆ. ಸಿ.ಎಂ. ಬಸವರಾಜ ಬೊಮ್ಮಾಯಿ ಅವರು 250 ಹಾಸಿಗೆ ಆಸ್ಪತ್ರೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಅತಿವೃಷ್ಟಿ ಸಮಯದಲ್ಲಿ ನಾನು ಒಂದು ತಿಂಗಳು ಮಲಗಿಲ್ಲ, ಮನೆ ಮನೆಗೆ ಭೇಟಿ ನೀಡಿ ನೊಂದವರ ಕಣ್ಣೀರು ಒರೆಸಿದ್ದೇನೆ ಎಂದು ಹೇಳಿದರು.
ನನಗೆ ಯಡಿಯೂರಪ್ಪನವರು ತಂದೆ ಸಮಾನ, ಬೊಮ್ಮಾಯಿ ಅವರು ಅಣ್ಣನ ಸಮಾನ ಹಾಗೂ ಪಕ್ಷ ತಾಯಿ ಸಮಾನ. ಭಾರತೀಯ ಜನತಾ ಪಾರ್ಟಿಗೆ ಚಿರಋಣಿಯಾಗಿರುತ್ತೇನೆ. ನಿಮ್ಮ ಸೇವಕನಾಗಿ ನಿಮ್ಮ ಮಧ್ಯ ಇದ್ದೇನೆ, ನಿಮ್ಮ ಸೇವಕನಾಗಿ ನಿಮ್ಮ ಜೊತೆಗೆ ಇರುತ್ತೇನೆ, ನಿಮ್ಮ ಆಶೀರ್ವಾದವಿರಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ಜಿ.ಎಂ.ಸಿದ್ದೇಶ್ವರ, ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮುಖಂಡರಾದ ಗುರುಮೂರ್ತಿ, ಬೆನಕನಹಳ್ಳಿ ಮಹೇಶದ್ರ, ದಿಡಗೂರು ಪಲಾಕ್ಷಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್, ಜಿಪಂ.ಮಾಜಿ ಸದಸ್ಯ ಸುರೇಂದ್ರನಾಯ್ಕ ಇತರರು ಇದ್ದರು. ಇತರರು ಉಪಸ್ಥಿತರಿದ್ದರು. ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎ.ಚನ್ನಪ್ಪ ಸ್ವಾಗತಿಸಿದರು.