ದಾವಣಗೆರೆ, ಡಿ.2- ಪರವಾನಗಿ ಇಲ್ಲದೇ ಅಕ್ರಮ ವಾಗಿ ಮನೆಯಲ್ಲಿದ್ದ ಎರಡು ನಾಡ ಬಂದೂಕುಗಳನ್ನು ವಶಪಡಿಸಿಕೊಂಡು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಿಚಾರವಾಗಿ ತಮ್ಮ ಕಚೇರಿಯಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಮಾತನಾಡಿ, ನ್ಯಾಮತಿ ತಾಲ್ಲೂಕು ಚಿನ್ನಿಕಟ್ಟೆ ಗ್ರಾಮದ ತಮಿಳು ಕಾಲೋನಿ ವಾಸಿ ವೀರಸ್ವಾಮಿ ಅಲಿಯಾಸ್ ವೀರಪ್ಪ ಬಂಧಿತ ಆರೋಪಿ. ಪ್ರಕರಣದ ಮತ್ತೊಬ್ಬ ಆರೋಪಿ ಕುಮ್ರೇಶ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.
ಚಿನ್ನಿಕಟ್ಟೆ ಗ್ರಾಮದ ತಮಿಳರ ಕಾಲೋನಿಯಲ್ಲಿರುವ ಕುಮ್ರೇಶ ಎಂಬುವರ ವಾಸದ ಮನೆಯಲ್ಲಿ ನಾಡ ಬಂದೂಕುಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಜಿ. ಮುನ್ನೋಳಿ ನೇತೃತ್ವದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ಮತ್ತು ನ್ಯಾಮತಿ ಎಸ್ಐ ಪಿ.ಎಸ್. ರಮೇಶ, ಸಿಬ್ಬಂದಿಗಳಾದ ಕೆ. ಮಂಜಪ್ಪ, ಎಚ್.ವಿ. ಹರೀಶ, ಚಂದ್ರಶೇಖರ, ಉಮೇಶ, ಚನ್ನೇಶ, ರಾಮಪ್ಪ, ತಿಮ್ಮರಾಜು, ಆನಂದ ಒಳಗೊಂಡ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೇ ತನ್ನ ವಾಸದ ಮನೆಯಲ್ಲಿ 2 ನಾಡ ಬಂದೂಕುಗಳು ಹಾಗೂ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉಪಯೋಗಿಸುವ ಸ್ಟೀಲ್ ಬಾಲ್ಸ್ ಗಳು, ಮೊಳೆಗಳು, ಗನ್ ಪೌಡರ್ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಸುಬಾಹು ಅಪ್ಲಿಕೇಶನ್ ವಾರದಲ್ಲಿ ಕಾರ್ಯಗತ
ದಾವಣಗೆರೆ, ಡಿ.2- ಮನೆಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಸುಬಾಹು ಮೊಬೈಲ್ ಅಪ್ಲಿಕೇಷನ್ ಅನ್ನು ನಗರದಲ್ಲಿ ಮುಂದಿನ ಒಂದು ವಾರದಲ್ಲಿ ಕಾರ್ಯಗತಗೊಳಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಸುಬಾಹು ಅಪ್ಲಿಕೇಷನ್ ಮೂಲಕ ಮನೆಗಳ್ಳತನಗಳನ್ನು ತಡೆಗಟ್ಟಬಹುದು. ಅಲ್ಲದೇ ರಾತ್ರಿ ಪೊಲೀಸ್ ಗಸ್ತು ಸುಧಾರಿಸುವ ವ್ಯವಸ್ಥೆ ಪರಿಣಾಮಕಾರಿ ಯಾಗಲಿದೆ. ಅಪ್ಲಿಕೇಷನ್ ಕಾರ್ಯ ಗತಕ್ಕೆ ತಯಾರಿ ನಡೆಸಲಾಗಿದೆ. ಇದಕ್ಕೆ ಜನರ ಸಹಕಾರ ಅಗತ್ಯ. ಮನೆಗೆ ಬೀಗ ಹಾಕಿ ಬಹಳ ದಿನಗಳು ಬೇರೆ ಕಡೆಗೆ ತೆರಳಿದಾಗ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಹೆಚ್ಚಾಗಿ ಮನೆ ಹೊರಗಿನ ಬಾಗಿಲಿಗೆ ಬೀಗ ಹಾಕಿದ ಕಡೆ ಕಳ್ಳತನ ನಡೆದಿದ್ದು, ಬಾಗಿಲಿಗೆ ಇಂಟರ್ ಲಾಕ್ ಮಾಡುವುದು ಸೂಕ್ತ. ಮನೆ ಬಿಟ್ಟು ಹೊರ ಹೋದಾಗ ರಾತ್ರಿ ವೇಳೆ ವಿದ್ಯುತ್ ದೀಪದ ಬೆಳಕು ಇರಬೇಕು, ಮನೆಯಲ್ಲಿ ಅಮೂಲ್ಯವಾದ ವಸ್ತುಗಳನ್ನು ಇಡಬಾರದೆಂದು ಸಲಹೆ ನೀಡಿದರು.
