ಸಹೋದರನ ಪತ್ನಿ ಕೊಲೆಗೈದ ಆರೋಪಿತನ ಸೆರೆ

ದಾವಣಗೆರೆ, ಸೆ.7- ತನ್ನ ಸಹೋದರನ ಪತ್ನಿಯನ್ನೇ ಕೊಲೆಗೈದಿದ್ದ ಆರೋಪಿತನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೂವಿನಮಡು ಗ್ರಾಮದ ಕರಿಬಸಪ್ಪ (52) ಬಂಧಿತನು.‌ ಸೆ.1,2020ರಂದು ತನ್ನ ತಮ್ಮ ರುದ್ರೇಶ ಅವರ ಪತ್ನಿ ನೀಲಮ್ಮ (48) ಎಂಬಾಕೆ ಯನ್ನು ಹೂವಿನಮಡು ಗ್ರಾಮದ ಮೆಕ್ಕೆಜೋಳ ಇರುವ ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ಆರಿಸಿಕೊಂಡು ಬರಲು ಹೋದಾಗ ಬಂಧಿತ ಆರೋಪಿತನು ಸೀರೆ ಸೆರಗಿನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ  ಕೊರಳಲಿದ್ದ ಬಂಗಾರದ ಗುಂಡಿನ ಸರವನ್ನು ಅಪಹರಿಸಿದ್ದ. ಈ ಸಂಬಂಧ ಹದಡಿ ಠಾಣೆಯಲ್ಲಿ ‌ಪ್ರಕರಣ ದಾಖಲಿಸಲಾಗಿತ್ತು. 

ಸೆ.4, 2020ರಂದು ಆರೋಪಿತನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತನ್ನ ಅಣ್ಣ-ತಮ್ಮರೊಂದಿಗೆ ದಾಯಾದಿ ಕಲಹವಿದ್ದು, ತನ್ನ ತಮ್ಮನ ಹೆಂಡತಿ ನೀಲಮ್ಮಳು ಯಾವಾಗಲೂ ತನಗೆ ಬೈಯ್ಯುತ್ತಿರುತ್ತಾಳೆಂಬ‌‌ ಕಾರಣಕ್ಕೆ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಕೆ ಒಬ್ಬಳೇ ತೋಟದಲ್ಲಿದ್ದಾಗ ಹಿಂದಿನಿಂದ ಬಂದು ಆಕೆಯ ಸೀರೆ ಸೆರಗಿನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ಬಂಧಿತನು ಒಪ್ಪಿಕೊಂಡಿದ್ದಾನೆ. 

ಈ ದಿನ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜಿಲ್ಲಾ ಎಸ್ಪಿ ಹನುಮಂತರಾಯ, ಎಎಸ್ಪಿ  ಎಂ. ರಾಜೀವ್, ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರ ಧ್ವಜ  ಅವರುಗಳ ಮಾರ್ಗದರ್ಶನದಲ್ಲಿ ತನಿಖಾಧಿ ಕಾರಿ ಗ್ರಾಮಾಂತರ ವೃತ್ತ ಸಿಪಿಐ ಬಿ. ಮಂಜುನಾಥ ನೇತೃತ್ವದಲ್ಲಿ ಹದಡಿ ಪೊಲೀಸ್ ಠಾಣೆ ಪಿಎಸ್ಐ ಪಿ. ಪ್ರಸಾದ್ ಮತ್ತು ಎಎಸ್ಐಗಳಾದ ಚನ್ನವೀರಪ್ಪ, ಏಕಾಂತಪ್ಪ ಹಾಗೂ ಸಿಬ್ಬಂದಿಗಳಾದ ನಾಗರಾಜ್, ಹರೀಶ್, ಶಿವಕುಮಾರ್, ಅರುಣ್ ಕುಮಾರ್ ಒಳಗೊಂಡ ತಂಡವು ಪ್ರಕರಣದ ಕೊಲೆ ಆರೋಪಿತನ ಪತ್ತೆ ಹಚ್ಚಿದೆ.

error: Content is protected !!