ವಿದ್ಯಾಭ್ಯಾಸಕ್ಕಾಗಿ ವಿದೇಶದಿಂದ ಬಂದು ವೀಸಾ ಅವಧಿ ಮುಗಿದರೂ ನಗರದಲ್ಲಿಯೇ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಇಂತಹ ಅಕ್ರಮ ವಾಸಿಗಳ ಮಾಹಿತಿ ಕಲೆ ಹಾಕಲಾಗಿದ್ದು, ಅನೇಕರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಓರ್ವ ಮಹಿಳೆಗೆ ಶಿಕ್ಷೆ ಕೂಡ ಆಗಿದೆ. ನಗರದಲ್ಲಿ ಇಂತಹ ಇನ್ನೂ ಹಲವಾರು ಇರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ಶೀಘ್ರವೇ ಪತ್ತೆ ಹಚ್ಚಿ ಅವರ ದೇಶಕ್ಕೆ ಕಳುಹಿಸಲಾಗುವುದಲ್ಲದೇ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಒಂದೇ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿ ಹಣ ಪಡೆದು ವಂಚಿಸಿರುವ ಪ್ರಕರಣ ಸಂಬಂಧ ವಿದ್ಯಾನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ತಲಾ ಒಂದು ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಇನ್ನೂ ಸಾಕ್ಷಿಗಳ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಆ ನಂತರ ಅವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗುವುದು. ನೊಂದವರು ನೂರಾರು ಜನರಿದ್ದು, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದರು.
ಸಿಗರೇಟು ಕಳವಿನ ಸುಳಿವು : ವಿದ್ಯಾನಗರದ ಬಾಲಾಜಿ ಏಜೆನ್ಸಿಯಲ್ಲಿ ನಡೆದಿರುವ 18 ಲಕ್ಷ ರೂ. ಮೌಲ್ಯದ ಸಿಗರೇಟು ಕಳವು ಪ್ರಕರಣದ ಸುಳಿವು ದೊರೆತಿದ್ದು, ಶೀಘ್ರವೇ ಪ್ರಕರಣವನ್ನು ಪತ್ತೆ ಹಚ್ಚಲಾಗುವುದು. ಹಾವೇರಿ, ಚಿತ್ರದುರ್ಗ ಮತ್ತು ದಾವಣಗೆರೆ ಹೀಗೆ ಮೂರು ಜಿಲ್ಲೆಗಳಲ್ಲಿ ಇದೇ ಮಾದರಿಯಲ್ಲಿ ಕೃತ್ಯ ನಡೆದಿರುವುದು ತಿಳಿದು ಬಂದಿದೆ ಎಂದರು.
ಡಿ.4ಕ್ಕೆ ಅಪರಾಧ ತಡೆ ಮಾಸಾಚರಣೆ: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಾಡಿದ್ದು ದಿನಾಂಕ 4ರಂದು ಬೆಳಗ್ಗೆ 7ಕ್ಕೆ ಆರ್ ಟಿಓ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಗರದ ಜಯದೇವ ವೃತ್ತದಿಂದ ನಗರ ಪ್ರದಕ್ಷಿಣೆ ಮಾಡಿ ಸೈಕಲ್ ಜಾಥಾ ಮುಖೇನ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು.
2013 ರಲ್ಲಿ ಚಿನ್ನಿಕಟ್ಟೆಯಲ್ಲಿ 26 ನಾಡ ಬಂದೂಕುಗಳನ್ನು, 2016 ರಲ್ಲಿ 1 ಬಂದೂಕು ವಶಪಡಿಸಿಕೊಳ್ಳಲಾಗಿತ್ತು. ಈ ಭಾಗದಲ್ಲಿ ಈ ರೀತಿಯ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಇದನ್ನು ಮಟ್ಟ ಹಾಕಲಾಗುವುದು ಎಂದರು.
ನಗರದಲ್ಲಿ 175 ಮತ್ತು ಜಿಲ್ಲೆಯಲ್ಲಿ 740 ಜನ ಪರವಾನಗಿ ಹೊಂದಿರುವ ಪಿಸ್ತೂಲು, ರೈಫಲ್ಸ್, ಬಂದೂಕು ಹೊಂದಿದವರು ಇದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಈ ಎಲ್ಲ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದುವುದು ಮತ್ತು ಬಳಸುವುದು ತಪ್ಪು, ಕಾನೂನಿನಲ್ಲಿ ಇದಕ್ಕೆ ಕಠಿಣ ಶಿಕ್ಷೆ ಇದೆ. ಆತ್ಮ ರಕ್ಷಣೆಗೆ ಬಂದೂಕಿನ ಅಗತ್ಯ ಇರುವವರು ಜಿಲ್ಲಾಧಿಕಾರಿಗಳ ಬಳಿ ಪರವಾನಿಗೆ ಪಡೆದು ಬಳಸಬೇಕು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ರಾಜೀವ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಹೊನ್ನಾಳಿ ಸಿಪಿಐ ದೇವರಾಜ್ ಇದ್ದರು.